ಯುಪಿಯಲ್ಲಿ ತ್ರಿವರ್ಣ ಧ್ವಜ ಹಂಚಿದ್ದಕ್ಕೆ 'ತಲೆ ಬೇರ್ಪಡಿಸುವ ಬೆದರಿಕೆ'
ಬಿಜ್ನೋರ್(ಉತ್ತರ ಪ್ರದೇಶ) ಆಗಸ್ಟ್ 16: ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಆದರೆ ಉತ್ತರಪ್ರದೇಶದಲ್ಲಿ ದೇಶ ವಿರೋಧಿಗಳಿಂದ ಕುಟುಂಬವೊಂದಕ್ಕೆ ಬೆದರಿಕೆ ಪತ್ರವೊಂದು ಬಂದಿದೆ. ಕಾರಣ ಕೇಳಿ ಕುಟುಂಬ ಮಾತ್ರವಲ್ಲದೇ ದೇಶ ಪ್ರೇಮಿಗಳು ಬೆಚ್ಚಿಬಿದ್ದಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ತ್ರಿವರ್ಣ ಧ್ವಜವನ್ನು ಮನೆ ಮನೆಗೆ ಹಂಚಿದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಶಿರಚ್ಛೇದನ ಬೆದರಿಕೆ ಬಂದಿದೆ. ಈ ಬೆದರಿಕೆ ಪತ್ರವನ್ನು ಅಂಗನವಾಡಿ ಕಾರ್ಯಕರ್ತೆಯ ಮನೆಯ ಹೊರಗೆ ಅಂಟಿಸಲಾಗಿತ್ತು. ಮನೆಯ ಹೊರಗೆ ಇಂತಹ ಬೆದರಿಕೆ ಪತ್ರಗಳು ಬಂದಿರುವುದರಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅವರ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪತ್ರ ಬಂದ ನಂತರ ಅಂಗನವಾಡಿ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಬಿಜ್ನೋರ್ ರ್ಯಾಲಿ ರದ್ದು: ಜಯಂತ್ ಚೌಧರಿ ವಾಗ್ದಾಳಿ
ಶಿರಚ್ಛೇದನದ ಬೆದರಿಕೆ ಪತ್ರ
ಹೀಗಾಗಿ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಕುಟುಂಬದ ಮನೆಯಲ್ಲೂ ಭದ್ರತೆ ಒದಗಿಸಲಾಗಿದೆ. ಬಂದಿರುವ ಸುದ್ದಿಯ ಪ್ರಕಾರ, ಈ ಪ್ರಕರಣವು ಬಿಜ್ನೋರ್ ಜಿಲ್ಲೆಯ ಕಿರಾತ್ಪುರ ಪ್ರದೇಶದ್ದು. ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ, ಅರುಣ್ ಕುಮಾರ್ ಕಶ್ಯಪ್ ಅವರು ತಮ್ಮ ಪತ್ನಿ ಶಶಿಬಾಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಅವರೇ ಹೋಟೆಲ್ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಗಸ್ಟ್ 13 ರಿಂದ 14 ರವರೆಗೆ ನಡೆದ 'ಹರ್ ಘರ್ ತಿರಂಗ' ಅಭಿಯಾನದ ಭಾಗವಾಗಿ ಅವರ ಪತ್ನಿ ಶಶಿಬಾಲಾ ಅವರು ತಮ್ಮ ಪ್ರದೇಶದಲ್ಲಿ ರಾಷ್ಟ್ರಧ್ವಜವನ್ನು ವಿತರಿಸಿದರು.
