ಕೃಷ್ಣ ಜನ್ಮಾಷ್ಟಮಿ: ಮಥುರಾದ ಬಂಕೆ ಬಿಹಾರಿ ಮಂದಿರದಲ್ಲಿ ನೂಕುನುಗ್ಗಲು- ಇಬ್ಬರು ಸಾವು
ಮಥುರಾ ಆಗಸ್ಟ್ 20: ಕೃಷ್ಣ ಜನ್ಮಾಷ್ಟಮಿಯಂದು ಮಥುರಾದ ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ನೂಕುನುಗ್ಗಲು ಸಂಭವಿಸಿದ್ದು, ಜನಸಂದಣಿಯಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮಥುರಾದ ಬಂಕೆ ಬಿಹಾರಿ ಮಂದಿರದಲ್ಲಿ ಮಂಗಳ ಆರತಿಯ ವೇಳೆ ಭಕ್ತರೊಬ್ಬರು ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಉಸಿರುಗಟ್ಟಿದ ವಾತಾವರಣದಿಂದಾಗಿ ಮೂರ್ಛೆ ಬಿದ್ದಿದ್ದಾರೆ. ಅಪಾರ ಜನಸಂದಣಿ ಇದ್ದುದರಿಂದ ಆವರಣದೊಳಗೆ ಉಸಿರುಗಟ್ಟಿದ ವಾತಾವರಣದ ಕಾರಣ ಅನೇಕ ಜನರಿಗೆ ತೊಂದರೆಯಾಗಿದೆ. ಈ ವೇಳೆ ನೂಕು ನುಗ್ಗಲಿಗೆ ಸಿಲುಕಿ ಇಬ್ಬರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಮಂದಿರದ ಒಳಗೆ ಭಕ್ತರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮಥುರಾ ಎಸ್ಎಸ್ಪಿ ಹೇಳಿದ್ದಾರೆ.
ವೈರಲ್ ಫೋಟೋಗಳಲ್ಲಿ ಮಥುರಾದ ಬಂಕೆ ಬಿಹಾರಿ ದೇವಾಲಯದ ಸಂಕೀರ್ಣದೊಳಗೆ ಹಠಾತ್ ಭಕ್ತಾದಿಗಳ ಗುಂಪನ್ನು ಕಾಣಬಹುದು. ಅಪಾರ ಜನಸ್ತೋಮದಿಂದಾಗಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿರುವುದು ದೃಶ್ಯದಲ್ಲಿ ಕಂಡು ಬಂದಿದೆ.
ಸ್ಥಳೀಯ ಸುದ್ದಿ ವಾಹಿನಿಗಳ ಪ್ರಕಾರ, ಬಂಕೆ ಬಿಹಾರಿ ದೇವಸ್ಥಾನದಲ್ಲಿ ಜನಸಂದಣಿ ತುಂಬಾ ಇತ್ತು. ಮಂಗಳ ಆರತಿಯ ಸಮಯದಲ್ಲಿ 50 ಕ್ಕೂ ಹೆಚ್ಚು ಜನರು ಮೂರ್ಛೆ ಹೋದರು ಎನ್ನಲಾಗಿದೆ. ಎಸ್ಎಸ್ಪಿ ಅಭಿಷೇಕ್ ಯಾದವ್ ಹೇಳಿಕೆಯನ್ನು ಉಲ್ಲೇಖಿಸಿ ಆಜ್ ತಕ್, "ಜನಸಂದಣಿ ಹೆಚ್ಚಾದ ಕಾರಣ ಈ ಅಪಘಾತ ಸಂಭವಿಸಿದೆ. ಮೃತರನ್ನು ನೋಯ್ಡಾ ನಿವಾಸಿ ನಿರ್ಮಲಾ ದೇವಿ ಮತ್ತು ಜಬಲ್ಪುರ ಮೂಲದ ವೃಂದಾವನ ನಿವಾಸಿ ರಾಜ್ಕುಮಾರ್ ಎಂದು ಗುರುತಿಸಲಾಗಿದೆ'' ಎಂದರು.
Recommended Video
ಮಂದಿರಕ್ಕೆ ಆಗಮಿಸಿದವರು ವಿಐಪಿ ಹೆಸರಿನಲ್ಲಿ ತಮ್ಮ ಪಾಸನ್ನು ತೋರಿಸಿದರು. ಈ ವೇಳೆಗಾಗಲೇ ಮಂದಿರದ ಒಳಗೆ ಅನೇಕ ಜನರನ್ನು ಬಿಡಲಾಗಿತ್ತು ಎಂದು ದೇವಾಲಯದ ಸೇವಕರು ಹೇಳುತ್ತಾರೆ. ಮಥುರಾ ರಿಫೈನರಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ 7 ಮಂದಿಯೊಂದಿಗೆ ಮಂಗಳ ಆರತಿಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಸಂಬಂಧಿಕರು ಟೆರೇಸ್ ಮೇಲೆ ನಿರ್ಮಿಸಿದ ಬಾಲ್ಕನಿಯಲ್ಲಿ ಬಂಕೆ ಬಿಹಾರಿ ದರ್ಶನ ಪಡೆಯುತ್ತಿದ್ದರು ಎಂದು ಸೇವಾದಾರರು ಆರೋಪಿಸಿದ್ದಾರೆ. ಆದರೆ ಗೊಂದಲದ ಸಮಯದಲ್ಲಿ, ಅಧಿಕಾರಿಗಳು ಅವರ ಕುಟುಂಬದ ಸುರಕ್ಷತೆಗಾಗಿ ಮೇಲಿನ ಮಹಡಿಯ ಗೇಟ್ಗಳನ್ನು ಮುಚ್ಚಿದರು.ಇದು ಜನರನ್ನು ಉಳಿಸಲು ತುಂಬಾ ಕಷ್ಟಕರವಾಗಿತ್ತು ಎಂದು ಆರೋಪಿಸಲಾಗಿದೆ.