ಲಖಿಂಪುರ ಹಿಂಸಾಚಾರ: ಆರೋಪಿಗಳಿಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಲಂಖಿಪುರ ಮೇ 9: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ನೀಡಲು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಸೋಮವಾರ ನಿರಾಕರಿಸಿದೆ. ರೈತರಿಗೆ ಬೆದರಿಕೆ ನೀಡಿದ ಆರೋಪದ ಮೇಲೆ ಆರೋಪಿಗಳ ಜಾಮೀನನ್ನು ಹೈಕೋರ್ಟ್ ನಿರಾಕರಿಸಿದೆ.
ಘಟನೆ ನಡೆದ ಕೆಲವು ದಿನಗಳ ಹಿಂದೆ ರೈತರಿಗೆ ಬೆದರಿಕೆಯೊಡ್ಡಬಾರದಿತ್ತು ಎಂದು ನಾಲ್ವರು ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ತಿರಸ್ಕರಿಸಿದೆ. ಸಚಿವ್ ಅಜಯ್ ಮಿಶ್ರಾ ರೈತರಿಗೆ ಬೆದರಿಕೆ ಹಾಕದೇ ಇದ್ದರೆ ಹತ್ಯೆಗಳು ನಡೆಯುತ್ತಿರಲಿಲ್ಲ ಎಂದು ಉತ್ತರಪ್ರದೇಶದ ಪೊಲೀಸ್ ವಿಶೇಷ ತನಿಖೆ ತಂಡ ಆರೋಪ ಪಟ್ಟಿಯಲ್ಲಿ ತಿಳಿಸಿದ್ದನ್ನು ಹೈಕೋರ್ಟ್ ಉಲ್ಲೇಖಿಸಿದೆ.
ಲಖಿಂಪುರ ಪ್ರಕರಣ: ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು
ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಏಪ್ರಿಲ್ 25 ರಂದು ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಮಿಶ್ರಾ ಲಖಿಂಪುರ ಖೇರಿಯ ಸ್ಥಳೀಯ ನ್ಯಾಯಾಲಯದಲ್ಲಿ ಶರಣಾದರು. ಅವರ ಜಾಮೀನು ರದ್ದುಗೊಳಿಸುವಾಗ, ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಹೈಕೋರ್ಟ್ಗೆ ಕೇಳಿತ್ತು. ಎಲ್ಲ ಬೆಳವಣಿಗೆ ನಂತರ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಫೆಬ್ರವರಿ 10ಕ್ಕೆ ಆಶಿಶ್ ಮಿಶ್ರಾಗೆ ನಿಯಮಿತ ಜಾಮೀನು ನೀಡಿತು.
ನಾಲ್ವರು ರೈತರು ಸಾವು
ಕಳೆದ ವರ್ಷ ಅಕ್ಟೋಬರ್ 3 ರಂದು, ಲಖಿಂಪುರ ಖೇರಿಯ ಟಿಕುನಿಯಾದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ರೈತರು ನಡೆಸುತ್ತಿದ್ದರು. ಈ ವೇಳೆ ರೈತರ ಗುಂಪಿನ ಮೇಲೆ ವೇಗವಾಗಿ ಬಂದ ಎಸ್ಯುವಿ ಕಾರು ರೈತರಿಗೆ ಡಿಕ್ಕಿ ಹೊಡೆದು ಅವರ ಮೇಲೆ ಹರಿದು ಹೋಗಿತ್ತು. ಈ ಸಮಯದಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಇತರ ನಾಲ್ವರು ಸಹ ಸಾವನ್ನಪ್ಪಿದ್ದಾರೆ. ನಾಲ್ವರಲ್ಲಿ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಕೊಲ್ಲಲ್ಪಟ್ಟಿದ್ದಾರೆ. ಯುಪಿ ಪೊಲೀಸರು ಮರುದಿನ ಆಶಿಶ್ ಮಿಶ್ರಾ ಮತ್ತು ಇತರ 12 ಮಂದಿಯನ್ನು ಕೊಲೆ ಆರೋಪಿಗಳೆಂದು ಹೆಸರಿಸಿ ಎಫ್ಐಆರ್ ದಾಖಲಿಸಿದ್ದರು. ಆದರೆ ಯಾರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಂಡನೆಯ ನಂತರ ಕೇಂದ್ರ ಸಚಿವರ ಮಗನನ್ನು ಘಟನೆ ನಡೆದು ಒಂದು ವಾರದ ನಂತರ ಬಂಧಿಸಲಾಯಿತು.
