ಕನ್ವರ್ ಯಾತ್ರೆ: ಹರಿದ್ವಾರಕ್ಕೆ ಹೋದರೆ 14 ದಿನ ಸಾಂಸ್ಥಿಕ ದಿಗ್ಬಂಧನ
ಲಕ್ನೋ, ಜುಲೈ 15: ಉತ್ತರಾಖಂಡದಲ್ಲಿ ಕನ್ವರ್ ಯಾತ್ರೆ ನಡೆಯುವ ಜಿಲ್ಲೆಗೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
"ಕನ್ವರ್ ಯಾತ್ರೆ ನಡೆಯುವ ಜಿಲ್ಲೆಗೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಜನರು ಆಗಮಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 14 ದಿನಗಳವರೆಗೂ ಕಡ್ಡಾಯ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
'ಕೋವಿಡ್ ನಡುವೆ ಕನ್ವರ್ ಯಾತ್ರೆ ಯಾಕೆ?': ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಇದರ ಜೊತೆಗೆ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶಿಸುವುದಕ್ಕೆ ಯತ್ನಿಸುವ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಡಿಸಾಸ್ಟರ್ ಎಂಜಿಎಂಟಿ ಆಕ್ಟ್ ಅಡಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಘಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಕನ್ವರ್ ಯಾತ್ರೆಯನ್ನು ನಡೆಸುವುದಕ್ಕೆ ಅವಕಾಶ ನೀಡಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕಳೆದ ಮಂಗಳವಾರವಷ್ಟೇ ರಾಜ್ಯ ಸರ್ಕಾರವು 'ಕನಿಷ್ಠ ಸಂಖ್ಯೆಯ ಜನರೊಂದಿಗೆ ಕನ್ವರ್ ಯಾತ್ರೆ' ನಡೆಸಬಹುದು. ಅಗತ್ಯವಿದ್ದರೆ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು,'' ಎಂದು ಹೇಳಿತ್ತು.
ಏನಿದು ಕನ್ವರ್ ಯಾತ್ರೆ?:
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ಶ್ರಾವಣ ಮಾಸದ ಪ್ರಾರಂಭದಲ್ಲಿ 15 ದಿನಗಳವರೆಗೂ ಈ ಯಾತ್ರೆ ನಡೆಸಲಾಗುತ್ತದೆ. ಕನ್ವರ್ ಯಾತ್ರೆ ವೇಳೆಯಲ್ಲಿ ಗಂಗಾ ನದಿ ನೀರನ್ನು ಶಿವನ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಾಂತರ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ.
ಕೋವಿಡ್ನ ಮೊದಲ ಅಲೆಯ ಕಾರಣದಿಂದಾಗಿ ಕಳೆದ ವರ್ಷವೂ ಯಾತ್ರೆ ರದ್ದುಗೊಂಡಿದೆ. ಈ ವರ್ಷ, ಜುಲೈ 2 ರಂದು ಉತ್ತರಾಖಂಡವು ಯಾತ್ರೆಯನ್ನು ರದ್ದುಗೊಳಿಸಿದೆ. ಆದರೆ ಉತ್ತರ ಪ್ರದೇಶ ತೀರ್ಥಯಾತ್ರೆಗೆ ಅವಕಾಶ ನೀಡಿದೆ.