ಪ್ರಯಾಗ್ರಾಜ್: ಗಂಗಾ ನೀರು ಹೆಚ್ಚಳವಾದಂತೆ ನದಿಯಲ್ಲಿ ತೇಲಿದ ಮೃತದೇಹಗಳು
ಲಕ್ನೋ, ಜೂ. 25: ಉತ್ತರ ಪ್ರದೇಶದ ಪ್ರಯಾಗ್ರಾಜ್ ಪಟ್ಟಣದಲ್ಲಿ ಮುಂಗಾರು ಮತ್ತು ಗಂಗಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವು ಅಧಿಕಾರಿಗಳಿಗೆ ಸವಾಲನ್ನು ಒಡ್ಡಿದೆ. ಕೋವಿಡ್ ರೋಗಿಗಳು ಎಂದು ಶಂಕಿಸಲಾದ, ಗಂಗಾ ನದಿಯ ದಡದಲ್ಲಿ ಹೂತು ಹಾಕಲಾಗಿರುವ ಶವಗಳನ್ನು ಬೇರೆಡೆ ಸಾಗಿಸುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಮತ್ತು ಮರಳು ದಂಡೆಗಳು ಕುಸಿಯುತ್ತಿದ್ದಂತೆ ಮೃತ ದೇಹಗಳು ನೀರಿನಲ್ಲಿ ತೇಲಲು ಆರಂಭಿಸಿದೆ. ಕಳೆದ ಎರಡು ದಿನಗಳಿಂದ ಪ್ರಯಾಗರಾಜ್ನ ವಿವಿಧ ಘಾಟ್ಗಳಲ್ಲಿ ಉಂಟಾಗಿರುವ ಈ ಪರಿಸ್ಥಿತಿಯನ್ನು ಸ್ಥಳೀಯ ಪತ್ರಕರ್ತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ದೃಶ್ಯದಲ್ಲಿ ಅಧಿಕಾರಿಗಳು ನೀರಿನಲ್ಲಿ ತೇಲುತ್ತಿರುವ ಮೃತದೇಹವನ್ನು ದಡಕ್ಕೆ ತರುವ ಕಾರ್ಯ ಮಾಡಿಸುತ್ತಿರುವುದು ಕಂಡು ಬಂದಿದೆ.
ಗಂಗಾ ನದಿ ದಡದಲ್ಲಿ ಭೂ ಸವೆತ: ದಫನ್ ಮಾಡಿದ ದೇಹಗಳು ಕೊಚ್ಚಿ ಹೋಗುವ ಭೀತಿ
ಬುಧವಾರ ತೆಗೆದ ಛಾಯಾಚಿತ್ರದಲ್ಲಿ ನದಿಯ ದಂಡೆಯಲ್ಲಿ ಸಿಲುಕಿರುವ ದೇಹಗಳು ಕಂಡು ಬಂದಿದೆ. ಪ್ರಯಾಗರಾಜ್ ಮಹಾನಗರ ಪಾಲಿಕೆಯ ತಂಡವೊಂದು ಶವವನ್ನು ಹೊರತೆಗೆದಿದೆ. ಮತ್ತೊಂದು ಘಾಟ್ನ ವೀಡಿಯೊವೊಂದರಲ್ಲಿ ಇಬ್ಬರು ಪುರುಷರು ಮತ್ತೊಂದು ಹೆಣವನ್ನು ನದಿಯ ದಂಡೆಗೆ ಕರೆತರುವುದು ಕಂಡು ಬಂದಿದೆ. ಅಂತಹ ಅನೇಕ ದೃಶ್ಯಗಳು ಹಾಗೂ ಆ ಬಳಿಕ ಶವಸಂಸ್ಕಾರ ಮಾಡುತ್ತಿರುವ ದೃಶ್ಯಗಳನ್ನು ಸ್ಥಳೀಯ ಪತ್ರಕರ್ತರು ಚಿತ್ರೀಕರಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 40 ಶವಗಳನ್ನು ಅಂತ್ಯಸಂಸ್ಕಾರ ಮಾಡಿರುವುದಾಗಿ ಪ್ರಯಾಗರಾಜ್ ಮಹಾನಗರ ಪಾಲಿಕೆಯ ವಲಯ ಅಧಿಕಾರಿ ನೀರಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ನಾವು ಎಲ್ಲಾ ದೇಹಗಳನ್ನು ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ಎಲ್ಲಾ ಆಚರಣೆಗಳನ್ನು ಅನುಸರಿಸುತ್ತಿದ್ದೇವೆ," ಎಂದಿದ್ದಾರೆ.
ಇನ್ನು ಮೃತ ದೇಹದ ಬಾಯಿಯಲ್ಲಿ ಆಮ್ಲಜನಕದ ಟ್ಯೂಬ್ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಗ್, ''ಸಾವಿಗೆ ಮುಂಚಿತವಾಗಿ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರು,'' ಎಂದು ಒಪ್ಪಿಕೊಂಡಿದ್ದಾರೆ. "ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬುದು ನಿಮಗೆ ಕಾಣಬಹುದಾಗಿದೆ. ಕುಟುಂಬವು ಆ ವ್ಯಕ್ತಿಯನ್ನು ಇಲ್ಲಿಗೆ ಎಸೆದು ಹೋಗಿದೆ. ಬಹುಶಃ ಅವರು ಭೀತಿಗೆ ಒಳಗಾಗಿ ಹೀಗೆ ಮಾಡಿರಬಹುದು, ಆದರೆ ಏನು ಹೇಳಲಾಗದು,'' ಎಂದು ಹೇಳಿದ್ದಾರೆ.
''ಎಲ್ಲಾ ದೇಹಗಳು ಕೊಳೆತಿಲ್ಲ. ಕೆಲವು ದೇಹಗಳು ಇನ್ನಷ್ಟೇ ಕೊಳೆಯಬೇಕಾಗಿದೆ. ಆ ಮೃತದೇಹಗಳನ್ನು ಇತ್ತೀಚೆಗೆ ದಫನ್ ಮಾಡಲಾಗಿದೆ,'' ಎಂದು ತಿಳಿಸಿದ್ದಾರೆ.
ಗಂಗಾ ನದಿಯಲ್ಲಿ ತೇಲಿದ ಶವಗಳು; ಪಕ್ಕದ ರಾಜ್ಯದತ್ತ ಪರಸ್ಪರ ಬೊಟ್ಟು!
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಅಭಿಲಾಶಾ ಗುಪ್ತಾ ನಂದಿ, ರಾಜ್ಯದಲ್ಲಿ ಅನೇಕ ಸಮುದಾಯಗಳು ಸಮಾಧಿ ಮಾಡುವ ದೀರ್ಘ ಸಂಪ್ರದಾಯವನ್ನು ಹೊಂದಿದೆ. ದೇಹಗಳನ್ನು ಮಣ್ಣಿನಲ್ಲಿ ಹೂತರೆ ಅದು ಕರಗುತ್ತದೆ. ಆದರೆ ಮರಳು ದಂಡೆಗಳು ದೇಹಗಳನ್ನು ಸಂರಕ್ಷಿಸುತ್ತವೆ. ನದಿಯಲ್ಲಿ ಸವೆತದಿಂದಾಗಿ ಮೃತದೇಹಗಳು ಮೇಲಕ್ಕೆ ಕಂಡಾಗ ನಾವು ಅದರ ಶವಸಂಸ್ಕಾರಗಳನ್ನು ನಡೆಸುತ್ತಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ.
ಯುಪಿ ಮತ್ತು ಬಿಹಾರದ ಅನೇಕ ಸ್ಥಳಗಳಲ್ಲಿ ಗಂಗಾ ನದಿಯ ಮರಳು ದಂಡೆಯಲ್ಲಿ ಸಮಾಧಿ ಮಾಡಲಾದ ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬಂದಿದ್ದು ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ಚರ್ಚೆಗೆ ಕಾರಣವಾಗಿತ್ತು. ಪೂರ್ವ ಉತ್ತರಪ್ರದೇಶದಲ್ಲಿ ಮತ್ತು ಬಿಹಾರದ ಕೆಳಭಾಗದಲ್ಲಿ ನೂರಾರು ಶವಗಳು ನೀರಿನಲ್ಲಿ ತೇಲಿ ಬಂದವು.
