ಪತ್ರಕರ್ತನ ಬಾಯಿಯೊಳಗೆ ಮೂತ್ರ ಮಾಡಿದ ಪೊಲೀಸರು
ಲಕ್ನೋ, ಜೂನ್ 12: ವರದಿಗಾಗಿ ತೆರಳಿದ್ದ ಪತ್ರಕರ್ತರೊಬ್ಬರನ್ನು ರೈಲ್ವೆ ಪೊಲೀಸರು ಥಳಿಸಿ, ಹಲ್ಲೆ ಮಾಡಿ ಬಳಿಕ ಬಾಯಿಯೊಳಗೆ ಮೂತ್ರ ಮಾಡಿದ ಅಮಾನವೀಯ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ವರದಿಗಾಗಿ ತೆರಳಿದ್ದ ಪತ್ರಕರ್ತ ಅಮಿತ್ ಶರ್ಮಾ ಅವರನ್ನು ಬಿಗಿಯಾಗಿ ಹಿಡಿದುಕೊಂಡ ಪೊಲೀಸರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋವನ್ನು ಪರಿಶೀಲಿಸಿದಾಗ ಘಟನೆ ಏನೆಂದು ತಿಳಿದು ಬಂದಿದೆ.
ಸುಕಾಸುಮ್ಮನೆ ಪೊಲೀಸರು ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ, ಈ ಕುರಿತು ಅಮಿತ್ ಮಾಹಿತಿ ನೀಡಿದ್ದು, ವರದಿಗೆ ತೆರಳಿದ್ದಾಗ ಏಕಾಏಕಿ ಪೊಲೀಸರು ಬಂದು ಹಲ್ಲೆ ಮಾಡಿದ್ದಾರೆ, ಅವರು ಸಮವಸ್ತ್ರವನ್ನು ಕೂಡ ಧರಿಸಿರಲಿಲ್ಲ. ಮೊಬೈಲ್ ಹಾಗೂ ಕ್ಯಾಮರಾವನ್ನು ಕಿತ್ತುಕೊಂಡು ಅದನ್ನು ಪುಡಿಪುಡಿ ಮಾಡಿದ್ದಾರೆ.
ಅಷ್ಟಕ್ಕೇ ಸುಮ್ಮನಿರದ ಪೊಲೀಸರು ತನ್ನನ್ನು ಲಾಕ್ಅಪ್ಗೆ ಹಾಕಿ ಅಲ್ಲಿಯೂ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.ಬೇರೆ ಪತ್ರಕರ್ತರಿಗೆ ಈ ವಿಷಯ ತಿಳಿದು ತಕ್ಷಣವೇ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ, ಪ್ರತಿಭಟನೆ ನಡೆಸಿ ಆತನನ್ನು ಬಿಡುಗಡೆಗೊಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾನ್ಸ್ಟೇಬಲ್ ಸಂಜಯ್ ಪವಾರ್ ಹಾಗೂ ರಾಕೇಶ್ ಕುಮಾರ್ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪತ್ರಕರ್ತನ ಮೇಲೆ ಪೊಲೀಸರು ನಡೆಸಿದ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.