ಸುಪ್ರೀಂ ಎಚ್ಚರಿಕೆ ಬಳಿಕ ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರೆ ರದ್ದು
ಲಕ್ನೋ, ಜು.18: ಕೋವಿಡ್ -19 ಸಾಂಕ್ರಾಮಿಕದ ನಡುವೆ ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಿದ್ದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಬೆನ್ನಲ್ಲೇ ಯೋಗಿ ಸರ್ಕಾರದೊಂದಿಗೆ ಶನಿವಾರ ಕನ್ವರ್ ಸಂಘ ಸಮಾಲೋಚನೆ ನಡೆಸಿದ್ದು, ಉತ್ತರ ಪ್ರದೇಶದ ಈ ವರ್ಷದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಮಂಗಳವಾರ ಯುಪಿ ಸರ್ಕಾರವು, ''ಕನ್ವರ್ ಯಾತ್ರೆ ಶಿವನ ಹತ್ತಾರು ಭಕ್ತರು ಸೇರುವ ಕಾರ್ಯಕ್ರಮವು 'ಕನಿಷ್ಠ ಸಂಖ್ಯೆಯ ಜನರೊಂದಿಗೆ' ನಡೆಸಬಹುದು. ಅಗತ್ಯವಿದ್ದರೆ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು,'' ಎಂದು ಹೇಳಿತ್ತು.
'ಕೋವಿಡ್ ನಡುವೆ ಕನ್ವರ್ ಯಾತ್ರೆ ಯಾಕೆ?': ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಉತ್ತರ ಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಂತವಾಗಿ ಕೈಗೆತ್ತಿಕೊಂಡಿದೆ. ಹಾಗೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ಕಳುಹಿಸಿತ್ತು. ಕೋವಿಡ್ ನಡುವೆ ಕನ್ವರ್ ಯಾತ್ರೆ ಯಾಕೆ ಎಂದು ಪ್ರಶ್ನಿಸಿತ್ತು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ಪೀಠವು ಈ ವರ್ಷ ರಾಜ್ಯದಲ್ಲಿ ವಾರ್ಷಿಕ ಕನ್ವರ್ ಯಾತ್ರೆಯನ್ನು "ಸಾಂಕೇತಿಕ" ಆಚರಣೆಗೆ ಅನುಮತಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿತ್ತು. ''ಭಾರತೀಯ ಪ್ರಜೆಗಳ ಆರೋಗ್ಯ ಮತ್ತು ಜೀವಿಸುವ ಹಕ್ಕು ಎನ್ನುವುದು ಎಲ್ಲ ಧಾರ್ಮಿಕ ಹಾಗೂ ಇತರೆ ಮೂಲಭೂತ ಹಕ್ಕುಗಳಿಗಿಂತ ಅತ್ಯುನ್ನತವಾಗಿರುತ್ತದೆ,'' ಎಂದು ತಿಳಿಸಿತ್ತು. ಹಾಗೆಯೇ ಈ ಬಗ್ಗೆ ಜುಲೈ 19 ರೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ಆದೇಶಿಸಿತ್ತು.
ಈ ಹಿನ್ನೆಲೆ ಉತ್ತರ ಪ್ರದೇಶ ಆಡಳಿತವನ್ನು ಪ್ರತಿನಿಧಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವ್ನಿಶ್ ಅವಸ್ಥಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮುಕುಲ್ ಗೋಯಲ್ ಕನ್ವರ್ ಸಂಘದ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿದರು.
ಕನ್ವರ್ ಯಾತ್ರೆ: "ಧಾರ್ಮಿಕ ಹಕ್ಕಿಗಿಂತ ಜೀವಿಸುವ ಹಕ್ಕು ಅತ್ಯುನ್ನತ ಎಂದ ಸುಪ್ರೀಂಕೋರ್ಟ್
ಆ ಬಳಿಕ ನವನೀತ್ ಸೆಹಗಲ್ ಮಾಧ್ಯಮದೊಂದಿಗೆ ಮಾತನಾಡಿ, "ಉತ್ತರ ಪ್ರದೇಶ ಸರ್ಕಾರದ ಮನವಿಯ ಮೇರೆಗೆ ಕನ್ವರ್ ಯಾತ್ರೆಯನ್ನು ಕನ್ವರ್ ಸಂಘಗಳು ರದ್ದುಗೊಳಿಸಿವೆ," ಎಂದು ತಿಳಿಸಿದ್ದಾರೆ. ಹಾಗೆಯೇ ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಈ ನಡುವೆ ಉತ್ತರಾಖಂಡ ಸರ್ಕಾರ ಈ ವರ್ಷದ ಕನ್ವರ್ ಯಾತ್ರೆಯನ್ನು ಮಂಗಳವಾರ ರದ್ದುಗೊಳಿಸಿದೆ. ''ಯಾತ್ರೆಯಿಂದಾಗಿ ಕೋವಿಡ್ ಹೆಚ್ಚಳವಾಗಬಹುದು'' ಎಂದು ತಜ್ಞರ ಎಚ್ಚರಿಕೆ ನೀಡಿದ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಕುಂಭ ಮೇಳದ ಬಳಿಕ ಕೋವಿಡ್ ಹೆಚ್ಚಳಕ್ಕೆ ಈ ರಾಜ್ಯ ಸಾಕ್ಷಿಯಾಗಿತ್ತು.
ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. "ಮಾನವ ಜೀವದ ಉಳಿವಿಗೆ ಹೆಚ್ಚಿನ ಆದ್ಯತೆ ನೀಡುತ್ತಾ, ಮುಂಬರುವ ಕನ್ವರ್ ಯಾತ್ರೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ," ಎಂದು ಸರ್ಕಾರ ತಿಳಿಸಿದೆ. ಉತ್ತರಾಖಂಡದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಇದಕ್ಕೂ ಮುನ್ನ ಪುಷ್ಕರ್ ಸಿಂಗ್ ಧಾಮಿಗೆ ಪತ್ರ ಬರೆದು ವಾರ್ಷಿಕ ತೀರ್ಥಯಾತ್ರೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. ಹಾಗೆಯೇ ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ಈಗಾಗಲೇ ಈ ವರ್ಷದ ಕನ್ವರ್ ಯಾತ್ರೆಯನ್ನು ನಿಷೇಧಿಸಿದೆ.
(ಒನ್ಇಂಡಿಯಾ ಸುದ್ದಿ)