ಅಯೋಧ್ಯೆ ದೇವಾಲಯ ಬಳಿ ಭೂ ವಹಿವಾಟು: ಯುಪಿ ಸರ್ಕಾರದಿಂದ ತನಿಖೆಗೆ ಆದೇಶ
ಲಕ್ನೋ, ಡಿಸೆಂಬರ್ 23: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರವಾಗಿ ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಅಯೋಧ್ಯೆಯ ಸಮೀಪದಲ್ಲಿ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಂಬಂಧಿಕರು ಭೂಮಿಯನ್ನು ಖರೀದಿಸಿದ್ದಾರೆ ಎಂಬ ತನಿಖಾ ವರದಿಯನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟ ಮಾಡಿದ್ದು, ಹಲವಾರು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಈ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಚಾರದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ಹಾಗೆಯೇ ಈ ಬಗ್ಗೆ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ಮನೋಜ್ ಕುಮಾರ್ ಸಿಂಗ್, "ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ 5-7 ದಿನಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಈ ವಿಚಾರದಲ್ಲಿ ವರದಿಯನ್ನು ಸಲ್ಲಿಕೆ ಮಾಡುವಂತೆ ಹೇಳಿದ್ದಾರೆ. ಪತ್ರಿಕೆ ಮಾಡಿರುವ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಆದಿತ್ಯನಾಥ್ ನಿರ್ದೇಶನದ ಮೇರೆಗೆ ತನಿಖೆಗೆ ಆದೇಶ ನೀಡಲಾಗಿದೆ. ವಿಶೇಷ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರಿಗೆ ತನಿಖೆ ನಡೆಸಲು ತಿಳಿಸಲಾಗಿದೆ," ಎಂದು ತಿಳಿಸಿದ್ದಾರೆ.
Explained: ಅಯೋಧ್ಯೆ ಭೂಮಿ ಅಧಿಕಾರಿಗಳ ಸಂಬಂಧಿಕರಿಂದ ಖರೀದಿ: ಯಾರ ಬಳಿ ಎಷ್ಟಿದೆ ಭೂಮಿ?
ಕಂದಾಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಧೇ ಶ್ಯಾಮ್ ಮಿಶ್ರಾ ಅವರಿಗೆ ತನಿಖೆ ನಡೆಸಲು ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 2020 ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆ ಮಾಡಲಾಗಿದ್ದು ಈವರೆಗೆ ಸುಮಾರು 70 ಎಕರೆಗಳನ್ನು ಟ್ರಸ್ಟ್ ಸ್ವಾಧೀನಕ್ಕೆ ಪಡೆದುಕೊಂಡಿದೆ. ಆದರೆ ಈ ನಡುವೆ ಅಯೋಧ್ಯೆ ಯೋಜನೆಯ ಮೂಲಕ ಖಾಸಗಿ ಖರೀದಿದಾರರು ಭಾರೀ ಲಾಭವನ್ನು ಪಡೆಯುತ್ತಿದ್ದಾರೆ. ಅಯೋಧ್ಯೆ ಸಮೀಪದಲ್ಲಿ ಭೂಮಿಯನ್ನು ಖರೀದಿ ಮಾಡಿದವರಲ್ಲಿ ಸ್ಥಳೀಯ ಶಾಸಕರು, ಅಯೋಧ್ಯೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ನಿಕಟ ಸಂಬಂಧಿಗಳು ಮತ್ತು ಸ್ಥಳೀಯ ಕಂದಾಯ ಅಧಿಕಾರಿಗಳು ಕೂಡಾ ಸೇರಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ತನಿಖಾ ವರದಿ ಹೇಳಿದೆ.
