ಎಪಿಜೆ ಅಬ್ದುಲ್ ಕಲಾಂ ಒಬ್ಬ 'ಜಿಹಾದಿ': ಗಾಜಿಯಾಬಾದ್ ಅರ್ಚಕ ಆರೋಪ
ಗಾಜಿಯಾಬಾದ್, ಮಾರ್ಚ್ 25: ದೇವಸ್ಥಾನ ಪ್ರವೇಶಿಸಿದ್ದಕ್ಕೆ ಮುಸ್ಲಿಂ ಬಾಲಕನನ್ನು ಥಳಿಸಿದ ಪ್ರಕರಣ ಇತ್ತೀಚೆಗೆ ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಅದೇ ದೇವಸ್ಥಾನದ ಅರ್ಚಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಧರ್ಮವನ್ನು ಗುರಿಯನ್ನಾಗಿರಿಸಿ ಹೇಳಿಕೆ ನೀಡಿರುವ ದಾಸ್ನಾ ದೇವಿ ದೇವಾಲಯದ ಅರ್ಚಕ, ಕಲಾಂ ಅವರನ್ನು 'ಜಿಹಾದಿ' ಎಂದು ಕರೆದಿದ್ದಾರೆ.
ಅಲಿಗಡದಲ್ಲಿ ಮಾತನಾಡಿದ ದಾಸ್ನಾ ದೇವಿ ದೇವಸ್ಥಾನದ ಯತಿ ನರಸಿಂಗಾನಂದ ಸರಸ್ವತಿ, 'ದೇಶದಲ್ಲಿ ಪ್ರಮುಖ ಹುದ್ದೆಯ ಅಧಿಕಾರದಲ್ಲಿರುವ ಯಾವುದೇ ಮುಸ್ಲಿಂ, ಭಾರತದ ಪರವಾಗಿರಲು ಸಾಧ್ಯವೇ ಇಲ್ಲ. ಕಲಾಂ ಒಬ್ಬ ಜಿಹಾದಿ' ಎಂದು ಹೇಳಿದ್ದಾರೆ.
ನೀರು ಕುಡಿಯಲು ದೇವಾಲಯದ ಒಳಗೆ ಹೋಗಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ: ಅಮಾನವೀಯ ಘಟನೆ
'ದಿವಂಗತ ಎಪಿಜೆ ಕಲಾಂ ಅವರು ಡಿಆರ್ಡಿಒ ಮುಖ್ಯಸ್ಥರಾಗಿದ್ದಾಗ ಅಟಂ ಬಾಂಬ್ನ ಫಾರ್ಮುಲಾವನ್ನು ಪಾಕಿಸ್ತಾನಕ್ಕೆ ನೀಡಿದ್ದರು. ಕಲಾಂ ಅವರು ರಾಷ್ಟ್ರಪತಿ ಭವನದಲ್ಲಿ ಒಂದು ಘಟಕವನ್ನು ತೆರೆದಿದ್ದರು. ಅಲ್ಲಿಯಾವುದೇ ಮುಸ್ಲಿಮರು ತಮ್ಮ ಅಹವಾಲು ಸಲ್ಲಿಸಬಹುದಾಗಿತ್ತು' ಎಂದು ಅವರು ಆರೋಪಿಸಿದ್ದಾರೆ.
ನೀರು ಕುಡಿಯುವ ಸಲುವಾಗಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದ ಮುಸ್ಲಿಂ ಬಾಲಕನನ್ನು ವ್ಯಕ್ತಿಯೊಬ್ಬ ಥಳಿಸುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಶ್ರಿಂಗಿ ನಂದ ಯಾದವ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ದೇವಸ್ಥಾನದ ಹೊರಗೆ ನೀರಿನ ಬೋರ್ವೆಲ್ ಇದ್ದರೂ, ಆ ಬಾಲಕ ಒಳಗೆ ಹೋಗಿದ್ದ. ಆತ ಕಳ್ಳತನ ಮಾಡಲು ಒಳಗೆ ಪ್ರವೇಶಿಸಿದ್ದ ಎಂದು ಅನೇಕರು ಶ್ರಿಂಗಿ ಯಾದವ್ನನ್ನು ಸಮರ್ಥಿಸಿಕೊಂಡಿದ್ದರು.