ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು!
ಲಕ್ನೋ, ಜುಲೈ 07 : ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಗಾಗಿ ಇನ್ನೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಬಂಧಿಸಲು ಬಂದಾಗ 8 ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ವಿಕಾಸ್ ದುಬೆ ಮತ್ತು ಸಹಚರರು ಹತ್ಯೆ ಮಾಡಿದ್ದಾರೆ.
ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ನಡೆದ ಈ ಗುಂಡಿನ ದಾಳಿ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ವಿಕಾಸ್ ದುಬೆ ಸೇರಿದಂತೆ ಆತನ 20 ಸಹಚರರು ಮತ್ತು ಇತರ 80 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸರ ಹತ್ಯೆ; ವಿಕಾಸ್ ದುಬೆ ಬಂಧಿಸಲು 25 ತಂಡ ರಚನೆ
ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಮುನ್ನ ಪೊಲೀಸರ ಬಳಿ ಇದ್ದ 9ಎಂಎಂ ಪಿಸ್ತೂಲ್, ಎಕೆ 47 ರೈಫಲ್, 70 ಕಾಟ್ರಿಡ್ಜ್ಗಳನ್ನು ವಿಕಾಸ್ ದುಬೆ ಮತ್ತು ಸಹಚರರು ಹೊತ್ತುಕೊಂಡು ಹೋಗಿದ್ದಾರೆ.
ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟರೆ 2.5 ಲಕ್ಷ ಬಹುಮಾನ!
ಎಫ್ಐಆರ್ನಲ್ಲಿ ಪೊಲೀಸ್ ಠಾಣೆಯೊಂದರ ಸ್ಟೇಷನ್ ಆಫೀಸರ್ ಹೆಸರನ್ನು ಸಹ ಸೇರಿಸಲಾಗಿದೆ. ವಿಕಾಸ್ ದುಬೆ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಶುಕ್ರವಾರವೇ ಸ್ಟೇಷನ್ ಆಫೀಸರ್ ಅಮಾನತು ಮಾಡಲಾಗಿದೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
'ಎಲ್ಲರನ್ನೂ ಕೊಲ್ಲಿ'
ವಿಕಾಸ್ ದುಬೆಯನ್ನು ಹಿಡಿಯಲು ಪೊಲೀಸರು ಬಿಕ್ರು ಗ್ರಾಮಕ್ಕೆ ಆಗಮಿಸಿದರು. ಆಗ ನಾಲ್ಕು ದಿಕ್ಕಿನಿಂದ ಪೊಲೀಸರನ್ನು ಸುತ್ತುವರೆಯಲಾಯಿತು. 'ಎಲ್ಲರನ್ನೂ ಕೊಲ್ಲಿ" ಎಂದು ವಿಕಾಸ್ ದುಬೆ ಆದೇಶ ನೀಡಿದ್ದನ್ನು ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸರು ಕೇಳಿಸಿಕೊಂಡಿದ್ದಾರೆ. ವಿಕಾಸ್ ದುಬೆ ಕೂಗುತ್ತಿದ್ದಂತೆ ಗುಂಡಿನ ದಾಳಿ ಆರಂಭವಾಯಿತು. (ಘಟನೆ ನಡೆದ ಸ್ಥಳ)
12.30ಕ್ಕೆ ಪೊಲೀಸರ ಆಗಮನ
ಪೊಲೀಸರು ಬಿಕ್ರು ಗ್ರಾಮಕ್ಕೆ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಆಗಮಿಸಿದರು. 1 ಗಂಟೆ ವೇಳೆಗೆ ವಿಕಾಸ್ ದುಬೆ ಮನೆಯನ್ನು ಸುತ್ತುವರೆಯಲಾಯಿತು. 1 ಗಂಟೆಗೆ ಆರಂಭವಾದ ಗುಂಡಿನ ದಾಳಿ ಸುಮಾರು ಅರ್ಧ ಗಂಟೆಗಳ ಕಾಲ ನಡೆದಿದೆ.
ಮನೆಯೊಳಗೆ ಎಳೆದುಕೊಂಡು ಹೋದರು
ಡಿವೈಎಸ್ಪಿ ದೇವೇಂದ್ರ ಮಿಶ್ರಾ ನೇತೃತ್ವದ ತಂಡ ವಿಕಾಸ್ ದುಬೆ ಬಂಧನದ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಗುಂಡೇಟಿನಿಂದ ದೇವೇಂದ್ರ ಮಿಶ್ರಾ ಗಾಯಗೊಂಡು ಬಿದ್ದಾಗ ರೌಡಿಗಳು ಅವರನ್ನು ಮನೆಯೊಳಗೆ ಎಳೆದುಕೊಂಡು ಹೋದರು, ಬಳಿಕ ಗರಗಸದಿಂದ ಅವರ ಕತ್ತುಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದರು. (ವಿಕಾಸ್ ದುಬೆ ಮನೆ ನೆಲಸಮ ಮಾಡಲಾಗಿದೆ)
ಹಲವರ ಜೀವ ಉಳಿಯಿತು
ವಿಕಾಸ್ ದುಬೆ ಮತ್ತು ಸಹಚರರ ಕೈಯಲ್ಲಿ ಬಂದೂಕು ಇರುವುದನ್ನು ತಿಳಿದ ಪೊಲೀಸರು ಕೌಂಟರ್ ಫೈರಿಂಗ್ ಆರಂಭಿಸಿದರು. ಇದರಿಂದಾಗಿ ಹಲವು ಪೊಲೀಸರ ಜೀವ ಉಳಿಯಿತು. ಅಕ್ರಮ ಗಣಿಗಾರಿಕೆ ಮೂಲಕ ವಿಕಾಸ್ ದುಬೆ ಕೋಟ್ಯಾಂತರ ರೂಪಾಯಿ ಹಣ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. (ವಿಕಾಸ್ ದುಬೆ ಮನೆ)