ಆತಂಕದಲ್ಲಿ ಕುಟುಂಬ
ತಹ್ರೀರ್ನಲ್ಲಿ ಅರುಣ್ ಕುಮಾರ್ ಕಶ್ಯಪ್ ಅವರು ಆಗಸ್ಟ್ 15ರಂದು ತಮ್ಮ ಮನೆಯ ಹೊರಗಿನ ಬಾಗಿಲಿನ ಮೇಲೆ ಕರಪತ್ರವನ್ನು ಅಂಟಿಸಿರುವುದನ್ನು ಕಂಡಿದ್ದಾರೆ. ಅದರ ಮೇಲೆ 'ಅರುಣ್, ನೀವು ಮನೆ ಮನೆಗೆ ತ್ರಿವರ್ಣ ಧ್ವಜವನ್ನು ಹಂಚುತ್ತಿದ್ದೀರಿ. ಹೀಗೆ ಮಾಡಿದರೆ ನಿನ್ನ ತಲೆಯನ್ನು ದೇಹದಿಂದ ಕತ್ತರಿಸಿ ಬೇರ್ಪಡಿಸಲಾಗುವುದು' ಎಂದು ಪತ್ರದಲ್ಲಿ ಬರೆಯಲಾಗಿದೆ. ಕರಪತ್ರದ ಕೆಳಭಾಗದಲ್ಲಿ ಐಎಸ್ಐ ಬೆಂಬಲಿಗ ಎಂದು ಬರೆಯಲಾಗಿತ್ತು. ಇಷ್ಟು ಮಾತ್ರವಲ್ಲದೆ, ಅಂತಹ ಇನ್ನೂ ಎರಡು ಕರಪತ್ರಗಳು ಮನೆಯ ಮುಂಭಾಗದ ಒಂದು ಅಂಗಡಿಯಲ್ಲಿ ಮತ್ತು ಇನ್ನೊಂದು ಫಾಸ್ಟ್ ಫುಡ್ ಕಾರ್ಟ್ನಲ್ಲಿ ಅಂಟಿಕೊಂಡಿರುವುದು ಕಂಡುಬಂದಿದೆ. ಇಂತಹ ಬೆದರಿಕೆಗಳು ಬಂದಿದ್ದರಿಂದ ಅರುಣ್ ಕುಮಾರ್ ಕುಟುಂಬದವರು ಭಯಭೀತರಾಗಿದ್ದಾರೆ.
ಎಸ್ಪಿ ನಗರ ಪ್ರವೀಣ್ ರಂಜನ್ ಹೇಳಿದ್ದೇನು?
ಅದೇ ವೇಳೆಗೆ ಇಂತಹ ಬೆದರಿಕೆ ಕರಪತ್ರಗಳು ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಲ್ಲಾ ಕರಪತ್ರಗಳನ್ನು ತಮ್ಮ ವಶಕ್ಕೆ ಪಡೆದು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಎಸ್ಪಿ ಪ್ರವೀಣ್ ರಂಜನ್ ತಿಳಿಸಿದ್ದಾರೆ. ಇದರೊಂದಿಗೆ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ. ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರ ವಹಿಸಿದ್ದೇವೆ. ಅವರಿಗೆ ಭದ್ರತೆಯನ್ನೂ ನೀಡಿದ್ದೇವೆ. ತನಿಖೆ ಚುರುಕುಗೊಳಿಸಲಾಗಿದೆ ಎಂದು ರಂಜನ್ ತಿಳಿಸಿದ್ದಾರೆ.
ಎಸ್ಪಿ ಪ್ರವೀಣ್ ರಂಜನ್ ಅಭಯ
ಸದ್ಯ ಕರಪತ್ರದ ಕೈಬರಹ ನೋಡಿದರೆ ಬೆದರಿಕೆ ಹಾಕುತ್ತಿರುವ ವ್ಯಕ್ತಿ ಹೆಚ್ಚು ವಿದ್ಯಾವಂತರಲ್ಲ ಎಂದು ಅನಿಸುತ್ತಿದೆ. ಆತನ ಹುಡುಕಾಟಕ್ಕಾಗಿ ಸ್ಥಳೀಯ ಸಿಸಿ ಕ್ಯಾಮರಾ ಹಾಗೂ ಸ್ಥಳೀಯರ ವಿಚಾರಣೆ ನಡೆಯುತ್ತಿದೆ. ಪತ್ರ ಗಮನಿಸಿದರೆ, ಕುಟುಂಬದ ವಿರೋಧಿಗಳು ಬೆದರಿಕೆ ಹಾಕಿರುವಂತೆ ತೋರುತ್ತದೆ. ಆದರೂ ಈ ಬಗ್ಗೆ ಖಚಿತತೆ ಇಲ್ಲ. ನಾವು ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ರಂಜನ್ ತಿಳಿಸಿದರು.
Recommended Video