ಗಾಜಿಯಾಬಾದ್ ದಾಳಿ ಪೋಸ್ಟ್: ಟ್ವಿಟ್ಟರ್, ಪತ್ರಕರ್ತರ ವಿರುದ್ದ ರಾತ್ರೋರಾತ್ರಿ ಎಫ್ಐಆರ್
ಲಕ್ನೋ, ಜೂ.16: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ಆರೋಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್, ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಪತ್ರಕರ್ತರ ವಿರುದ್ದ ದೂರು ದಾಖಲು ಮಾಡಿದೆ. ಈ ಪ್ರಕರಣದ ದೂರುದಾರ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನರೇಶ್ ಸಿಂಗ್.
ರಾತ್ರಿ 11: 20 ಕ್ಕೆ ದಾಖಲಾದ ಎಫ್ಐಆರ್ನಲ್ಲಿ ಆಲ್ಟ್ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್, ಪತ್ರಕರ್ತ ರಾಣಾ ಅಯೂಬ್, ಮಾಧ್ಯಮ ಸಂಸ್ಥೆ ದಿ ವೈರ್, ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ಶಾಮಾ ಮೊಹಮ್ಮದ್, ಬರಹಗಾರ ಸಬಾ ನಖ್ವಿ ಮತ್ತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ನ ಐಎನ್ಸಿ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾದ ಹೆಸರು ಉಲ್ಲೇಖಿಸಲಾಗಿದೆ.
ಹೊಸ ಐಟಿ ನಿಯಮ ಪಾಲಿಸದೆ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್
ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ರಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 5 ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿಯಲ್ಲಿ ವಯಸ್ಸಾದ ಮುಸ್ಲಿಂ ವ್ಯಕ್ತಿಯು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದಾಗ ಆ ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ಮಂಗಳವಾರ ಹಲವಾರು ಸುದ್ದಿ ವರದಿಗಳ ಆಧಾರದ ಮೇಲೆ ದಿ ವೈರ್ ವರದಿಯೊಂದನ್ನು ಮಾಡಿತ್ತು.
ಅಬ್ದುಲ್ ಸಮದ್ ಎಂಬ 72 ವರ್ಷದ ವ್ಯಕ್ತಿ ಜೂನ್ 5 ರಂದು ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ದಾಳಿಕೋರರು ಅಬ್ದುಲ್ ಸಮದ್ನ ಗಡ್ಡವನ್ನು ಕತ್ತರಿಸುವುದು ಕೂಡಾ ಈ ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಮದ್ ಜೂನ್ 7 ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ''ಜೈ ಶ್ರೀ ರಾಮ್ ಎಂದು ಹೇಳುವಂತೆ ಹಲ್ಲೆಕೋರರು ಒತ್ತಾಯಿಸಿದ್ದಾರೆ,'' ಎಂದು ಈ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ''ಧರ್ಮದ ಕಾರಣದಿಂದಾಗಿ ತನ್ನ ಮೇಲೆ ಹಲ್ಲೆ ಮಾಡಲಾಗಿದೆ,'' ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರು ಆರೋಪಿಗಳಾದ ಪರ್ವೇಶ್ ಗುಜ್ಜರ್, ಕಲ್ಲು ಗುಜ್ಜರ್ ಮತ್ತು ಆದಿಲ್ನನ್ನು ಬಂಧಿಸಲಾಗಿದೆ. ದಿ ವೈರ್ ವರದಿ ಮಾಡಿದಂತೆ, ಆದಿಲ್ ಹಲ್ಲೆಗೊಳಗಾದ ಸಮದ್ರನ್ನು ರಕ್ಷಿಸಲು ದಾಳಿ ಸ್ಥಳಕ್ಕೆ ಹೋಗಿದ್ದರು ಎನ್ನಲಾಗಿದೆ. ''ಕೆಲವು ಜನರು ಆಟೋದಲ್ಲಿ ಬರುವಂತೆ ಕರೆದು ಬಳಿಕ ಬೇರೆಯೇ ಸ್ಥಳಕ್ಕೆ ಕರೆದೊಯ್ದು ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿ ಥಳಿಸಿದ್ದಾರೆ,'' ಎಂದು ವೈರಲ್ ವಿಡಿಯೋದಲ್ಲಿ ಅಬ್ದುಲ್ ಸಮದ್ ಹೇಳಿದ್ದಾರೆ.
