ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ
ಲಕ್ನೋ, ಡಿಸೆಂಬರ್ 08: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಡಿಸೆಂಬರ್ 03 ರಂದು ನಡೆದ ಗಲಭೆಯ ಸಮಯದಲ್ಲಿಪೊಲೀಸ್ ಅಧಿಕಾರಿಯ ಹತ್ಯೆಯಾದ ಪ್ರಕರಣದ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಜೀತು ಫೌಜಿಯೇ ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ಫೌಜಿಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಹಿಂಸಾಚಾರ: ಇನ್ಸ್ಪೆಕ್ಟರ್ ಹತ್ಯೆಯಲ್ಲಿ ಸೈನಿಕನ ಕೈವಾಡ?
ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ಫೌಜಿ, 15 ದಿನಗಳ ಕಾಲ ರಜೆ ಇದ್ದಿದ್ದರಿಂದ ತನ್ನ ಹುಟ್ಟೂರು ಬುಲಂದ್ ಶಹರ್ ಗೆ ಬಂದಿದ್ದ. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದ ನಂತರ ಸಿಕ್ಕ ಕೆಲವು ವಿಡಿಯೋ ತುಣುಕುಗಳಲ್ಲಿ ಫೌಜಿ ಹಲವು ಬಾರಿ ಕಾಣಿಸಿಕೊಂಡಿದ್ದಾನೆ. ಆತನ ತಾಯಿಗೆ ವಿಡಿಯೋದಲ್ಲಿ ಆತನನ್ನು ಗುರುತಿಸುವುದಕ್ಕೆ ಸಾಧ್ಯವಾಗದಿದ್ದರೂ, ಆತನ ಕುಟುಂಬದ ಕೆಲವರು ಇದು ಫೌಜಿಯೇ ಎಮದು ಗುರುತಿಸಿದ್ದಾರೆ.
ಘಟನೆ ನಡೆದ ದಿನ ಸಂಜೆಯೇ ಕಾರ್ಗಿಲ್ ಗೆ ಮರಳುವ ಮೂಲಕ ಮತ್ತಷ್ಟು ಅನುಮಾನ ಹುಟ್ಟಿಸಿದ್ದ ಫೌಜಿಯನ್ನು ಜಮ್ಮು-ಕಾಶ್ಮೀರದ ಸೊಪೋರ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ
ಬುಲಂದ್ ಶಹರ್ ನಲ್ಲಿ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ಅವರು ಮೃತಪಟ್ಟಿದ್ದರು.