ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ, ಇಬ್ಬರು ಸಜೀವ ದಹನ
ಲಕ್ನೋ, ಮಾರ್ಚ್ 28: ಉತ್ತರ ಪ್ರದೇಶದ ಕಾನ್ಪುರದ ಆಸ್ಪತ್ರೆಯೊಂದರಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಅಗ್ನಿ ಅವಘಡ ಉಂಟಾಗಿ 80 ವರ್ಷದ ವೃದ್ಧೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಮೃತ ರೋಗಿಗಳನ್ನು 80 ವರ್ಷದ ವೃದ್ಧೆ ರಸೂಲನ್ ಮತ್ತು ಹಮಿರ್ಪುರ್ ರಾತ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಐಸಿಯುನಲ್ಲಿ ದಾಖಲಾಗಿದ್ದರು. ಆದರೆ ಸಾವು-ನೋವಿನ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಖಚಿತ ಮಾಹಿತಿ ಸಿಗಬೇಕಿದೆ. ಉಳಿದ ರೋಗಿಗಳನ್ನು ಸುರಕ್ಷಿತವಾಗಿ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಒಂದರ ಹಿಂದೊಂದು ಅಗ್ನಿ ಅನಾಹುತ
ತುರ್ತು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಏಳು ಅಗ್ನಿಶಾಮಕ ಟೆಂಡರ್ಗಳನ್ನು ಕಾನ್ಪುರ ನಗರದ ಗೋಲ್ ಚೌರಾಹದಲ್ಲಿರುವ ಎಲ್ಪಿಎಸ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಸ್ವರೂಪ್ ನಗರ ಅಶ್ವನಿ ಪಾಂಡೆ ತಿಳಿಸಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ಹೊಗೆ ತುಂಬಿಕೊಂಡಿತು.
ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾಡಳಿತಕ್ಕೆ ರೋಗಿಗಳನನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ಕೂಡಲೇ ವರದಿ ಸಲ್ಲಿಸುವಂತೆ ಹೇಳಿದ್ದಾರೆ.
ಹೊಗೆಯಿಂದಾಗಿ ಪ್ರಜ್ಞೆ ತಪ್ಪಿಹೋಗಿರುವ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಜನರಿಗೆ ಅಗ್ನಿಶಾಮಕ ಇಲಾಖೆ ತಂಡಗಳು ತುರ್ತಾಗಿ ಬೇರೆಡೆಗೆ ಕಳುಹಿಸುವ ಕಾರ್ಯ ನಡೆಸಿವೆ ಎಂದು ಪೊಲೀಸ್ ಆಯುಕ್ತ ಆಸೀಮ್ ಅರುಣ್ ತಿಳಿಸಿದ್ದಾರೆ.
ರೋಗಿಗಳು ಮತ್ತು ದಾದಿಯರನ್ನು ಹೊರತೆಗೆಯಲು ತುರ್ತು ವಿಭಾಗದ ನೆಲ ಮತ್ತು ಮೊದಲ ಮಹಡಿಯಲ್ಲಿನ ಕಿಟಕಿ ಗಾಜುಗಳನ್ನು ಮುರಿಯಲಾಯಿತು.
ಸುಮಾರು 140 ರೋಗಿಗಳು ತುರ್ತು ವಾರ್ಡ್ ಮತ್ತು ಆಸ್ಪತ್ರೆಯ ಮೊದಲ ಮಹಡಿಯಲ್ಲಿದ್ದರು. ಅವರೆಲ್ಲರನ್ನೂ ಹೊರಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯ ಇತರ ಮಹಡಿಗಳಲ್ಲಿ ರೋಗಿಗಳಿದ್ದಾರೆ ಮತ್ತು ಅವರೆಲ್ಲರೂ ಸುರಕ್ಷಿತವಾಗಿದ್ದು ವೈದ್ಯರು ನಿಗಾವಹಿಸುತ್ತಿದ್ದಾರೆ.