ಲಖಿಂಪುರ್ ಹಿಂಸಾಚಾರ: ಆಶಿಶ್ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ
ಲಕ್ನೋ, ಅಕ್ಟೋಬರ್ 11: ಲಖಿಂಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಶಿಶ್ ಮಿಶ್ರಾ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಕ್ರೈಮ್ ಬ್ರ್ಯಾಂಚ್ ಕಚೇರಿಯಲ್ಲಿ ವೈದ್ಯಕೀಯ ತಂಡ ತಪಾಸಣೆ ನಡೆಸಿ ನಂತರ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಕರೆದೊಯ್ಯಲಾಯಿತು. ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್ ಪಿ ಯಾದವ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಲಖಿಂಪುರ ಖೇರಿ ಗಲಭೆ; ಕೇಂದ್ರ ಗೃಹ ಸಚಿವರ ಪುತ್ರನ ಬಂಧನ
ಕಳೆದ ಅಕ್ಟೋಬರ್ 3ರಂದು ಲಖಿಂಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರ ಭೇಟಿಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಹರಿಸಿದ ವಾಹನಗಳ ಪೈಕಿ ಒಂದು ಕಾರಿನಲ್ಲಿ ಆಶಿಶ್ ಮಿಶ್ರಾ ಕೂಡ ಇದ್ದರು ಎಂಬುದು ಪ್ರತಿಭಟನಾಕಾರರು ಮತ್ತು ಪ್ರತಿಪಕ್ಷಗಳ ಆರೋಪವಾಗಿದೆ.
ಸ್ಥಳೀಯ ಜನರಲ್ಲಿ ಮೋನು ಬೈಯ ಎಂದು ಹೆಸರಾಗಿರುವ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ರಾತ್ರಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಕಳೆದರು. ಎರಡನೇ ಬಾರಿ ಸಮನ್ಸ್ ಹೊರಡಿಸಿದ ನಂತರ ವಿಶೇಷ ತನಿಖಾ ತಂಡದ ಮುಂದೆ ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ಹಾಜರಾದರು. ಮೊದಲ ಬಾರಿ ಕರೆದಾಗ ಬಂದಿರಲಿಲ್ಲ. ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ವಿಶೇಷ ತನಿಖಾ ತಂಡ ಮತ್ತು ಅಪರಾಧ ವಿಭಾಗದ ಪೊಲೀಸರು ಸತತ ತನಿಖೆ ನಡೆಸಿ ಬಂಧನಕ್ಕೊಳಪಡಿಸಿದರು.
ಸುಮಾರು 35 ವರ್ಷದ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಖೇರಿ ಪ್ರಾಂತ್ಯದಲ್ಲಿ ತಮ್ಮ ತಂದೆಯ ರಾಜಕೀಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ನಂತರ ನಡೆದ ಹಿಂಸಾಚಾರ, ಆಕ್ರೋಶ-ಪ್ರತಿಭಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಚಾಲಕರನ್ನು ಆಕ್ರೋಶಭರಿತ ರೈತರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಅಸುನೀಗಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ತೀವ್ರ ತೊಂದರೆಯಾಗಿದೆ.
ಅತೀ ವೇಗದಲ್ಲಿದ್ದ ಮಹೀಂದ್ರ ಜೀಪನ್ನು ಕಪ್ಪು ಬಾವುಟ ಹಿಡಿದು ನಡೆದುಹೋಗ್ತಿದ್ದ ರೈತರ ಮೇಲೆ ಹತ್ತಿಸಲಾಗಿತ್ತು. ಆ ಜೀಪ್ ಹಿಂದೆ ಇನ್ನೊಂದು ಕಾರು ಕೂಡಾ ಅತೀ ವೇಗದಲ್ಲಿ ನುಗ್ಗಿದೆ. ಜೀಪ್ ಹತ್ತಿಸಿದ ಪರಿಣಾಮ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆ ಜೀಪ್ನಿಂದ ಇಳಿದು ಓಡಿಹೋಗ್ತಿರುವ ದೃಶ್ಯವೂ ಲಭ್ಯ ಆಗಿತ್ತು.
