ಕಮಲೇಶ್ ತಿವಾರಿ ಹತ್ಯೆ: ಯೋಗಿ ಸರ್ಕಾರದ ಮೇಲೆ ಕಿಡಿಕಾರಿದ ತಾಯಿ
ಲಖನೌ, ಅಕ್ಟೋಬರ್ 21: ಲಖನೌದಲ್ಲಿ ನಡೆದ ಹಿಂದೂ ಸಂಘಟನೆ ನಾಯಕ ಕಮಲೇಶ್ ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದ ಕಮಲೇಶ್ ತಾಯಿ ಕುಸುಮ್ ತಿವಾರಿ, ನಿರಾಸೆ ಅನುಭವಿಸಿದ್ದಾರೆ.
"ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಯಾವ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಪೊಲೀಸರೇ ನಮಗೆ ಮುಖ್ಯಮಂತ್ರಿಗಳನ್ನು ಭೇಟೀ ಮಾಡುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿಗಳು ನಿಮ್ಮೊಂದಿಗೆ ಮಾತನಾಡಲು ಬಯಸಿದ್ದಾರೆ ಎಂದರು. ಅದಕ್ಕೇ ಅವರ ಬಳಿಗೆ ತೆರಳಿದೆವು. ಆದರೆ ಅವರಿಂದ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಿಲ್ಲ" ಎಂದು ಕುಸುಮ್ ವಿಶಶಾದ ವ್ಯಕ್ತಪಡಿಸಿದರು.
ಕಮಲೇಶ್ ತಿವಾರಿ ಕೊಲೆ ಪ್ರಮುಖ ಆರೋಪಿ 2 ತಿಂಗಳ ಹಿಂದಷ್ಟೇ ದುಬೈನಿಂದ ಬಂದಿದ್ದ
"ನನಗೆ ಯೋಗಿ ಆದಿತ್ಯನಾಥ್ ಅವರು ಪುತ್ರನಿದ್ದಂತೆ. ಅವರು ನನ್ನ ಮಗ ಕಮಲೇಶ್ ಹತ್ಯೆಯನ್ನು ಭಯ ಹುಟ್ಟಿಸಲು ಕೆಲವು ಕಿಡಿಗೇಡಿಗಳು ಮಾಡಿದ ಕೃತ್ಯ ಎಂದು ತೀವ್ರವಾಗಿ ಖಂಡಿಸಿದ್ದರು. ಆದ್ದರಿಂದ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆ" ಎಂದು ಕುಸುಮ್ ಹೇಳಿದರು.
ಇದಕ್ಕೂ ಒಂದು ದಿನ ಮುನ್ನ ಘಟನೆಯ ಬಗ್ಗೆ ಮಾತನಾಡಿದ್ದ ಕುಸುಮ್ ತಿವಾರಿ, ಪುತ್ರ ಕಮಲೇಶ್ ಕೊಲೆಗೆ ಯೋಗಿ ಆದಿತ್ಯನಾಥ್ ಸರ್ಕಾರವನ್ನೇ ಗುರಿಯಾಗಿಸಿದ್ದರು.
"ನನ್ನ ಮಗನಸಾವಿಗೆ ಸಂಬಂಧಿಸಿದಂತೆ ನನಗೆ ಯಾರ ಮೇಲಾದರೂ ಅನುಮಾನವಿದೆಯೇ ಎಂದು ಯಾರೂ ನನ್ನನ್ನು ವಿಚಾರಿಸುತ್ತಿಲ್ಲ. ನನ್ನ ಮಗನನ್ನು ಲ್ಯಾಂಡ್ ಮಅಫಿಯಾಕ್ಕಾಗಿ ಕೊಲೆ ಮಾಡಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿವಾದದಿಂದ ಆತನ ಹತ್ಯೆಯಾಗಿದೆ" ಎಂದು ಕುಸುಮ್ ಹೇಳಿದ್ದರು.
ಕಮಲೇಶ್ ಹತ್ಯೆ CCTV ಯಲ್ಲಿ ಸೆರೆ, ಮಹಿಳೆ ತಂದ ಸ್ವೀಟ್ ಬಾಕ್ಸ್ ನಲ್ಲಿತ್ತು ಮೃತ್ಯು!
ಅಕ್ಟೋಬರ್ 18 ರಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ 43 ವರ್ಷ ವಯಸ್ಸಿನ ತಿವಾರಿ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಒಟ್ಟು ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಅವರಲ್ಲಿ ಮೂವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮೂವರು ಆರೋಪಿಗಳು ಗುಜರಾತ್ ಮೂಲದವರಾಗಿದ್ದು, ಮೌಲಾನಾ ಮೊಹ್ಸಿನ್ ಶೇಖ್(24), ರಶೀದ್ ಅಹ್ಮದ್ ಪಠಾಣ್ (23) ಮತ್ತು ಫೈಜಾನ್(21) ಎಂದು ಗುರುತಿಸಲಾಗಿದೆ.
2015 ರಲ್ಲಿ ತಿವಾರಿ ಪ್ರವಾದಿ ಮೊಹಮ್ಮದ್ ಬಗ್ಗೆ ಆಡಿದ್ದ ವಿವಾದಾತ್ಮಕ ಮಾತುಗಳೇ ಅವರ ಕೊಲೆಗೆ ಕಾರಣವಿರಬಹುದು ಎಂದು ಅಂದಾಜಿಸಿದ್ದಾರೆ. ಎಫ್ ಐಆರ್ ನಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಮುಸ್ಲಿಂ ಧಾರ್ಮಿಕ ಮುಖಂಡರು 2016 ರಲ್ಲೇ ಕಮಲೇಶ್ ತಿವಾರಿ ಅವರನ್ನು ಕೊಂದರೆ 51 ಲಕ್ಷ ರೂ. ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.