ಸೋನಿಯಾರ ರಾಯ್ ಬರೇಲಿಗೆ ಅರುಣ್ ಜೇಟ್ಲಿ ಕೊನೆ 'ಉಡುಗೊರೆ'
ಲಖನೌ, ಆಗಸ್ಟ್ 26: ದಿವಂಗತ ಅರುಣ್ ಜೇಟ್ಲಿ ಅವರು ಆಸ್ಪತ್ರೆಗೆ ದಾಖಲಾಗುವ ಒಂದು ವಾರಕ್ಕೆ ಮುನ್ನ ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ರಾಯ್ ಬರೇಲಿಗೆ 'ಉಡುಗೊರೆ' ನೀಡಿದ್ದಾರೆ. ತಮ್ಮ ಸಂಸದ ನಿಧಿಯಿಂದ ಇನ್ನೂರು ಸೋಲಾರ್ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲು ರಾಯ್ ಬರೇಲಿಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ.
ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್
ಸಂಸದರ ನಿಧಿ ಅಡಿಯಲ್ಲಿ ಸಂಸದರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ವಾರ್ಷಿಕವಾಗಿ ಐದು ಕೋಟಿ ತನಕ ತಮ್ಮ ಕ್ಷೇತ್ರದಲ್ಲಿ ಯೋಜನೆಗಳನ್ನು ಆರಂಭಿಸಬಹುದು. ಬಿಜೆಪಿ ನಾಯಕ ಹೀರೋ ಬಾಜಪೇಯಿ ಮಾತನಾಡಿ, ಆಗಸ್ಟ್ ಹದಿನೇಳರಂದು, ಅರುಣ್ ಜೇಟ್ಲಿ ಅವರು ನಿಧನರಾಗುವ ಮುಂಚೆಯೇ ರಾಯ್ ಬರೇಲಿ ಜಿಲ್ಲಾಡಳಿತಕ್ಕೆ ಶಿಫಾರಸನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಜುಲೈ ಮೂವತ್ತನೇ ತಾರೀಕು ಅರುಣ್ ಜೇಟ್ಲಿ ಅವರು ಪತ್ರ ಬರೆದಿದ್ದಾರೆ. ರಾಯ್ ಬರೇಲಿಯ ಡಿಸಿ ನೇಹಾ ಶರ್ಮಾ ಅವರು ಶಿಫಾರಸು ಪತ್ರ ತಲುಪಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಅಂದ ಹಾಗೆ, ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ರಾಯ್ ಬರೇಲಿಯನ್ನು ಬಿಜೆಪಿಗೆ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಅರುಣ್ ಜೇಟ್ಲಿ ಇಂಥ ನಿರ್ಧಾರ ಮಾಡಿದ್ದಾಗಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಹೇಳಿದ್ದರು. ಅಂದ ಹಾಗೆ ಈ ಹಿಂದೆ ಕೂಡ ಅದೇ ರೀತಿ ಸಂಸದರ ನಿಧಿ ಬಿಡುಗಡೆ ಮಾಡಿದ್ದರು.