ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿದ ವಿಡಿಯೋ ಶೇರ್ ಮಾಡಿದ ಕಾಂಗ್ರೆಸ್
ಲಕ್ನೋ, ಅಕ್ಟೋಬರ್ 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಾ, ಮೆರವಣಿಗೆಯಲ್ಲಿ ಘೋಷಣೆಯನ್ನು ಕೂಗುತ್ತಾ ಹೋಗುತ್ತಿದ್ದ ರೈತರ ಮೇಲೆ ವಾಹನವೊಂದು ಹರಿದು ಹೋದ ಘಟನೆಯ ವಿಡಿಯೋವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ರೈತರು ಸಾವನ್ನಪ್ಪಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಾಗಿದೆ. ಇದರ ನಿಜವಾಗಿ ಅಲ್ಲಿನ ಘಟನೆಯೇ ಎಂಬ ಬಗ್ಗೆ ಯಾವುದೇ ಆಧಾರಗಳು ದೊರೆತಿಲ್ಲ. ಇನ್ನು ವಿಡಿಯೋದಲ್ಲಿ ಯಾರು ಚಾಲಕರು ಎಂಬುವುದು ಸ್ಪಷ್ಟವಾಗಿಲ್ಲ.
'ಯುಪಿ ಹಿಂಸಾಚಾರ ಯೋಗಿ ಸರ್ಕಾರಕ್ಕೆ ಅಂತ್ಯ ಹಾಡಲಿದೆ': ಕಾಂಗ್ರೆಸ್ ನಾಯಕ
ವಿಡಿಯೋವು ಸುಮಾರು 25 ಸೆಂಕೆಡ್ನದ್ದು ಆಗಿದೆ. ವಾಹನವು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೋಗುತ್ತಿದ್ದ ರೈತರ ಮೇಲೆ ಹರಿದು ಹೋಗಿದ್ದು, ಈ ಸಂದರ್ಭದಲ್ಲಿ ರೈತರು ನೆಲದ ಮೇಲೆ ಬಿದ್ದಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಇನ್ನು ಈ ಸಂದರ್ಭದಲ್ಲಿ ಉಳಿದ ರೈತರು ಈ ವಾಹನ ಚಲಿಸುವ ಹಾದಿಯಿಂದ ತಪ್ಪಿಸಿಕೊಳ್ಳಲು ತಡಕಾಡಿದ್ದಾರೆ. ಇನ್ನೊಂದು ವಾಹನ ಸೈರನ್ ಒಂದನ್ನು ಹಾಕುತ್ತಾ ಸಾಗಿದ್ದು, ಇದು ಎಸ್ಯುವಿ ಇದ್ದಂತೆ ಕಂಡು ಬಂದಿದೆ.
ಈ ಹಿಂದೆ ರೈತರು ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡುತ್ತಾ ನಾವು ಮೆರವಣಿಗೆಯಲ್ಲಿ ಸಾಗುತ್ತಿದ್ದ ಸಂದರ್ಭ ವಾಹನವು ಹಿಂಬದಿಯಿಂದ ನಮ್ಮ ಮೇಲೆಯೇ ಸಾಗಿದೆ ಎಂದು ಹೇಳಿದ್ದರು. ಈ ವಿಡಿಯೋವು ಕೂಡಾ ಅದನ್ನೇ ಹೋಲಿಕೆ ಮಾಡುತ್ತದೆ. ಇನ್ನು ಈ ಘಟನೆಯ ಪ್ರದೇಶದ ಇತರೆ ವಿಡಿಯೋಗಳಿಗೂ ಈ ವಿಡಿಯೋಗೂ ಹೊಂದಾಣಿಕೆಯೂ ಇದೆ ಎಂದು ಹೇಳಲಾಗಿದೆ.
ಇನ್ನು ಈ ವಿಡಿಯೋವನ್ನು ಕಾಂಗ್ರೆಸ್ ಕೂಡಾ ಶೇರ್ ಮಾಡಿದೆ. "ಲಖಿಂಪುರ ಖೇರಿಯ ತೀವ್ರ ಆಘಾತಕಾರಿ ದೃಶ್ಯ. ಕೇಂದ್ರ ಸರ್ಕಾರದ ಮೌನವೂ ಅವರನ್ನೂ ಈ ಕೃತ್ಯದಲ್ಲಿ ಭಾಗಿಯಾಗಿಸುತ್ತಿದೆ," ಎಂದು ದೂರಿದೆ.
