ಉತ್ತರ ಪ್ರದೇಶ ಚುನಾವಣೆ; ಪ್ರತಿಪಕ್ಷಗಳ ವಿರುದ್ಧ ಯೋಗಿ ವಾಗ್ದಾಳಿ
ಲಕ್ನೋ ನವೆಂಬರ್ 7: ಕೋವಿಡ್-19 ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಮನೆಯಿಂದ ಹೊರಬರಲು ತಲೆಕೆಡಿಸಿಕೊಳ್ಳದ ಪ್ರತಿಸ್ಪರ್ಧಿ ಪಕ್ಷಗಳ ನಾಯಕರ ವಿರುದ್ಧ ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಯುಪಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಈ ವಾಕ್ಸಮರ ನಡೆದಿದೆ.
ಯುಪಿಯ ಇಟಾವಾದಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು," ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತಿರುವ ನಾಯಕರನ್ನು ಚುನಾವಣೆಯಲ್ಲಿ ಮನೆಯಲ್ಲೇ ಉಳಿಯುವಂತೆ ನೋಡಿಕೊಳ್ಳಬೇಕು" ಎಂದು ಜನಸಾಮಾನ್ಯರಲ್ಲಿ ಕೇಳಿಕೊಂಡರು.
"ಕೋವಿಡ್ ಉತ್ತುಂಗದಲ್ಲಿದ್ದಾಗ ನಾನು ನಿಮ್ಮ ನಡುವೆ ಇದ್ದೆ. ನಿಮಗೆ ನೆನಪಿದ್ದರೆ ಕೈ ಎತ್ತಿ, ಸಾಂಕ್ರಾಮಿಕ ರೋಗದ ನಡುವೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮುಂಚೂಣಿಯಲ್ಲಿರುವ ಆರೋಗ್ಯ ವೃತ್ತಿಪರರನ್ನು ಭೇಟಿ ಮಾಡಲು ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ" ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆ ಇದಕ್ಕೆ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು.
"ಆದರೆ ಇತರ ಪಕ್ಷಗಳ ನಾಯಕರು ಮನೆಯಲ್ಲಿ ಪ್ರತ್ಯೇಕವಾಗಿರುತ್ತಿದ್ದರು. ಹಾಗಾಗಿ ಅವರಿಗೆ ಚುನಾವಣೆಯ ಸಮಯದಲ್ಲಿಯೂ ಮನೆಯಲ್ಲಿಯೇ ಇರಲು ಹಕ್ಕಿದೆ. ಅವರು ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಯೋಗಿ ಆದಿತ್ಯನಾಥ್ ಸಭಿಕರಿಗೆ ಹೇಳಿದರು. ಕಾರ್ಯಕ್ರಮದಲ್ಲಿ ನೆರೆದವರು ಈ ಮಾತಿಗೆ ಚಪ್ಪಾಳೆ ತಟ್ಟಿ ಮತ್ತೆ ಹುರಿದುಂಬಿಸಿದರು. "ಕೊರೊನಾ ಸಂದರ್ಭದಲ್ಲಿ ಅವರು ಟ್ವಿಟರ್ನಲ್ಲಿ ಬ್ಯುಸಿಯಾಗಿದ್ದರು. ಆದ್ದರಿಂದ ಅವರಿಗೆ ಹೇಳಿ, ಬಾಬುವಾ ಟ್ವಿಟರ್ ನಿಮಗೆ ಮತ ಹಾಕುತ್ತದೆ" ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಯುಪಿ ಸರ್ಕಾರವು ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಎಡವಿದೆ ಎಂದು ಟೀಕಿಸಲಾಗಿದೆ. ನದಿಗಳಲ್ಲಿ ತೇಲಿದ ದೇಹಗಳ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿ ಯುಪಿ ಸರ್ಕಾರವನ್ನು ಜನ ದೂರುವಂತಾಯಿತು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯ ಪ್ರಕರಣಗಳು ಹೆಚ್ಚಾಗಿ ಇದು ಸರ್ಕಾರದ ನಿರ್ಲಕ್ಷ್ಯವನ್ನಲಾಯಿತು. ಆದಾಗ್ಯೂ ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದ ಆಸ್ಪತ್ರೆಗಳನ್ನು ಗಮನಿಸಿದಾಗ ಈ ಸಮಸ್ಯೆಯು ದೇಶಾದ್ಯಂತ ವರದಿಯಾಗಿದೆ. ಹೀಗಾಗಿ ಯುಪಿ ಸರ್ಕಾರವು ಸಾಂಕ್ರಾಮಿಕ ರೋಗವನ್ನು ಚೆನ್ನಾಗಿ ನಿಭಾಯಿಸಿದೆ ಮತ್ತು ಆಸ್ಪತ್ರೆಗಳು ಮತ್ತು ಆರೋಗ್ಯ ವೃತ್ತಿಪರರಿಗೆ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡಲು ಎಲ್ಲವನ್ನೂ ಮಾಡಿದೆ ಎಂದು ಸಮರ್ಥಿಸುತ್ತದೆ. ಉತ್ತರಪ್ರದೇಶದ ಜನರ ಸಂಕಷ್ಟಕ್ಕೆ ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸಹಕಾರಿಯಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇಂದು (ಭಾನುವಾರ) ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಉತ್ತರಪ್ರದೇಶದ ಕದನ ಸೇರಿದಂತೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸರಮಾಲೆಯನ್ನು ಗೆಲ್ಲುವ ತಂತ್ರಗಳು ಪ್ರಮುಖ ಆದ್ಯತೆಯ ಕಾರ್ಯಸೂಚಿಯಾಗಿದೆ. ಈ ವಾರದ ಆರಂಭದಲ್ಲಿ ಹಲವಾರು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್ ಕಳೆದುಕೊಂಡಿರುವ ನೆಲವನ್ನು ಮರಳಿ ಪಡೆದಿದೆ ಎಂದು ತೋರಿಸಿದೆ. ಆದರೆ ಪ್ರತಿಪಕ್ಷಗಳ ಮುನ್ನಡೆಯು ಬಿಜೆಪಿಯನ್ನು ಚಿಂತೆಗೀಡುಮಾಡುವಷ್ಟು ಗಮನಾರ್ಹವಾಗಿರಲಿಲ್ಲ.
ಇನ್ನು ಇಂದು ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಪಕ್ಷ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರವಾಗಿ ಅಧ್ಯಯನ ಮಾಡಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಎಂಬ ಐದು ರಾಜ್ಯಗಳಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ 2022 ರ ಕೊನೆಯಲ್ಲಿ ಚುನಾವಣೆಗಳು ನಡೆಯಲಿವೆ. ಪಂಜಾಬ್ ಹೊರತುಪಡಿಸಿ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.