ಕಾಶಿ ವಿಶ್ವನಾಥ-ಜ್ಞಾನವಪಿ ಮಸೀದಿ ವಿವಾದ: ವಾರಣಾಸಿ ಕೋರ್ಟ್ ಆದೇಶವೇನು?
ಲಕ್ನೋ, ಏಪ್ರಿಲ್ 08: ಕಾಶಿ ವಿಶ್ವನಾಥ ದೇವಾಲಯ ಪಕ್ಕದ ಜ್ಞಾನವಪಿ ಮಸೀದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಮೀಕ್ಷೆಗೊಳಪಡಿಸಲು ವಾರಾಣಸಿ ನ್ಯಾಯಾಲಯ ಒಪ್ಪಿಗೆ ನೀಡಿದೆ. ವಾರಾಣಸಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಅಶುತೋಷ್ ತಿವಾರಿ ಈ ಬಗ್ಗೆ ಆದೇಶಿಸಿದ್ದಾರೆ.
ಕಳೆದ 1669ರಲ್ಲಿ ಜ್ಞಾನವಪಿ ಮಸೀದಿಯನ್ನು ನಿರ್ಮಿಸಲು ಮೊಘಲ್ ದೊರೆ ಔರಂಗಜೇಬ್ 2000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ನೆಲಸಮಗೊಳಿಸಿದ್ದನು ಎಂದು ಆರೋಪಿಸಲಾಗಿದೆ. ಜ್ಞಾನವಪಿ ಮಸೀದಿಯ ಭೂಮಿಯನ್ನು ಹಿಂದೂಗಳಿಗೆ ಮರಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ವಿಜಯಶಂಕರ್ ರಾಸ್ತೋಗಿ, ಸ್ವಯಂಭು ಭಗವಾನ್, ವಿಶ್ವೇಶ್ವರ ವಿಗ್ರಹ ಮತ್ತು ಇತರ ನಾಲ್ವರು ದೇವತೆಗಳ ವಾದ ಮಿತ್ರನಾಗಿ ಮೊಕದ್ದಮೆ ದಾಖಲಿಸಿದ್ದಾರೆ. ಮೊಕದ್ದಮೆ ಬಾಕಿ ಇರುವಾಗ ಇಬ್ಬರು ಫಿರ್ಯಾದಿದಾರರು ಸಾವನ್ನಪ್ಪಿದ್ದಾರೆ. ಈ ಮೊಕದ್ದಮೆಯನ್ನು ಜ್ಞಾನವಪಿ ಮಸೀದಿ ನಿರ್ವಹಣಾ ಸಮಿತಿ ವಿರೋಧಿಸಿತು.
ಚೋಳರ ಕಾಲದ ಹರಿಹರೇಶ್ವರ ದೇಗುಲ ತೆರವಿಗೆ ವಿರೋಧ!
ಎಎಸ್ಐ ಸಮೀಕ್ಷೆಗೆ ಆದೇಶಿಸುವ ನಿರ್ಧಾರವನ್ನು ಕೋರ್ಟ್ ಸಮರ್ಥಿಸಿಕೊಂಡಿದೆ. ಫಿರ್ಯಾದಿದಾರರ ದೂರಿಗೆ ಕಾರಣವಾದ ಅಂಶ ಮತ್ತು ಪ್ರತಿವಾದಿಗಳ ಸಮರ್ಥನೆಯ ಕುರಿತಾಗಿ ಎರಡೂ ಧರ್ಮಗಳಿಗೆ ಸೇರಿದ ಭಾರತೀಯರು ಮತ್ತು ಹೊರಗಿನ ಪ್ರಜೆಗಳಿಗೆ ಈ ಕುರಿತು ಸತ್ಯ ತಿಳಿದಿದೆ. ಯಾವುದೇ ಪಕ್ಷಗಳಿಗೂ ನೇರ ಸಾಕ್ಷ್ಯಗಳ ಮೂಲಕ ವಾದ ಮಂಡಿಸಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಾಲಯದ ಮುಂದೆ ಬಂದು ಸಾಕ್ಷ್ಯ ಹೇಳಲು ಯಾವುದೇ ವ್ಯಕ್ತಿ ಜೀವಂತ ಇಲ್ಲ" ಎಂದು ಕೋರ್ಟ್ ಹೇಳಿದೆ.
