ಕಮಲೇಶ್ ತಿವಾರಿ ಕೊಲೆ ಪ್ರಮುಖ ಆರೋಪಿ 2 ತಿಂಗಳ ಹಿಂದಷ್ಟೇ ದುಬೈನಿಂದ ಬಂದಿದ್ದ
ಲಖನೌ, ಅಕ್ಟೋಬರ್ 20: ಲಖನೌದಲ್ಲಿ ನಡೆದ ಹಿಂದೂ ಸಂಘಟನೆ ನಾಯಕ ಕಮಲೇಶ್ ತಿವಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬ ಎರಡು ತಿಂಗಳ ಹಿಂದಿನ ತನಕ ದುಬೈ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಗುಜರಾತ್ ನ ಸೂರತ್ ಗೆ ಕುಟುಂಬದ ಮದುವೆಗೆ ವಾಪಸಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಪ್ಪತ್ಮೂರು ವರ್ಷದ ರಶೀದ್ ಪಠಾಣ್ ಸೂರತ್ ನಲ್ಲಿರುವ ಲಿಂಬಾಯತ್ ನ ಜಿಲ್ಲಾನಿ ಮಂಜಿಲ್ ನವನು. ಆತನ ನೆರೆಮನೆಯಾತ ಇಪ್ಪತ್ತೊಂದು ವರ್ಷದ ಫೈಜಾನ್ ಮತ್ತು ಇಪ್ಪತ್ನಾಲ್ಕು ವರ್ಷದ ಮೌಲಾನಾ ಸಲೀಂ ಶೇಖ್ ಅನ್ನು ಶನಿವಾರ ಬಂಧಿಸಿ, ಅಹ್ಮದಾಬಾದ್ ಗೆ ಕರೆತರಲಾಗಿದೆ.
ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ
ಉತ್ತರಪ್ರದೇಶದ ಡಿಜಿಪಿ ಒ. ಪಿ. ಸಿಂಗ್ ಮಾತನಾಡಿ, ನಾಲ್ಕು ವರ್ಷದ ಹಿಂದೆ ಕಮಲೇಶ್ ತಿವಾರಿ ಮಾಡಿದ್ದ ಮುಸ್ಲಿಮರ ವಿರುದ್ಧ ಭಾಷಣದ ವಿಡಿಯೋವನ್ನು ತೋರಿಸಿ, ಇತರ ನಾಲ್ವರನ್ನು ಶೇಖ್ ಪ್ರಚೋದಿಸಿದ್ದ. ಕೊಲೆಯ ಯೋಜನೆಯನ್ನು ರಶೀದ್ ರೂಪಿಸಿದ್ದ್. ಸೂರತ್ ನ ಮಳಿಗೆಯಿಂದ ಫೈಜಾನ್ ಸಿಹಿ ತಂದಿದ್ದ ಎಂದು ಮಾಹಿತಿ ನೀಡಿದ್ದಾರೆ.
ರಶೀದ್ ಹಿಂತಿರುಗಿದ ಮೇಲೆ ಸೂರತ್ ನಲ್ಲಿ ಕೊಲೆಯ ಯೋಜನೆಯನ್ನು ರೂಪಿಸಲಾಗಿದೆ. ಶೇಖ್ ಅಷ್ಪಾಖ್ ಹುಸೇನ್ ಮತ್ತು ರಶೀದ್ ಸೋದರ ಪಠಾಣ್ ಮೊಯಿನುದ್ದೀನ್ ಅಹ್ಮದ್ ಸೇರಿ ಹಿಂದೂ ಸಮಾಜ ಪಕ್ಷದ ಸ್ಥಾಪಕನನ್ನು ಲಖನೌದ ಖುರ್ಷಿದ್ ಬಾಗ್ ಪ್ರದೇಶದಲ್ಲಿ ಶುಕ್ರವಾರ ಹತ್ಯೆ ಮಾಡಿದ್ದರು. ಅವರನ್ನು ಬಂಧಿಸಲಾಗಿದೆ.
ಏಳು ಮಂದಿಯನ್ನು ಶುಕ್ರವಾರ ಮಧ್ಯರಾತ್ರಿ ಸೂರತ್ ನಲ್ಲಿ ಬಂಧಿಸಲಾಗಿದೆ. ವಿಚಾರಣೆ ಹಾಗೂ ತನಿಖೆ ನಂತರ ಮೂವರನ್ನು ಬಂಧಿಸಲಾಗಿದೆ. ಆ ನಂತರ ಶನಿವಾರ ಅಹ್ಮದಾಬಾದ್ ಗೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಸ್ಥಳದಲ್ಲಿ ಸೂರತ್ ನ ಮಳಿಗೆಯೊಂದರ ಸಿಹಿ ಪತ್ತೆಯಾಗಿತ್ತು. ಕಾವಿ ಕುರ್ತಾ ಧರಿಸಿದ್ದ ಇಬ್ಬರು ಕೊಲೆಗಾರರು ತಿವಾರಿ ಮನೆಯ ಹೊರಗೆ ಸಿಹಿಯಿದ್ದ ಬಾಕ್ಸ್ ತಂದಿದ್ದ ದೃಶ್ಯಾವಳಿಗಳು ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿತ್ತು.