ಚುನಾಯಿತರು, ಅಧಿಕಾರಿಗಳ ಸಂಬಂಧಿಕರಿಂದ ಭೂಮಿ ಖರೀದಿ
ಶಾಸಕರು, ಮೇಯರ್ಗಳು ಹಾಗೂ ರಾಜ್ಯ ಒಬಿಸಿ ಕಮಿಷನ್ನ ಸದಸ್ಯರುಗಳು ತಮ್ಮ ಹೆಸರಿನಲ್ಲೇ ಡಿವಿಜನ್ ಕಮಿಷನ್, ಸಬ್ ಡಿವಿಷನ್ ಮೆಜಿಸ್ಟ್ರೀಸ್, ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಸರ್ಕಲ್ ಆಫಿಸರ್ ಆಫ್ ಪೊಲೀಸ್, ಸ್ಟೇಟ್ ಇನ್ಫಾರ್ಮೆಷನ್ ಕಮಿಷನರ್ಗಳ ಸಂಬಂಧಿಕರಿಗೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ಎಂದು ಹೇಳಿರುವ ತನಿಖಾ ವರದಿ ಇಂತಹ 14 ಪ್ರಕರಣಗಳು ಬಯಲಿಗೆ ತಂದಿದೆ.
ಒಂದೆಡೆ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ (ಎಂಆರ್ವಿಟಿ) ದಲಿತ ಗ್ರಾಮಸ್ಥರಿಂದ ಭೂಮಿಯನ್ನು ಖರೀದಿಸುವಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ನಡುವೆ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ನಿಂದಲೇ ಹಲವಾರು ಅಧಿಕಾರಿಗಳು, ಅವರ ಸಂಬಂಧಿಕರು ಭೂಮಿಯನ್ನು ಖರೀದಿ ಮಾಡಿದ್ದಾರೆ.
2019 ರಿಂದ ಅಯೋಧ್ಯೆ ವಿಭಾಗೀಯ ಆಯುಕ್ತ ಎಂಪಿ ಅಗರ್ವಾಲ್, ಜುಲೈ 20, 2018 ಮತ್ತು ಸೆಪ್ಟೆಂಬರ್ 10, 2021 ರ ನಡುವೆ ಅಯೋಧ್ಯೆಯ ಮುಖ್ಯ ಕಂದಾಯ ಅಧಿಕಾರಿಯಾಗಿದ್ದ ಪುರುಷೋತ್ತಮ್ ದಾಸ್ ಗುಪ್ತಾ, ಜುಲೈ 26, 2020 ಮತ್ತು ಮಾರ್ಚ್ 30, 2021 ರ ನಡುವೆ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಆಗಿದ್ದ ದೀಪಕ್ ಕುಮಾರ್ರ ಸಂಬಂಧಿಕರು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ನಿಂದ ಈ ಭೂಮಿಯನ್ನು ಖರೀದಿ ಮಾಡಿದ್ದಾರೆ.2019 ರಿಂದ ಅಯೋಧ್ಯೆ ವಿಭಾಗೀಯ ಆಯುಕ್ತ ಎಂಪಿ ಅಗರ್ವಾಲ್, ಜುಲೈ 20, 2018 ಮತ್ತು ಸೆಪ್ಟೆಂಬರ್ 10, 2021 ರ ನಡುವೆ ಅಯೋಧ್ಯೆಯ ಮುಖ್ಯ ಕಂದಾಯ ಅಧಿಕಾರಿಯಾಗಿದ್ದ ಪುರುಷೋತ್ತಮ್ ದಾಸ್ ಗುಪ್ತಾ, ಜುಲೈ 26, 2020 ಮತ್ತು ಮಾರ್ಚ್ 30, 2021 ರ ನಡುವೆ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಆಗಿದ್ದ ದೀಪಕ್ ಕುಮಾರ್ರ ಸಂಬಂಧಿಕರು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ನಿಂದ ಈ ಭೂಮಿಯನ್ನು ಖರೀದಿ ಮಾಡಿದ್ದಾರೆ.
ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ ಒಂದು ಡಜನ್ ದಲಿತ ಕುಟುಂಬಗಳಿಂದ ಸುಮಾರು 52,000 ಚದರ ಮೀ ಭೂಮಿಯನ್ನುಕೇವಲ 6.38 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಈ ಭೂಮಿಯ ಪ್ರಸ್ತುತ ದರವು ರೂ 4.25 ಕೋಟಿಯಿಂದ ರೂ 9.58 ಕೋಟಿ ರೂಪಾಯಿ ಆಗಿದೆ. (ಒನ್ಇಂಡಿಯಾ ಸುದ್ದಿ)
Recommended Video