ಲಖಿಂಪುರ ಹಿಂಸಾಚಾರ: ಆಶಿಶ್ ಮಿಶ್ರಾಗೆ ಆನಾರೋಗ್ಯ, ಆಸ್ಪತ್ರೆಗೆ ಸ್ಥಳಾಂತರ
ಲಕ್ನೋ, ಅಕ್ಟೋಬರ್ 24: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಆರೋಪದ ಮೇಲೆ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಡೆಂಗ್ಯೂ ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ಆಶಿಶ್ ಮಿಶ್ರಾ ಅವರು ಡೆಂಗ್ಯೂ ರೋಗ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೆ ಅವರ ಮಾದರಿಯನ್ನು ಶುಕ್ರವಾರ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಆಶಿಶ್ ಮಿಶ್ರಾ ಅವರಿಗೆ ಡೆಂಗ್ಯೂ ಇರುವುದು ಖಚಿತವಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ," ಎಂದು ಲಖಿಂಪುರ್ ಖೇರಿ ಜಿಲ್ಲಾ ಜೈಲಿನ ಅಧೀಕ್ಷಕ ಪಿಪಿ ಸಿಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಿದ ನಂತರ ಮೊದಲು ಅಕ್ಟೋಬರ್ 11 ರಂದು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ರಿಮಾಂಡ್ ಅವಧಿ ಅಕ್ಟೋಬರ್ 12 ರಿಂದ ಅಕ್ಟೋಬರ್ 15 ಕ್ಕೆ ಕೊನೆಗೊಳ್ಳುತ್ತದೆ. ಮೊದಲ ರಿಮಾಂಡ್ ಅವಧಿ ಮುಗಿದ ನಂತರ ಆತನನ್ನು ಲಖಿಂಪುರ್ ಜೈಲಿಗೆ ಕಳುಹಿಸಲಾಯಿತು.
ಘಟನೆ ಏನು?
ಅಕ್ಟೋಬರ್ 3 ರಂದು ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತ ಸೇರಿದಂತೆ ಒಟ್ಟು 8 ಜನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತ ಆಶಿಶ್ ಮಿಶ್ರಾ ಬಂಧನದಲ್ಲಿದ್ದಾರೆ. ಶಾಂತಿಯುತ ರೈತರ ಪ್ರತಿಭಟನಾ ಗುಂಪಿನ ಮೇಲೆ ಶರವೇಗದಲ್ಲಿ ಓಡಿಸಲಾದ ವಾಹನದಲ್ಲಿ ಆಶಿಶ್ ಮಿಶ್ರಾ ಇದ್ದರೆಂದು ಆರೋಪಿಸಲಾಗಿದೆ. ತಕ್ಷಣಕ್ಕೆ ಆಶಿಶ್ ಮಿಶ್ರಾ ಅವರ ಬಂಧನಕ್ಕೆ ರೈತರು ಆಗ್ರಹಿಸಿ ಪ್ರತಿಭಟಿಸಿದರೂ ಆದರೆ ಘಟನೆ ನಡೆದು ಐದು ದಿನಗಳ ನಂತರ ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು.
ನ್ಯಾಯಕ್ಕಾಗಿ ರೈತರು ಪಟ್ಟು
ರೈತರ ಪ್ರತಿಭಟನೆ ಮಧ್ಯೆ ಹರಿದ ವಾಹನದ ಡ್ರೈವಿಂಗ್ ಸೀಟ್ನಲ್ಲಿ ಸಚಿವರ ಮಗ ಇದ್ದರು ಎಂದು ಮೃತ ರೈತರ ಕುಟುಂಬಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ನಡುವೆ ಪ್ರತಿಭಟನಾನಿರತ ನಾಲ್ವರು ರೈತರ ಸಾವಿಗೆ ಕಾರಣರಾದ ಆಶಿಶ್ ಮಿಶ್ರಾ ಅವರನ್ನು ಬಂಧನಕ್ಕೆ ವಿರೋಧ ಪಕ್ಷಗಳ ಒತ್ತಡ ಹೆಚ್ಚಾಯಿತು. ಜೊತೆಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡ ನಂತರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆದು ಬಂಧಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.
ಆರೋಪ ತಳ್ಳಿ ಹಾಕಿದ ಮಿಶ್ರಾ
ಆಶಿಶ್ ಮಿಶ್ರಾ ಕೊಲೆ ನಡೆದಾಗ ತಾನು ಅಪರಾಧ ಸ್ಥಳದಲ್ಲಿ ಇದ್ದೆನೆಂಬ ಆರೋಪವನ್ನು ನಿರಾಕರಿಸಿದ್ದಾರೆ. ತಂದೆ ಅಜಯ್ ಮಿಶ್ರಾ ಕೂಡ ಆಶಿಶ್ ಮಿಶ್ರಾ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದಿದ್ದಾರೆ. ಘಟನೆ ವೇಳೆ ಆಶಿಶ್ ಸ್ಥಳದಲ್ಲಿರಲಿಲ್ಲ. ದಿನವಿಡೀ ಹಳ್ಳಿಯಲ್ಲಿದ್ದನು ಎಂದು ಹೇಳಿದ್ದಾರೆ.
ರೈಲು ತಡೆ ಪ್ರತಿಭಟನೆ
ಘಟನೆ ಬಳಿಕ ಕೇಂದ್ರ ಸಚಿವ ಅಜಯ್ ಮಿಶ್ರಾ ಘಟನೆಯ ಹೊಣೆ ಹೊತ್ತುಕೊಳ್ಳಬೇಕು ಜೊತೆಗೆ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿಸ ರೈತರು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದರು. ಅಕ್ಟೋಬರ್ 18 ರಂದು ರೈಲು ತಡೆ ಮೂಲಕ ಪ್ರತಿಭಟಿಸಿದರು. ಘಟನೆಯನ್ನು ಖಂಡಿಸಿ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎನ್ನ್ಉವ ಒತ್ತಾಯಗಳು ಕೇಳಿ ಬಂದಿದೆ.
ಪಂಜಾಬ್ ಹೊರತುಪಡಿಸಿ ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲೂ ರೈಲು ತಡೆ ಆಂದೋಲನ ಬಹುತೇಕ ಯಶಸ್ವಿಯಾಗಿದೆ. ಹರಿಯಾಣದಲ್ಲೂ ಸಾವಿರಾರು ಸಂಖ್ಯೆಯಲ್ಲಿ ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸಿದ ರೈತರು, ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿದರು.