ನನ್ನ ಜೀವನದಲ್ಲಿ ಇಂತಹ ಹೇಡಿ, ದುರ್ಬಲ ಪ್ರಧಾನಿ ನೋಡಿಲ್ಲ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ
Recommended Video
ಪ್ರತಾಪ್ ಗಢ್ (ಉತ್ತರಪ್ರದೇಶ), ಮೇ 9: "ಇಷ್ಟು ದುರ್ಬಲ ಹಾಗೂ ಇಂಥ ಹೇಡಿ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ" ಎಂದು ಕಾಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿಸುವ, ರೈತರ ಆದಾಯ ದ್ವಿಗುಣಗೊಳಿಸುವ ಮಾತನಾಡಿ, ಆ ನಂತರ ಈಡೇರಿಸದ ಭರವಸೆಗಳ ಬಗ್ಗೆ ಜನರು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ಹೇಳಲು ಸಹ ಮೋದಿಗೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಾಜಕೀಯ ಶಕ್ತಿಯು ದೊಡ್ಡ ಪ್ರರ್ಚಾರ ಸಭೆಗಳಿಂದಲೋ ಟಿ.ವಿ. ಶೋಗಳಿಂದಲೋ ಬರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೊಡ್ಡವರು. ಯಾರೇ ಆದರೂ ಅವರ ಸಮಸ್ಯೆ ಕೇಳಿಸಿಕೊಂಡು, ಪರಿಹರಿಸಬೇಕು. ವಿಪಕ್ಷಗಳನ್ನು ಕೇಳಿಸಿಕೊಳ್ಳುವ ಶಕ್ತಿ ಇರಬೇಕಿತ್ತು. ನಿಮ್ಮನ್ನು ಕೇಳಿಸಿಕೊಳ್ಳುವುದು ಪಕ್ಕಕ್ಕಿರಲಿ, ನಿಮಗೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ಈ ಪ್ರಧಾನಿಗೆ ಗೊತ್ತಿದೆಯಾ ಎಂದರು.
ನಿಮ್ಮನ್ನು (ಜನರನ್ನು) ವಂಚಿಸಲಾಗಿದೆ. ಅವರು (ಪ್ರಧಾನಿ) ಭ್ರಷ್ಟಾಚಾರ ನಿಯಂತ್ರಿಸುವ ಭರವಸೆ ನೀಡಿದರು. ಆದರೆ ಈಗ ಅವರೇ ಭ್ರಷ್ಟಾಚಾರಿ ಎಂಬುದು ಬಯಲಾಗಿದೆ. ತಮ್ಮ ಪ್ರಚಾರದ ಮೂಲಕ ವಾಸ್ತವವನ್ನು ಅವರು ಮರೆಮಾಚುತ್ತಾರೆ. ನಿಮ್ಮ ಬಳಿ ಬಂದಾಗ ಮೋದಿಗೆ ಹೇಳಿ, ಅಮೇಥಿಯಲ್ಲೇ ವಿದ್ಯುತ್ ಸಂಪರ್ಕವೇ ಇಲ್ಲದೆ ಮಹಿಳೆಯೊಬ್ಬರಿಗೆ ಮೂವತ್ತೈದು ಸಾವಿರ ವಿದ್ಯುತ್ ಬಿಲ್ ಬಂದಿದೆ. ಮತ್ತೊಬ್ಬರಿಗೆ ಐವತ್ತು ಸಾವಿರ ಬಂದಿದೆ ಎಂದು ಹೇಳಿದರು.
ದೊಡ್ಡ ಉದ್ಯಮಿಗಳ ಸಾಲ ಮನ್ನಾ ಆಯಿತು. ಆದರೆ ರೈತರ ಸಾಲ ಮನ್ನಾಕ್ಕೆ ರಾಹುಲ್ ಕೇಳಿದರೆ, ಅದಕ್ಕೆ ದುಡ್ಡಿಲ್ಲ ಎನ್ನುತ್ತಾರೆ. ಪ್ರಧಾನಿ ಅಷ್ಟೊಂದು ಪ್ರಭಾವಿ ಆಗಿದ್ದರೆ, ಅವರಿಗೇಕೆ ನಿಮ್ಮ ಸಮಸ್ಯೆ ತೀರಿಸಲು ಅಗುತ್ತಿಲ್ಲ ಅನ್ನೋದನ್ನು ತಿಳಿಸಲಿ. ಪ್ರತಿ ಭಾಷಣದಲ್ಲೂ ಪಾಕಿಸ್ತಾನ ಎನ್ನುತ್ತಾರೆ. ಇನ್ನೈದು ವರ್ಷದಲ್ಲಿ ಅವರ ಸರಕಾರ ಏನು ಮಾಡುತ್ತದೆ, ಈಗ ಏನು ಮಾಡಿದೆ ಅನ್ನೋದು ಹೇಳಲಿ. ನಿಮ್ಮಿಂದಾಗಿ ನಾವು ಇಲ್ಲಿದ್ದೇವೆ. ನಮಗಿಂತ ಜನರೇ ದೊಡ್ಡವರು ಎಂದರು.
ದೇಶದ ನಾನಾ ಭಾಗಗಳಿಂದ ಬಂದ ರೈತರು ದೆಹಲಿಯಲ್ಲಿ ಭೇಟಿಗೆ ಐದು ನಿಮಿಷದ ಸಮಯ ಕೇಳಿದರೆ ನೀಡಲಿಲ್ಲ. ತಮ್ಮ ಕ್ಷೇತ್ರ ವಾರಾಣಸಿಗೆ ಐದು ನಿಮಿಷ ಇಡಲಿಲ್ಲ. ಹಳ್ಳಿಗಳಿಗೆ ಭೇಟಿ ನೀಡಿ, ಜನರು ಹೇಗಿದ್ದಾರೆ ಎಂದು ವಿಚಾರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.