ಸತ್ಯ ಕಂಡು ಹಿಡಿಯುವುದು ಕೋರ್ಟ್ ಆಶಯ:
ಮೊಘಲ್ ದೊರೆ ಔರಂಗಜೇಬನ ಫರ್ಮಾನಿಗೆ ಅಡಿಯಾಳುಗಳಾಗಿ ವಿಶ್ವೇಶ್ವರ ದೇಗುಲವನ್ನು ನೆಲಸಮಗೊಳಿಸಿದ್ದನು. ಕಾಲಕ್ರಮೇಣ ಅದೇ ಸ್ಥಳವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂಬ ಅಂಶವನ್ನು ಪ್ರತಿವಾದಿಗಳು ಸಂಪೂರ್ಣ ನಿರಾಕರಿಸಿದ್ದರಿಂದ ಕೋರ್ಟ್ ಸತ್ಯವನ್ನು ಕಂಡುಹಿಡಿಯಲು ಬಯಸುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಮಸೀದಿ ಇದೆ ಎಂದು ಕಂದಾಯ ದಾಖಲೆಗಳು ತೋರಿಸುತ್ತವೆ ಎಂಬ ಪ್ರತಿವಾದಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಇದನ್ನು ನಿರ್ಣಾಯಕವಾಗಿ ಪರಿಗಣಿಸಲಾಗದು ಎಂದಿತು.
ಪುರಾತತ್ವ ಸರ್ವೇಕ್ಷಣೇಯ ಕುರಿತು ಕೋರ್ಟ್ ಪ್ರಮುಖ ನಿರ್ದೇಶನ:
- ವಿವಾದಿತ ಸ್ಥಳದಲ್ಲಿ ಎಎಸ್ಐ ಸಮಗ್ರ ಭೌತಿಕ ಸಮೀಕ್ಷೆ ಕೈಗೊಳ್ಳಬೇಕು
- ಪುರಾತತ್ವ ಶಾಸ್ತ್ರದ ಬಗ್ಗೆ ಆಳವಾಗಿ ಅರಿತಿರುವ ಪ್ರಖ್ಯಾತ ವ್ಯಕ್ತಿಗಳು ಮತ್ತು ತಜ್ಞರನ್ನು ಒಳಗೊಂಡ ಐದು ಸದಸ್ಯರ ಸಮಿತಿಯನ್ನು ರಚಿಸಲಾಗುವುದು. ಅದರಲ್ಲಿ ಇಬ್ಬರು ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
- ಮಸೀದಿ ನಿರ್ಮಿಸುವ ಅಥವಾ ನಿರ್ವಹಿಸುವ ಅಥವಾ ಸೇರ್ಪಡೆ ಮಾಡುವ ಮೊದಲು ಹಿಂದೂ ಸಮುದಾಯಕ್ಕೆ ಸೇರಿದ ದೇಗುಲ ಅಸ್ತಿತ್ವದಲ್ಲಿತ್ತೇ ಎಂಬುದನ್ನು ಸಮಿತಿ ಪತ್ತೆ ಹಚ್ಚಬೇಕು
- ಸಮೀಕ್ಷೆ ನಡೆಯುವಾಗ ವಿವಾದಿತ ಸ್ಥಳದಲ್ಲಿ ಮುಸ್ಲಿಮರ ನಮಾಜ್ಗೆ ಅಡ್ಡಿಯಾಗದಂತೆ ಸಮಿತಿ ನೋಡಿಕೊಳ್ಳಬೇಕು
- ಪ್ರಕರಣದ ಸೂಕ್ಷ್ಮತೆಯನ್ನು ಸಮಿತಿ ಅರಿತಿರಬೇಕಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಸಮಾನವಾಗಿ ಗೌರವಿಸತಕ್ಕದು
- ಸಮೀಕ್ಷೆ ಕಾರ್ಯದಲ್ಲಿ ಸಾಕ್ಷಿಯಾಗಲು ಯಾವುದೇ ಸಾರ್ವಜನಿಕರಿಗೆ ಅಥವಾ ಮಾಧ್ಯಮಗಳಿಗೆ ಅವಕಾಶ ನೀಡುವಂತಿಲ್ಲ
- ಸಮೀಕ್ಷೆ ಪೂರ್ಣಗೊಂಡ ಕೂಡಲೇ ವರದಿಯನ್ನು ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದೆ ಸಮಿತಿ ಮೊಹರು ಮಾಡಿದ ಲಕೋಟಯಲ್ಲಿ ಸಲ್ಲಿಸಬೇಕು
- ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಎಎಸ್ಐ ಭರಿಸಬೇಕು
- ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿಪಡಿಸಲಾಗಿದೆ
(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್ )