ಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನ
Recommended Video
ನವದೆಹಲಿ, ಜನವರಿ 15 : ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೆರಡು ಘಟಬಂಧನ ರಚಿಸಿಕೊಳ್ಳುವ ಮತ್ತು ನಂತರ, ಭಾರತದ ರಾಜಕೀಯ ಸನ್ನಿವೇಶದಲ್ಲಿ ಮಹತ್ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ.
ಒಂದೆಡೆ ಇತರ ಪಕ್ಷಗಳು ಈ ಎರಡು ಪಕ್ಷಗಳತ್ತ ತಿರುಗಿ ನೋಡುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಜನತಾ ಪಕ್ಷಕ್ಕೆ ಆತಂಕದ ವಾತಾವರಣ ಕವಿದಂತೆ ಕಾಣಿಸಿಕೊಳ್ಳುತ್ತಿದೆ. ಇದು ಆಯಾ ಪಕ್ಷಗಳ ನಾಯಕರು ಹೇಳಿರುವ ಹೇಳಿಕೆಗಳಲ್ಲಿಯೇ ವ್ಯಕ್ತವಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಈ ಘಟಬಂಧನದಿಂದ ಮರ್ಮಾಘಾತವಾಗಲಿದೆ ಎಂದು ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ಜಂಟಿಯಾಗಿ ನಡೆಸಿರುವ ಚುನಾವಣಾ ಸಮೀಕ್ಷೆ ತಿಳಿಸಿದೆ.
ಇಂಡಿಯಾ ಟುಡೆ ಸಮೀಕ್ಷೆ: ಕೇರಳದಲ್ಲಿ ಅರಳುತ್ತಿದೆ ಕಮಲ, ಆದರೆ ಪ್ರಧಾನಿ ರೇಸಲ್ಲಿ ಈಗಲೂ ಮುಂದೆ ರಾಹುಲ
80 ಕ್ಷೇತ್ರಗಳಿರುವ ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ಸಿಗೆ ಭಾರೀ ಪ್ರತಿಷ್ಠೆಯ ಕಣವಾಗಿದೆ. ಕಳೆದ ಚುನಾವಣೆಯಲ್ಲಿ 71 ಸೀಟು ಗೆದ್ದು ಬಿಜೆಪಿ ಜಯಭೇರಿ ಬಾರಿಸಿದ್ದರೆ, ಈ ಚುನಾವಣೆಯಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸಬೇಕೆಂದು ಉಳಿದ ಪಕ್ಷಗಳು ತುಡಿಯುತ್ತಿವೆ.
ಕೇಂದ್ರದಲ್ಲಿ ಆಡಳಿತ ಸ್ಥಾಪಿಸಲು ಯಾವುದೇ ಪಕ್ಷಕ್ಕೆ 272 ಸೀಟುಗಳು ಬೇಕೇಬೇಕು. ಇದನ್ನು ಮೈತ್ರಿಕೂಟದ ಮುಖಾಂತರವಾದರೂ ಸಾಧಿಸಬಹುದು, ಇತರ ಪಕ್ಷಗಳ ಬಾಹ್ಯ ಬೆಂಬಲದಿಂದ ಬೇಕಾದರೂ ಸ್ಥಾಪಿಸಬಹುದು. 2014ರಲ್ಲಿ ಸುಲಭವಾಗಿ ಬಹುಮತ ಗಳಿಸಿದ್ದ ಬಿಜೆಪಿಗೆ ಈ ಬಾರಿ ಕಠಿಣ ಸವಾಲುಗಳು ಎದುರಾಗಲಿವೆ ಎಂಬುದು ಸಮೀಕ್ಷೆಗಳಿಂದ ಬಹಿರಂಗವಾಗಿದೆ.
ಬಿಜೆಪಿಗೆ ತಲೆನೋವು ತಂದಿರುವ ಘಟಬಂಧನ
ಇತರ ರಾಜ್ಯಗಳಲ್ಲಿ ಸಮೀಕ್ಷೆಗಳು ಏನೇ ಇದ್ದರೂ ಎಲ್ಲರ ಕಣ್ಣು ಉತ್ತರ ಪ್ರದೇಶದಲ್ಲಿ ಏನಾಗಬಹುದು ಎಂಬುದರತ್ತ ನೆಟ್ಟಿದೆ. ಎಸ್ಪಿ, ಬಿಎಸ್ಪಿಗಳು ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಬಿಜೆಪಿಗೆ ನಷ್ಟವೇನೂ ಆಗುತ್ತಿರಲಿಲ್ಲ. ಆದರೆ, ಒಂದಾನೊಂದು ಕಾಲದ ಬದ್ಧ ವೈರಿಗಳಾದ ಎಸ್ಪಿ ಮತ್ತು ಬಿಎಸ್ಪಿ ಹ್ಯಾಂಡ್ ಶೇಕ್ ಮಾಡಿಕೊಂಡಿರುವುದರಿಂದ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಗೆ ಭಾರೀ ತಲೆನೋವು ಬಂದಿರುವುದು ದಿಟ. ಆದರೆ, ಈ ಘಟಬಂಧನದಿಂದ ಕಾಂಗ್ರೆಸ್ ಅಳುವಂತೆಯೂ ಇಲ್ಲ ನಗುವಂತೆಯೂ ಇಲ್ಲ.
ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ: ಎನ್ ಡಿಎ ಮೈತ್ರಿ ಕೂಟಕ್ಕೆ ಪೂರ್ಣ ಬಹುಮತ ಅಸಾಧ್ಯ
ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ 47
ಉತ್ತರ ಪ್ರದೇಶದಲ್ಲಿ ಘಟಬಂಧನ ಯಶಸ್ವಿಯಾಗಿದ್ದೇ ಆದಲ್ಲಿ ಮತ್ತು ಜನರು ಅದನ್ನು ಸ್ವೀಕರಿಸಿದ್ದೇ ಆದಲ್ಲಿ, ಎಸ್ಪಿ ಮತ್ತು ಬಿಎಸ್ಪಿ ಜಂಟಿಯಾಗಿ ಭಾರತೀಯ ಜನತಾ ಪಕ್ಷವನ್ನು ಅಕ್ಷರಶಃ ಹೊಸಕಿ ಹಾಕಲಿವೆ. ಇವೆರಡೂ ಸೇರಿ 80ರಲ್ಲಿ 47 ಕ್ಷೇತ್ರಗಳನ್ನು ಬಾಚಿಕೊಂಡು ಗೆಲುವಿನ ನಗೆ ಬೀರಲಿವೆ. ಭಾರತೀಯ ಜನತಾ ಪಕ್ಷ 71ರಿಂದ 28ಕ್ಕೆ ಇಳಿದು ಭಾರೀ ಮುಖಭಂಗ ಅನುಭವಿಸಲಿದೆ. ಕಳೆದ ಬಾರಿ ಕೇವಲ 2 ಕ್ಷೇತ್ರ ಗೆದ್ದು ಬಾಲ ಮುದುರಿಕೊಂಡಿದ್ದ ಕಾಂಗ್ರೆಸ್ ಹಣೆಬರಹ ಈ ಬಾರಿಯೂ ವಿಭಿನ್ನವಾಗಿರುವುದಿಲ್ಲ. ಅದುರ 2019ರ ಲೋಕಸಭೆ ಚುನಾವಣೆಯಲ್ಲಿ ಕೂಡ ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅವೆಂದರೆ, ಬಹುಶಃ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರಗಳು.
ಬಿಜೆಪಿಯ ಎದೆ ಬಡಿತ ಹೆಚ್ಚಿಸುವ ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಏನು ಹೇಳುತ್ತಿದೆ?
ಘಟಬಂದನಕ್ಕೂ ಮೊದಲು ಸಮೀಕ್ಷೆಯಲ್ಲಿ
ತಮಾಷೆ ಅಂದರೆ, ಇದೇ ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ಈ ಘಟಬಂಧನಕ್ಕಿಂತಲೂ ಮೊದಲು ನಡೆಸಿದ್ದ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷವೇ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜು ಮಾಡಿತ್ತು. ಒಂದು ವೇಳೆ ಬಿಎಸ್ಪಿ ಮತ್ತು ಎಸ್ಪಿ ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಿದ್ದರೆ ಬಿಜೆಪಿ 40 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ, 15 ಬಿಎಸ್ಪಿ ಪಾಲಾದರೆ, 20 ಎಸ್ಪಿ ಪಾಲಾಗಲಿವೆ ಎಂದು ಹೇಳಿತ್ತು. ಅಪ್ನಾದಳ ಮತ್ತು ಆರ್ಎಲ್ಡಿ ಲೆವೆಲ್ಲಿಗೆ ಕಾಂಗ್ರೆಸ್ ಇಳಿದಿರುವುದು ನಿಜಕ್ಕೂ ದುರಂತ. ಕಾಂಗ್ರೆಸ್ಸಿನ ಸಂಖ್ಯೆ 2ಕ್ಕಿಂತ ಮೇಲೆ ಏರುವುದಿಲ್ಲ.
