ಉಗ್ರದಾಳಿ ಸಾಧ್ಯತೆ, ಗುಪ್ತಚರ ಮಾಹಿತಿ ನಂತರ ಅಯೋಧ್ಯೆಯಲ್ಲಿ ಕಟ್ಟೆಚ್ಚರ
ಅಯೋಧ್ಯೆ, ಜೂನ್ 15: ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಯಲ್ಲಿ ಉಗ್ರ ದಾಳಿ ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ನಗರದಾದ್ಯಂತ ಕಟ್ತೆಚ್ಚರ ವಹಿಸಲಾಗಿದೆ.
ನೆರೆಯ ನೇಪಾಳದಿಂದ ಉಗ್ರರು ಉತ್ತರ ಪ್ರದೇಶದೊಳಕ್ಕೆ ನುಗ್ಗುವ ಸಾಧ್ಯತೆ ಇದ್ದು, ಉಗ್ರ ದಾಳಿಯ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣದ ಪ್ರತಿಧ್ವನಿ
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಟಿವಿ ಕ್ಯಾಮರಾ ಮತ್ತು ಹೆಚ್ಚಿನ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದ್ದು, ಸಂಶಯಾಸ್ಪದ ನಡೆಗಳು ಕಂಡು ಬಂದಲ್ಲಿ ಕೂಡಲೇ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.
ನೆರೆ ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಬರುವ ಮತ್ತು ಉತ್ತರ ಪ್ರದೇಶದ ಇತರ ನಗರಗಳಿಂದ ಅಯೋಧ್ಯೆಗೆ ಬರುವ ಬಸ್ಸು, ರೈಲುಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಾಸ್ಪದ ಖಾಸಗಿ ವಾಹನಗಳನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ.
2005 ರ ಜುಲೈ 5 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಡೆದ ಉಗ್ರ ದಾಳಿಯ ತೀರ್ಪು ಜೂನ್ 18 ರಂದು ಹೊರಬೀಳಲಿದ್ದು, ಜೂನ್ 16 ರಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಆ ಪಕ್ಷದ 18 ಸಂಸದರು ಅಯೋಧ್ಯೆಗೆ ತೆರಳಲಿದ್ದಾರೆ. ಈ ಎಲ್ಲಾ ಮಹತ್ವದ ಘಟನೆಗಳ ಹಿನ್ನೆಲೆಯಲ್ಲಿ ಉಗ್ರದಾಳಿಯ ಕುರಿತೂ ಮಾಹಿತಿ ಲಭ್ಯವಾಗಿದ್ದು, ಕಟ್ತೆಚ್ಚರ ವಹಿಸಲಾಗಿದೆ.
2005 ರಲ್ಲಿ ಐವರು ಉಗ್ರರು ರಾಮಜನ್ಮಭೂಮಿಯ ಮೇಲೆ ದಾಳಿ ನಡೆಸಿದ್ದರು. ಆದರೆ ಐವರನ್ನೂ ಅಲ್ಲಿಯೇ ಹೊಡೆದುರುಳಿಸಲಾಗಿತ್ತು. ಈ ಘಟನೆಯಲ್ಲಿ ಓರ್ವ ನಾಗರಿಕ ಮೃತನಾದರೆ, ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.