ಲಖಿಂಪುರ ಖೇರಿ ಘಟನೆ 'ಸರ್ಕಾರಿ ಪ್ರಾಯೋಜಿತ ಹಿಂಸಾಚಾರ': ಓವೈಸಿ
ಭಾನುವಾರ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಡಾ. ದರ್ಶನ್ ಪಾಲ್, "ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ರೈತರು ಹೆಲಿಪ್ಯಾಡ್ನಲ್ಲಿ ಘೆರಾವ್ ಹಾಕಲು ಯೋಜನೆ ರೂಪಿಸಿದ್ದೆವು. ನಮ್ಮ ಆ ಘೆರಾವು ಕಾರ್ಯಕ್ರಮ ಮುಗಿದ ಬಳಿಕ ನಮ್ಮ ಹೆಚ್ಚಿನ ರೈತರು ಹಿಂದಕ್ಕೆ ತೆರಳುತ್ತಿದ್ದೆವು. ಆದರೆ ಆ ಸಂದರ್ಭದಲ್ಲಿ ಮೂರು ಕಾರುಗಳು ಬಂದಿದೆ. ರೈತರುಗಳನ್ನು ತಳ್ಳಿಕೊಂಡು ರೈತರ ಮೇಲೆಯೇ ಆ ಕಾರುಗಳು ಸಾಗಿದೆ. ಈ ವೇಳೆ ಓರ್ವ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ," ಎಂದು ತಿಳಿಸಿದ್ದಾರೆ.
TW: Extremely disturbing visuals from #LakhimpurKheri
— Congress (@INCIndia) October 4, 2021
The silence from the Modi govt makes them complicit. pic.twitter.com/IpbKUDm8hJ
ಈ ಸಂದರ್ಭದಲ್ಲಿ ಕಾರಿನಲ್ಲಿ ಸಚಿವರ ಮಗನೂ ಇದ್ದ ಎಂದು ಆರೋಪ ಮಾಡಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ಸಚಿವರು ನಿರಾಕರಿಸಿದ್ದಾರೆ. ಅವರ ಪುತ್ರ ಆಶೀಶ್ ಮಿಶ್ರಾ ಕೂಡಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಈ ಎಫ್ಐಆರ್ ದಾಖಲು ಆಗಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. "ನನ್ನ ಪುತ್ರ ಸ್ಥಳದಲ್ಲಿ ಇರಲಿಲ್ಲ. ಅಲ್ಲಿ ಜನರು ಕೋಲು ಹಾಗೂ ಕತ್ತಿಗಳಿಂದ ಹೊಡೆದಿದ್ದಾರೆ. ನನ್ನ ಪುತ್ರ ಅಲ್ಲಿ ಇರುತ್ತಿದ್ದರೆ, ಜೀವಂತವಾಗಿ ಉಳಿಯುತ್ತಿರಲಿಲ್ಲ," ಎಂದು ಈ ಹಿಂದೆ ಹೇಳಿರುವುದನ್ನೇ ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ "ಇನ್ನು ನಮ್ಮ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಗಾಯವಾಗಿದೆ. ಹಾಗಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಳಿಕ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಕಾರಿಗೆ ಬೆಂಕಿ ಹಚ್ಚಲಾಗಿದೆ," ಎಂದು ಆರೋಪ ಮಾಡಿದ್ದರು. "ಇವೆಲ್ಲ ಕೃತ್ಯವನ್ನು ಅವರೇ ಮಾಡಿದ್ದಾರೆ, ಈ ಬಗ್ಗೆ ನಮ್ಮಲ್ಲಿ ವಿಡಿಯೋ ಸಾಕ್ಷಿಯಿದೆ," ಎಂದು ಕೂಡಾ ಹೇಳಿಕೊಂಡಿದ್ದರು.
(ಒನ್ಇಂಡಿಯಾ ಸುದ್ದಿ)