ಇನ್ನೂ ಕಾಯುತ್ತಿರುವ ಕಾಂಗ್ರೆಸ್
ಬಹುಶಃ ಕಾಂಗ್ರೆಸ್ಸನ್ನು ಘಟಬಂಧನದಲ್ಲಿ ಸೇರಿಸಿಕೊಂಡು ಮಹಾಘಟಬಂಧನ ರಚಿಸಿದ್ದರೆ ಕಾಂಗ್ರೆಸ್ ಹಣೆಬರಹ ಸ್ವಲ್ಪಮಟ್ಟಿಗೆ ಸುಧಾರಿಸಬಹುದಿತ್ತೇನೋ, ಆದರೆ, ಕಾಂಗ್ರೆಸ್ಸನ್ನು ಘಟಬಂಧನದಿಂದ ಹೊರಗಿಟ್ಟು ಎಸ್ಪಿ ಮತ್ತು ಬಿಎಸ್ಪಿ ಮೊದಲ ಅಡೆತಡೆಯನ್ನು ದಾಟಿ ಬಂದಿವೆ. ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ವನಾಶವಾಗಿ ಹೋಗಿತ್ತು. ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸುವ ರೀತಿಯಲ್ಲಿ ಉತ್ತಮ ಬೆಳವಣಿಗೆ ತೋರಿದ್ದರೂ, ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿಗೆ ಕಾಂಗ್ರೆಸ್ ಬೇಡವಾಗಿದೆ. ಕಾಂಗ್ರೆಸ್ಸನ್ನು ಹೊರಗಿಟ್ಟು ಮಾಯಾವತಿ ಅವಮಾನ ಮಾಡಿದ್ದರೂ, ಇನ್ನೂ ಕಾಲ ಮಿಂಚಿಲ್ಲ ಕಾದು ನೋಡಲು ಸಿದ್ಧ ಎಂದು ಕೆಲ ಕಾಂಗ್ರೆಸ್ ನಾಯಕರು ಇನ್ನೂ ಆಶಾವಾದ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಕೂಡ ನಾವು ಘಟಬಂಧನವನ್ನು ಗೌರವಿಸುತ್ತೇವೆ ಎಂದು ನುಡಿದಿದ್ದಾರೆ.
ಮಾಯಾನಾ, ನಾಯ್ಡುವಾ, ಮಮತಾನಾ ಅಥವಾ ರಾಹುಲ್?
ಸನ್ನಿವೇಶ ಹೀಗಿರುವಾಗ, ಲೋಕಸಭೆ ಚುನಾವಣೆಗೂ ಮುನ್ನ ಮಹಾಘಟಬಂಧನ ಏರ್ಪಟ್ಟರೆ, ಅದರಿಂದಲೂ ಕಾಂಗ್ರೆಸ್ ಪಕ್ಷವನ್ನು ಇತರ ಪ್ರಾದೇಶಿಕ ಪಕ್ಷಗಳು ಹೊರಹಾಕಲಿವೆಯೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಸಾಧ್ಯಾಸಾಧ್ಯತೆಗಳು ಏನೇ ಇದ್ದರೂ, ಬಿಜೆಪಿ ಮತ್ತು ಅಂಗ ಪಕ್ಷಗಳಿಗಿಂತ ಮಹಾಘಟಬಂಧನ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾದರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ಪ್ರಶ್ನೆ ಕೂಡ ಸಹಜವಾಗಿ ಏಳುತ್ತದೆ. ಈಗಾಗಲೆ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ನಾಯಕ ಅಥವಾ ನಾಯಕಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಂಥ ಪರಿಸ್ಥಿತಿ ತಲೆದೋರಿದರೆ ಬಿಎಸ್ಪಿ ನಾಯಕಿ ಮಾಯಾವತಿ ಮಹಾಘಟಬಂಧನದಲ್ಲಿ ನಾನೇ ಪ್ರಧಾನಿ ಅಭ್ಯರ್ಥಿ ಎಂದು ಸ್ವಯಂಘೋಷಿಸಿಕೊಳ್ಳುವುದರಲ್ಲಿ ಅಚ್ಚರಿಯೇ ಇಲ್ಲ. ಜೊತೆಗೆ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಕೂಡ ತಮ್ಮನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಾಜೆಕ್ಟ್ ಮಾಡಿಕೊಳ್ಳಲು ಸರ್ವಯತ್ನ ನಡೆಸಿದ್ದಾರೆ.
ರಾಹುಲ್ ಬತ್ತಳಿಕೆಯಲ್ಲಿ ಏನೇನು ಬಾಣಗಳಿವೆ?
ಇದೆಲ್ಲ ಬೆಳವಣಿಗೆಗಳನ್ನು ನೋಡುತ್ತಿರುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಹೀಗೆ ಹೇಳದೆ ಬೇರೆ ದಾರಿಯೇ ಇಲ್ಲ ಎನ್ನುವುದು ಬೇರೆ ಮಾತು. ಆದರೆ, 80 ಕ್ಷೇತ್ರಗಳ ರಾಜ್ಯದಲ್ಲಿ ಬರೀ 2 ಕ್ಷೇತ್ರದಲ್ಲಿ ಗೆದ್ದರೆ ಸಾಕೆ. ಕಳೆದ ಮೂರು ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 11, 10 ಮತ್ತು 2 ಸ್ಥಾನಗಳನ್ನು ಗೆದ್ದಿದೆ. ಒಂದು ವೇಳೆ ಕಾಂಗ್ರೆಸ್ ಮಹಾಘಟಬಂಧನವನ್ನು ಸೇರಿಕೊಂಡು, ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿ ಆಗಬೇಕಾಗಿದ್ದರೆ ಉತ್ತರ ಪ್ರದೇಶದಲ್ಲಿ ಗತಕಾಲದ ವೈಭವ ಮರಳುವಂತೆ ಜಯ ಸಾಧಿಸಬೇಕಾಗಿದೆ. ರಾಹುಲ್ ಗಾಂಧಿ ಅವರ ಬತ್ತಳಿಕೆಯಲ್ಲಿ ಏನೇನು ಬಾಣಗಳಿವೆಯೋ?