ಆದರೆ ಪೊಲೀಸರು ''ಇದು ವೈಯಕ್ತಿಕ ವಿಚಾರವಾಗಿದೆ. ಈ ಹಲ್ಲೆಗೊಳಗಾದ ವ್ಯಕ್ತಿಯು ತವೀಜ್ (ತಾಯಿತ) ನೀಡಿದ್ದು ಇದರಿಂದಾಗಿ ತಮ್ಮ ಕುಟುಂಬ ಸದಸ್ಯರಿಗೆ ಗರ್ಭಪಾತವಾಗಿದೆ ಎಂದು ಭಾವಿಸಿ ಈ ಆರೋಪಿಗಳು ಹಲ್ಲೆ ನಡೆಸಿದ್ದಾರೆ'', ಎಂದು ತಿಳಿಸಿದ್ದಾರೆ.
ಗಾಜಿಯಾಬಾದ್ ಪೊಲೀಸರು ಈ ಸ್ಪಷ್ಟೀಕರಣ ನೀಡಿದ ಬಳಿಕವೂ ಟ್ವೀಟ್ಗಳನ್ನು ಅಳಿಸಿಲ್ಲ ಅಥವಾ ಟ್ವಿಟ್ಟರ್ ಅದನ್ನು ಅಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂಬ ಕಾರಣಕ್ಕೆ ಈಗ ಪ್ರಕರಣ ದಾಖಲಿಸಲಾಗಿದೆ.
''ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಹೊಂದಿರುವವರು ಸತ್ಯವನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಾರೆ ಮತ್ತು ಮಾಹಿತಿಯನ್ನು ನೀಡುವಾಗ ವಿವೇಚನೆಯನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆರೋಪಿತರಿಗೆ ಸಮಾಜದ ಬಗ್ಗೆ ಕರ್ತವ್ಯವಿದೆ. ಈ ಸಂದರ್ಭದಲ್ಲಿ, ಟ್ವೀಟ್ಗಳನ್ನು ಪರಿಶೀಲಿಸಲಾಗಿಲ್ಲ, ಸುಳ್ಳಿನ ಹೊರತಾಗಿಯೂ ಘಟನೆಯ ಕೋಮು ಬಣ್ಣವನ್ನು ನೀಡಿದೆ. ಈ ಟ್ವೀಟ್ಗಳನ್ನು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಉದ್ದೇಶದಿಂದ ಮಾಡಲಾಗಿದೆ. ಈ ಟ್ವೀಟ್ಗಳು ಉದ್ವಿಗ್ನತೆಯನ್ನು ಉಂಟುಮಾಡಿದೆ ಮಾತ್ರವಲ್ಲದೆ ಉತ್ತರ ಪ್ರದೇಶದ ನಿರ್ದಿಷ್ಟ ಸಮುದಾಯದಲ್ಲಿ ಭಯವನ್ನು ಉಂಟುಮಾಡಿದೆ,'' ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ. ಕಾನೂನು ರಕ್ಷಣೆ ಕಳೆದುಕೊಂಡ ನಂತರ ಎಲ್ಲಾ ಟ್ವೀಟ್ಗಳಿಗೆ ಟ್ವಿಟ್ಟರ್ ಸಂಸ್ಥೆಯೇ ಹೊಣೆಯಾಗಲಿದೆ.
(ಒನ್ಇಂಡಿಯಾ ಸುದ್ದಿ)