ಅಜಂಖಾನ್ ಗೆಲುವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದ ಜಯಪ್ರದಾಗೆ ಹಿನ್ನಡೆ
ಲಕ್ನೋ, ಜೂನ್ 14: ಲೋಕಸಭೆ ಚುನಾವಣೆ 2019ರಲ್ಲಿ ರಾಮ್ ಪುರ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅಜಂ ಖಾನ್ ಅವರ ಗೆಲುವನ್ನು ಪ್ರಶ್ನಿಸಿ ರಿಟ್ ಅರ್ಜಿ ಹಾಕಿದ್ದ ಬಿಜೆಪಿ ನಾಯಕಿ ಜಯಪ್ರದಾಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಭಾಗೀಯ ಪೀಠವು ಶುಕ್ರವಾರಾ(ಜೂನ್ 14)ದಂದು ಜಯಪ್ರದಾ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಜಸ್ಟೀಸ್ ರಂಜನ್ ರಾಯ್ ಹಾಗೂ ಜಸ್ಟೀಸ್ ಎನ್ ಕೆ ಜವಹರಿ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ, ರಿಟ್ ಅರ್ಜಿಯು ಈ ವ್ಯಾಪ್ತಿ ಪ್ರದೇಶಕ್ಕೆ ಒಳಪಡುವುದಿಲ್ಲ ಎಂದು ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿದೆ.
ಜಯಪ್ರದಾ ಅವರು ರಾಮ್ ಪುರ ಕ್ಷೇತ್ರದ ಲೋಕಸಭಾ ಚುನಾವಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಿಟ್ ಅರ್ಜಿ ಹಾಕಿದ್ದಾರೆ. ಈ ಕ್ಷೇತ್ರವು ಅಲಹಬಾದ್ ಹೈಕೋರ್ಟಿನ ಮುಖ್ಯ ನ್ಯಾಯಪೀಠಕ್ಕೆ ಒಳಪಡುತ್ತದೆ. ಲಕ್ನೋ ವಿಭಾಗೀಯ ಪೀಠದ ವ್ಯಾಪ್ತಿಗೆ ಮೀರಿದ್ದಾಗಿದೆ ಎಂದು ಹೇಳಲಾಗಿದೆ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಯಾಗಿದ್ದರೆ ವರ್ಗಾವಣೆ ಸಾಧ್ಯವಿತ್ತು. ಆದರೆ, ಇದು ರಿಟ್ ಅರ್ಜಿಯಾಗಿದೆ ಎಂದು ತಮ್ಮ ಆದೇಶದಲ್ಲಿ ವಿಭಾಗೀಯ ನ್ಯಾಯಪೀಠವು ಹೇಳಿದೆ. ಜಯಪ್ರದಾ ಅವರ ಪರ ಅವರ ವಕೀಲರಾದ ಅಮರ್ ಸಿಂಗ್ ವಾದ ಮಂಡಿಸಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಪ್ರದಾ ನಹಾತಾ ವಿರುದ್ಧ ಸಮಾಜವಾದಿ ಪಕ್ಷದ ಮೊಹಮ್ಮದ್ ಅಜಂ ಖಾನ್ ಅವರು ಉತ್ತಮ ಅಂತರದಿಂದ ಜಯ ದಾಖಲಿಸಿದ್ದರು. ಅಜಂಖಾನ್ 559177ಮತ(52.71%) ಗಳಿಸಿದರೆ, ಜಯಪ್ರದಾ 449180 ಮತ(42.34%) ಗಳಿಸಿದ್ದರು.