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಪೊಲೀಸರು ಯಾವ ಪ್ರಶ್ನೆ ಕೇಳಿದರೂ, 'ನಾನು ಅಲ್ಲಿರಲಿಲ್ಲ' ಎಂಬ ಎರಡು ಪದಗಳ ಉತ್ತರವನ್ನೇ ನೀಡಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.
ಶನಿವಾರ ಸುಮಾರು 12 ಗಂಟೆಗಳ ಕಾಲ ಪೊಲೀಸರು ಲಖಿಂಪುರ್ ಖೇರಿ ಹಿಂಸಾಚಾರ ಆರೋಪಿ ಆಶಿಶ್ನನ್ನು ವಿಚಾರಣೆಗೆ ಒಳಪಡಿಸಿದರು. ಎಸ್ಯುವಿ ಚಾಲನೆ ಮಾಡುತ್ತಿದ್ದವರು ಯಾರು, ಅದರಲ್ಲಿ ಎಷ್ಟು ಜನರಿದ್ದರು, ಬೆಂಗಾವಲು ಪಡೆಯಲ್ಲಿ ಎಷ್ಟು ವಾಹನಗಳಿದ್ದವು ಇತ್ಯಾದಿ ಪ್ರಶ್ನೆ ಕೇಳಿದರೂ ಆತ ನೀಡುತ್ತಿದ್ದುದು, 'ನಾನು ಅಲ್ಲಿರಲಿಲ್ಲ' ಎಂಬ ಒಂದೇ ಉತ್ತರವಾಗಿತ್ತು.
ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಆತ 'ನೀವು ಲಕ್ಷ ಸಲ ಕೇಳಿದರೂ ನನ್ನ ಉತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಕಿರುಚಿದ್ದಾನೆ. ಇನ್ನು ಈತನನ್ನು ಪ್ರಶ್ನೆ ಮಾಡುತ್ತ ಕೂರುವುದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು, ತನಿಖೆಗೆ ಅಸಹಕಾರ ಮತ್ತು ಹಾರಿಕೆ ಉತ್ತರ ನೀಡಿದ ಕಾರಣ ಕೊಟ್ಟು ತಡರಾತ್ರಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪಾಲ್ಗೊಳ್ಳಲಿದ್ದ ಕಾರ್ಯಕ್ರಮವೊಂದಕ್ಕೆ ಮುತ್ತಿಗೆ ಹಾಕಲು ಆಗಮಿಸಿದ್ದರು.
ಈ ಹಿನ್ನೆಲೆ ಟಿಕೋನಿಯಾ ಬಳಿ ರಸ್ತೆ ತಡೆದು ಧರಣಿ ನಡೆಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಖಾಸಗಿ ಹಾಗೂ ಬೆಂಗಾವಲು ಪಡೆ ವಾಹನಗಳು ಪ್ರತಿಭಟನಾಕಾರರ ಮೇಲೆ ಹರಿದು ಹೋಗಿ ಅನಾಹುತ ಉಂಟಾಗಿತ್ತು. ಪ್ರತಿಭಟನಾಕಾರ ಮೇಲೆ ನುಗ್ಗಿದ ಕಾರನ್ನು ಸಚಿವರ ಪುತ್ರ ಆಶಿಶ್ ಚಾಲನೆ ಮಾಡುತ್ತಿದ್ದ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಲಖಿಂಪುರ ಹಿಂಸಾಚಾರದ ವಿಚಾರದಲ್ಲಿ ಕಟು ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಕಾರ್ಯಕಾರಿಣಿಯಿಂದ ಹೊರದೂಡಲ್ಪಟ್ಟಿರುವ ಸಂಸದ ವರುಣ್ ಗಾಂಧಿ, ಹಿಂಸಾಚಾರ ಪ್ರಕರಣಕ್ಕೆ ಕೋಮು ಬಣ್ಣ ಬಳಿಯದಿರುವಂತೆ ಎಚ್ಚರಿಕೆ ನೀಡಿದ್ದಾರೆ.