ಲಖಿಂಪುರ ಪ್ರಕರಣ: ಬಿಜೆಪಿ ಕಾರ್ಯಕರ್ತರ ಹತ್ಯೆಗೈದ ಆರೋಪದಲ್ಲಿ ಇಬ್ಬರ ಬಂಧನ
ಲಕ್ನೋ, ಅಕ್ಟೋಬರ್, 26: ಲಖಿಂಪುರ ಖೇರಿ ಪ್ರಕರಣದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್ಐಟಿ) ಇಬ್ಬರನ್ನುಬಂಧನ ಮಾಡಿದೆ ಎಂದು ಮಂಗಳವಾರದಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಕಾರು ಕೇಂದ್ರ ಸಚಿವ ಅಜಯ್ ಮಿಶ್ರಾರಿಗೆ ಸೇರಿದ್ದು, ಇದರಲ್ಲಿ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ಆರೋಪ ಮಾಡಿದ್ದಾರೆ. ರೈತರ ಮೇಲೆ ಕಾರು ಹರಿದು ಹೋದ ಬಳಿಕ ಉಂಟಾದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಲಖಿಂಪುರ ಖೇರಿ ಗಲಭೆ: ಕಾರಿನಲ್ಲಿದ್ದ ಬಿಜೆಪಿ ನಾಯಕ ಸೇರಿ ನಾಲ್ವರ ಬಂಧನ
ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದು, ನಾಲ್ವರು ರೈತರು ಆಗಿದ್ದಾರೆ. ಉಳಿದವರ ಪೈಕಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಕಾರಿನ ಚಾಲಕ ಹಾಗೂ ಪತ್ರಕರ್ತ ಎಂದು ವರದಿಯು ಹೇಳಿದೆ. ಈ ಹಿನ್ನೆಲೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಆರೋಪದಲ್ಲಿ ಇಬ್ಬರನ್ನು ವಿಶೇಷ ತನಿಖಾ ತಂಡವು (ಎಸ್ಐಟಿ) ಬಂಧನ ಮಾಡಿದೆ. ಬಂಧಿತರನ್ನು ಗುರುವಿಂದರ್ ಸಿಂಗ್ ಹಾಗೂ ವಿಚಿತ್ರ ಸಿಂಗ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶ ಅಪರಾಧ ವಿಭಾಗದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಸುಮಿತ್ ಜೈಸ್ವಾಲ್ ಅಕ್ಟೋಬರ್ ನಾಲ್ಕರಂದು ನೀಡಿದ ದೂರಿನ ಆಧಾರದಲ್ಲಿ ದಾಖಲಾದ ಎಫ್ಐಆರ್ನಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.
ರೈತರ ವಿರುದ್ಧ ದೂರು ದಾಖಲು ಮಾಡಿರುವ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್, "ಅಜಯ್ ಮಿಶ್ರಾರ ಬೆಂಗಾವಲು ವಾಹನಗಳ ಮೇಲೆ ಪ್ರತಿಭಟನಾನಿರತ ರೈತರು ದಾಳಿ ನಡೆಸಿದ್ದಾರೆ. ಕಾರು ಸಂಚಾರ ಮಾಡುತ್ತಿರಲಿಲ್ಲ. ಪ್ರತಿಭಟನಾಕಾರರೇ ಕಾರಿನ ಮೇಲೆ ದಾಳಿ ನಡೆಸಿದ್ದಾರೆ," ಎಂದು ಕೂಡಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. "ನಾವು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಇದ್ದೆವು. ಆದರೆ ಅಲ್ಲಿನ ಭಯದ ವಾತಾವರಣವಿತ್ತು. ರೈತರು ಕೋಲುಗಳಿಂದ, ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಲು ಆರಂಭ ಮಾಡಿದರು. ನಮ್ಮ ಮೇಲೆ ದೌರ್ಜನ್ಯ ಮಾಡಿದರು," ಎಂದು ಕೂಡಾ ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಇನ್ನು ಅಷ್ಟೇ ಅಲ್ಲದೇ ಆ ಪ್ರತಿಭಟನಾನಿರತರು "ಖಾಲಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ. ಕಾರಿನ ಮೇಲೆ ಹತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಖೀಂಪುರ್ ಹಿಂಸಾಚಾರ: ಸಾಕ್ಷಿದಾರರಿಗೆ ರಕ್ಷಣೆ ಕೊಡಲು ಸುಪ್ರೀಂಕೋರ್ಟ್ ನಿರ್ದೇಶನ
ಪ್ರಕರಣದಲ್ಲಿ ಬಂಧಿತರ ಪೈಕಿ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್ ಒಬ್ಬರು
ಉತ್ತರ ಪ್ರದೇಶದ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿ ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಷ್ಟ್ ಹಾಗೂ ಸತ್ಯ ಪ್ರಕಾಶ್ ತ್ರಿಪಾಠಿ ಎಂಬವರನ್ನು ಬಂಧನ ಮಾಡಲಾಗಿದೆ. ಈ ಪೈಕಿ ಸುಮಿತ್ ಜೈಸ್ವಾಲ್ ಬಿಜೆಪಿ ನಾಯಕನಾಗಿದ್ದು, ಆತ ಈ ವಾಹನವನ್ನು ಚಲಾಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿತ್ತು. ಈತ ಇದಕ್ಕೂ ಮುನ್ನ ಅನಾಮಧೇಯ ರೈತರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲು ಮಾಡಿದ್ದ. ಈ ದೂರಿನ ಆಧಾರದಲ್ಲಿ ಎಫ್ಐಆರ್ ಕೂಡಾ ದಾಖಲು ಆಗಿತ್ತು. ತನ್ನ ಕಾರಿನ ಚಾಲಕ, ಸ್ನೇಹಿತ ಹಾಗೂ ಇತರೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ರೈತರು ಥಳಿಸಿ ಕೊಂದಿದ್ದಾರೆ ಎಂದು ಈತ ಆರೋಪ ಮಾಡಿದ್ದ. ಸುಮಿತ್ ಜೈಸ್ವಾಲ್ ರೈತರ ಮೇಲೆ ಕಾರು ಚಲಾಯಿಸಿದ ಬಳಿಕ ಕಾರಿನಿಂದ ಇಳಿದು ಓಡುವ ದೃಶ್ಯವು ವೈರಲ್ ವಿಡಿಯೋದಲ್ಲಿ ಕಂಡು ಬಂದಿತ್ತು.ಈ ಘಟನೆ ನಡೆದ ಮೂರು ದಿನಗಳ ನಂತರ ಸುಮಿತ್ ಜೈಸ್ವಾಲ್ ರೈತರು ತನ್ನ ಚಾಲಕನನ್ನು ಥಳಿಸಿ ಕೊಂದಿದ್ದಾರೆ ಎಂದು ಹೇಳಿಕೊಂಡು ದೂರು ದಾಖಲು ಮಾಡಿದ್ದ.
(ಒನ್ಇಂಡಿಯಾ ಸುದ್ದಿ)