ಕಾನ್ಪುರ ಗಲಭೆ: 15 ಫೇಸ್ ಬುಕ್, ಟ್ವಿಟರ್ ಖಾತೆಗಳ ವಿರುದ್ಧ ಎಫ್ಐಆರ್
ಲಕ್ನೋ ಜೂನ್ 6: ಕಳೆದ ಶುಕ್ರವಾರ ಕಾನ್ಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟರ್ ನ 15 ಖಾತೆಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದ ಆರೋಪದಲ್ಲಿ ಐಟಿ ಕಾಯಿದೆಯ ಸೆಕ್ಷನ್ 505, 507 ಮತ್ತು 66 ರ ಅಡಿಯಲ್ಲಿ ಕಾನ್ಪುರದ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನಿಲ್ ತಿವಾರಿ ಈ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಫೇಸ್ ಬುಕ್ ಖಾತೆ ಸೇರಿದಂತೆ ವಿವಿಧ ಬಳಕೆದಾರರ ಐಡಿ ಗಳನ್ನು ಉಲ್ಲೇಖಿಸಲಾಗಿದೆ. ಇತರ ಖಾತೆಗಳು ನಿರ್ವಹಿಸಲಾದ ಸ್ಥಳಗಳನ್ನು ಉಲ್ಲೇಖಿಸಿಲ್ಲ.
ಪ್ರವಾದಿ ಅವಹೇಳನ ಮಾಡಿದವರ ಜೈಲಿಗಟ್ಟಿ; ಮಾಯಾವತಿ
ಇದೇ ವೇಳೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ತಾಸುಗಟ್ಟಲೇ ಸಿಸಿಟಿವಿ ಶೋಧಿಸಿರುವ ಕಾನ್ಪುರ ಪೊಲೀಸರು 40 ಮಂದಿ ಗಲಭೆಕೋರರ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ. ಗಲಭೆಯಲ್ಲಿ ಈ 40 ಮಂದಿ ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
40 ಮಂದಿ ಗಲಭೆಕೋರರ ಭಾವಚಿತ್ರ ಬಿಡುಗಡೆ
ಇವರ ಭಾವಚಿತ್ರಗಳನ್ನು ಕಾನ್ಪುರದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ಉತ್ತರ ಪ್ರದೇಶ ಪೊಲೀಸರು ತೀರ್ಮಾನಿಸಿದ್ದಾರೆ. ಅಲ್ಲದೇ 40 ಮಂದಿ ಗಲಭೆಕೋರರ ಬಗ್ಗ ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಗಲಭೆಯಲ್ಲಿ 20 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಭಟನೆ: ಸುಮೈಯಾ ರಾಣಾ ಬಂಧನ
14 ದಿನಗಳ ನ್ಯಾಯಾಂಗ ಬಂಧನ
ಗಲಭೆ ಸಂಬಂಧಿಸಿದಂತೆ ಪೊಲೀಸರು ಮೂವತ್ತಾರು ಜನರನ್ನು ಬಂಧಿಸಿದ್ದಾರೆ. ಗಲಭೆಯ ಪ್ರಮುಖ ಸೂತ್ರದಾರರಾದ ಹಯಾತ್ ಜಫ್ಫರ್ ಹಶ್ಮಿ, ಜಾವೇದ್ ಅಹಮದ್ ಖಾನ್, ಮೊಹಮದ್ ರಾಯಿಲ್ ಮತ್ತು ಮೊಹಮದ್ ಸುಫಿಯಾನ್ ನನ್ನು ಕಾನ್ಪುರ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಗಲಭೆಗೆ ಸಂಬಂಧಿಸಿದಂತೆ ಪಾಪ್ಯಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯ ಪಾತ್ರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಘಟನೆಯು ಆ ದಿನ ಬಂದ್ ಗೆ ಕರೆ ನೀಡಿತ್ತು.
ಗಲಭೆಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಗಾಯ
ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಒಂದು ಗುಂಪು ಪ್ರತಿಭಟನೆ ಸಂದರ್ಭದಲ್ಲಿ ಮಾರುಕಟ್ಟೆಯನ್ನು ಮುಚ್ಚುವಂತೆ ಕರೆ ನೀಡಿತ್ತು. ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದಾಗ ಪರಸ್ಪರ ಕಲ್ಲು ತೂರಾಟ ನಡೆಯಿತು. ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿದರು. ಗಲಭೆಯಲ್ಲಿ 20 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಗಲಭೆಕೋರರ ವಿರುದ್ಧ ಗೂಂಡಾ ಕಾಯಿದೆ
"50-100 ಸಂಖ್ಯೆಯ ಕೆಲವು ಯುವಕರು ಏಕಾಏಕಿ ರಸ್ತೆಗಿಳಿದು ಘೋಷಣೆ ಕೂಗಲು ಪ್ರಾರಂಭಿಸಿದರು. ಇನ್ನೊಂದು ಗುಂಪು ಅದನ್ನು ವಿರೋಧಿಸಿತು ಮತ್ತು ಕಲ್ಲು ತೂರಾಟಕ್ಕೆ ಶುರು ಮಾಡಿತು. ಗಲಭೆಕೋರರ ವಿರುದ್ಧ ಗೂಂಡಾ ಕಾಯಿದೆಯಡಿ ಕ್ರಮ ಕೈಗೊಂಡು ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುವುದು. ಕಾನ್ಪುರ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ,'' ಎಂದು ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)