Breaking; ಲಖಿಂಪುರ ಗಲಭೆ, ಕೇಂದ್ರ ಸಚಿವರ ಪುತ್ರ ಪೊಲೀಸ್ ವಶಕ್ಕೆ
ಲಕ್ನೋ, ಅಕ್ಟೋಬರ್ 11; ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಅಶಿಶ್ ಮಿಶ್ರಾನನ್ನು ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾನನ್ನು ಶನಿವಾರ ಬಂಧಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಅಶಿಶ್ ಮಿಶ್ರಾನನ್ನು ವಶಕ್ಕೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 3 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ಲಖಿಂಪುರ ಖೇರಿ ಗಲಭೆ; ರಾಷ್ಟ್ರಪತಿಗಳ ಮೊರೆ ಹೋದ ಕಾಂಗ್ರೆಸ್
ಶನಿವಾರ ಅಶಿಶ್ ಮಿಶ್ರಾ ಉತ್ತರ ಪ್ರದೇಶದ ಎಸ್ಐಟಿ ಮುಂದೆ ಹಾಜರಾಗಿದ್ದರು. 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಬಂಧಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಲಖಿಂಪುರ ಖೇರಿ ಗಲಭೆ; ಕೇಂದ್ರ ಗೃಹ ಸಚಿವರ ಪುತ್ರನ ಬಂಧನ
ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 4 ರೈತರು ಸೇರಿ 8 ಜನರು ಮೃತಪಟ್ಟಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡಿದ ಆರೋಪ ಅಶಿಶ್ ಮಿಶ್ರಾ ಮೇಲಿದೆ.
ಲಖಿಂಪುರ ಖೇರಿ ಗಲಭೆ; ಯಪಿ ಸರ್ಕಾರದ ತನಿಖೆ ಬಗ್ಗೆ ಸುಪ್ರೀಂ ಅತೃಪ್ತಿ
ಉತ್ತರ ಪ್ರದೇಶ ಈ ಪ್ರಕರಣದ ತನಿಖೆಗೆ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಈ ಘಟನೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್ ಸಹ ಅತೃಪ್ತಿ ವ್ಯಕ್ತಪಡಿಸಿದೆ. ಲಖಿಂಪುರ ಖೇರಿ ಗಲಭೆ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಪೊಲೀಸರ ಪ್ರಶ್ನೆಗೆ ಉತ್ತರವಿಲ್ಲ; ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ ನಡೆದಾಗ ಎಲ್ಲಿದ್ದರು? ಎಂಬ ಪ್ರಶ್ನೆಗೆ ಅಶಿಶ್ ಮಿಶ್ರಾ ಉತ್ತರವನ್ನು ನೀಡಿಲ್ಲ. ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ತಮ್ಮ ಬೆಂಗಾವಲು ವಾಹನಲ್ಲಿ ಪುತ್ರ ಇರಲಿಲ್ಲ ಎಂದು ಹೇಳಿದ್ದರು.
ಅಶಿಶ್ ಮಿಶ್ರಾ ಮೊಬೈಲ್ ಲೋಕೇಶನ್ ಹಿಂಸಾಚಾರ ನಡೆದ ಪ್ರದೇಶ ಸಮೀಪದಲ್ಲಿಯೇ ಪತ್ತೆಯಾಗಿದೆ. ಘಟನೆ ನಡೆದ ಬಳಿಕ ಅಶಿಶ್ ಮಿಶ್ರಾ ತಲೆಮರೆಸಿಕೊಂಡಿದ್ದರು. ಶುಕ್ರವಾರ ಪೊಲೀಸರು ಎಸ್ಐಟಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಶನಿವಾರ ಅಶಿಶ್ ಮಿಶ್ರಾ ಎಸ್ಐಟಿ ವಿಚಾರಣೆಗೆ ಆಗಮಿಸಿದ್ದರು.
ಲಖಿಂಪುರ ಖೇರಿ ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಾಂತ್ವನ ಹೇಳಿದ್ದರು. ಕಾಂಗ್ರೆಸ್ ಈ ಗಲಭೆ ವಿಚಾರದಲ್ಲಿ ರಾಷ್ಟ್ರಪತಿಗಳಿಗೆ ಸಹ ಸತ್ಯ ಶೋಧನೆ ವರದಿ ನೀಡಲು ಬಯಸಿದ್ದು, ಭೇಟಿಗೆ ಕಾಲಾವಕಾಶ ಕೇಳಿದೆ.
ಉತ್ತರ ಪ್ರದೇಶದ ಇಬ್ಬರು ವಕೀಲರು ಗಲಭೆ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಕುರಿತು ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಪ್ರಸ್ತುತ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಎಸ್ಐಟಿ ತನಿಖೆ ಕೈಗೊಂಡಿದೆ. ಡಿಜಿಪಿ ಉಪೇಂದ್ರ ಅಗರ್ವಾಲ್ ನೇತೃತ್ವದ ಎಸ್ಐಟಿ ಎಫ್ಐಆರ್ನಲ್ಲಿ ಹೆಸರಿಸಿರುವ 7 ಮಂದಿಯಲ್ಲಿ ಮೂವರನ್ನು ಬಂಧಿಸಿದೆ. ಅಶಿಶ್ ಮಿಶ್ರಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಸುಮೋಟೋ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಗಲಭೆ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು ಎಂದು ಉತ್ತರ ಪದೇಶದ ಡಿಜಿಪಿಗೆ ಸೂಚನೆ ನೀಡಿದೆ. ಪ್ರಕರಣದ ಸಿಬಿಐ ತನಿಖೆ ನಡೆಯಲಿದೆಯೇ? ಕಾದು ನೋಡಬೇಕು.