ಈ ಹಿನ್ನೆಲೆ ಸರ್ಕಾರದ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಸಾವುಗಳಿಗೆ ಕೋವಿಡ್ ಕಾರಣ ಎಂದು ಶಂಕಿಸಲಾಗಿದೆ. ರಾಜ್ಯದಲ್ಲಿ ಸಾವುನೋವುಗಳ ಸಂಖ್ಯೆ ಕಡಿಮೆ ವರದಿಯಾಗುತ್ತಿರುವುದು ಈ ಶಂಕೆಗೆ ಕಾರಣವಾಗಿದೆ. ಸಾವುಗಳು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ್ದು ಎಂಬುವುದನ್ನು ಉತ್ತರ ಪ್ರದೇಶ ಸರ್ಕಾರ ನಿರಾಕರಿಸಿತ್ತು. ''ನದಿ ದಡದಲ್ಲಿ ಸಮಾಧಿ ಮಾಡುವುದು ದೀರ್ಘಕಾಲದ ಸಂಪ್ರದಾಯವಾಗಿದೆ,'' ಎಂದು ಪ್ರತಿಪಾದಿಸಿತ್ತು.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಬಿಜೆಪಿಯ ಒಳಗೊಳಗೆ ಅಸಮಾಧಾನ ವ್ಯಕ್ತವಾದವು. ಹಲವಾರು ನಾಯಕರು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವ ಯೋಗಿ ಸರ್ಕಾರದ ವಿರುದ್ದ ಕಳವಳ ವ್ಯಕ್ತಪಡಿಸಿದ್ದರು. ಕೆಲವರು ಸಾಂಕ್ರಾಮಿಕ ರೋಗವನ್ನು ಯೋಗಿ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಪತ್ರಗಳನ್ನು ಬರೆದಿದ್ದರು.
ಈ ನಡುವೆ ಜೂನ್ ತಿಂಗಳ ಮಧ್ಯಾವಧಿಯಲ್ಲಿ ಕೆಲವು ಗಂಗಾ ನದಿ ತೀರಗಳಲ್ಲಿ ಹೂತ ಮೃತದೇಹಗಳನ್ನು ತೆಗೆದು ಎಲ್ಲಾ ವಿಧಿ ವಿಧಾನದೊಂದಿಗೆ ದಹನ ಮಾಡುವ ನಿರ್ಧಾರವನ್ನು ಆಡಳಿತ ಕೈಗೊಂಡಿತ್ತು. ಫಫಾಮೌ ಘಾಟ್ನ ವಲಯ ಅಧಿಕಾರಿ ನೀರಜ್ ಸಿಂಗ್ ಉಸ್ತುವಾರಿಯಲ್ಲಿ ಈ ಕಾರ್ಯ ಮಾಡಲಾಗುತ್ತಿತ್ತು.
"ನನ್ನ ಉನ್ನತ ಅಧಿಕಾರಿಗಳಿಂದ ಅನೌಪಚಾರಿಕ ಅನುಮೋದನೆ ಪಡೆದ ನಂತರ, ನನ್ನ ತಂಡವು ಸಮಾಧಿ ಮಾಡಿದ ದೇಹಗಳನ್ನು ಪತ್ತೆ ಮಾಡುತ್ತಿದ್ದು, ಆ ದೇಹಗಳ ನಾವು ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಬೇರೆ ಯಾರೂ ಶವವನ್ನು ಹೂತು ಹೋಗದಂತೆ ತಡೆಯುತ್ತೇವೆ. ಈ ದಡ ಸವೆತದಿಂದಾಗಿ ದೇಹವು ಮಣ್ಣಿನಿಂದ ಹೊರಕ್ಕೆ ಬರಬಹುದು ಅಥವಾ ನದಿಗೆ ಬೀಳಬಹುದು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ದೇಹವನ್ನು ಅಗೆದು ತೆಗೆದು ದಹನ ಕಾರ್ಯ ಮಾಡುತ್ತಿದ್ದೇವೆ," ಎಂದು ಪಿಎಂಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿಕೆ ಮಿಶ್ರಾ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)