ಎಸ್ಐಟಿ ವರದಿಯಲ್ಲೇನಿದೆ?
ಕಳೆದ ವರ್ಷ ಅಕ್ಟೋಬರ್ 3 ರಂದು ನಡೆದ ಲಖಿಂಪುರ ಖೇರಿ ಪ್ರಕರಣದಲ್ಲಿ ಎಸ್ಐಟಿ ಸುಮಾರು ಐದು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಕರೆಯಲಾಗಿದೆ. ಅಷ್ಟೇ ಅಲ್ಲ, ಅಜಯ್ ಮಿಶ್ರಾ ಅವರ ಮತ್ತೊಬ್ಬ ಆಪ್ತ ವೀರೇಂದ್ರ ಶುಕ್ಲಾ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಲಖಿಂಪುರ ಹಿಂಸಾಚಾರದಲ್ಲಿ ಆಶಿಶ್ ಮಿಶ್ರಾ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿರುವುದನ್ನು ಎಸ್ಐಟಿ ತನ್ನ ತನಿಖೆಯಲ್ಲಿ ದೃಢಪಡಿಸಿತ್ತು. ಆಶಿಶ್ ಮಿಶ್ರಾ ಅವರ ರಿವಾಲ್ವರ್ ಮತ್ತು ರೈಫಲ್ನಿಂದಲೂ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿತ್ತು. ಚಾರ್ಜ್ಶೀಟ್ನಲ್ಲಿ, ಆಶಿಶ್ ಮಿಶ್ರಾ ಮತ್ತು ಅಂಕಿತ್ ದಾಸ್ ಅವರ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿರುವುದಾಗಿ ಎಸ್ಐಟಿ ತಿಳಿಸಿದೆ.
ಮತ್ತೆ ಬಿಜೆಗೆ ಜಯ
ಇದೇ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಯಿತು. ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಈ ಪ್ರಕರಣದಿಂದಾಗಿ ಬಿಜೆಪಿ ದೊಡ್ಡ ಬೀಳುವ ಸಾಧ್ಯತೆ ಇತ್ತು. ಇದೇ ವೇಳೆ ರೈತ ಸಂಘಟನೆಗಳು ಲಖಿಂಪುರಖೇರಿ ಪ್ರಕರಣದಲ್ಲಿ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ ಸಚಿವರ ಮೇಲೆ ಕ್ರಮ ಕೈಗೊಳ್ಳಲಾಗಲಿಲ್ಲ. ಹೀಗಾಗಿ ಬಿಜೆಪಿಗೆ ರೈತ ಮತಗಳು ದೊಡ್ಡ ಸವಾಲಾಗಿ ಪರಿಣಮಿಸಿದ್ದವು. ಈ ಎಲ್ಲಾ ಅನುಮಾನಗಳ ಮಧ್ಯೆಯೂ ಬಿಜೆಪಿ ಬಹುಮತದೊಂದಿಗೆ ಉತ್ತರಪ್ರದೇಶದಲ್ಲಿ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರದ ಗದ್ದುಗೆಗೇರಿತು.
ಕೇಂದ್ರ ಸಚಿವರ ವಿರುದ್ಧ ಇಲ್ಲ ಯಾವುದೇ ಕ್ರಮ
ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ನಂತರ ಕೇಂದ್ರ ಸರ್ಕಾರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ಬೆಳೆಗೆ ನಿಗಧಿತ ಬೆಲೆ ಬಗ್ಗೆ ನಿರ್ಲಕ್ಷ್ಯ ತೋರಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಬಿಜೆಪಿ ಸರ್ಕಾರ ರೈತರಿಗೆ ಮೋಸ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದರೊಂದಿಗೆ ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಲಿ, ಅಜಯ್ ಮಿಶ್ರಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಹೀಗಾಗಿ ರೈತರ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿದೆ. ಇದರ ಪರಿಣಾಮ ಬಿಜೆಪಿ ಯುಪಿ ಚುನಾವಣೆಯಲ್ಲಿ ಎದುರಿಸಬೇಕಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಬಿಜೆಪಿ ಭಾರೀ ಬಹುಮತದೊಂದಿಗೆ ಎಸ್ಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ.