ವಿಕಾಸ್ ದುಬೆ ಬಹುಶಃ ಕಾನ್ಪುರ ತಲುಪಲ್ಲ; ಪೊಲೀಸರ ವಿಡಿಯೋ ವೈರಲ್!
ಲಕ್ನೋ, ಜುಲೈ 10: ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಮಾತುಕತೆಯ ವಿಡಿಯೋ ವೈರಲ್ ಆಗಿದೆ.
8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಮಧ್ಯಪ್ರದೇಶದಿಂದ ಆತನನ್ನು ಕಾನ್ಪುರಕ್ಕೆ ಕರೆತರುವಾಗ ನಗರದ ಹೊರವಲಯದಲ್ಲಿ ನಡೆದ ಎನ್ ಕೌಂಟರ್ನಲ್ಲಿ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ಮಧ್ಯಪ್ರದೇಶದ ಇಬ್ಬರು ಪೊಲೀಸರ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. "ಬಹುಶಃ ಆತ ಕಾನ್ಪುರ ತಲುಪುವುದಿಲ್ಲ" ಎಂದು ಒಬ್ಬ ಪೊಲೀಸ್ ಹೇಳಿದ್ದು ಚರ್ಚೆಗೆ ಕಾರಣವಾಗಿದೆ. ವಿಕಾಸ್ ದುಬೆ ಎನ್ ಕೌಂಟರ್ ನಕಲಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮತ್ತೆ ಪೊಲೀಸರನ್ನು ಕೊಲ್ಲಲು ಬಂದೂಕು ಹಿಡಿದಿದ್ದ ವಿಕಾಸ್ ದುಬೆ!
ಸುಮಾರು 60 ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಬೇಕಾಗಿದ್ದ ವಿಕಾಸ್ ದುಬೆ ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನ ನಡೆಸಿದಾಗ ಎನ್ ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ.
ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು!
ವಿಡಿಯೋದಲ್ಲಿ ಏನಿದೆ?
ವಿಕಾಸ್ ದುಬೆಯನ್ನು ಗುರುವಾರ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಠಾಣೆಯೊಂದರಲ್ಲಿ ಮಧ್ಯಪ್ರದೇಶದ ಪೊಲೀಸರು ವಿಕಾಸ್ ದುಬೆ ಕುರಿತು ಮಾತನಾಡುವ ವಿಡಿಯೋ ಇದಾಗಿದೆ. ವಿಕಾಸ್ ದುಬೆ ಎನ್ ಕೌಂಟರ್ ಆದ ಕೆಲವು ಗಂಟೆಗಳ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಹುಶಃ ಕಾನ್ಪುರ ತಲುಪಲ್ಲ
ವಿಡಿಯೋದಲ್ಲಿ ಪೊಲೀಸ್ ಒಬ್ಬರು "ವಿಕಾಸ್ ದುಬೆ ಎಷ್ಟು ಹೊತ್ತಿಗೆ ಕಾನ್ಪುರ ತಲುಪಬಹುದು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತೊಬ್ಬ ಪೊಲೀಸ್ ಅಧಿಕಾರಿ ನಗುತ್ತಾ "ಬಹುಶಃ ಅವನು (ವಿಕಾಸ್ ದುಬೆ) ಕಾನ್ಪುರ ತಲುಪುವುದಿಲ್ಲ ಎನಿಸುತ್ತದೆ" ಎಂದು ಹೇಳಿದ್ದಾರೆ.
ಕಾರು ಬದಲಾಯಿಸಿದ ಪೊಲೀಸರು
ಉತ್ತರ ಪ್ರದೇಶದ ಎಸ್ಟಿಎಫ್ ತಂಡ ಮೂರು ಕಾರುಗಳಲ್ಲಿ ಕಾನ್ಪುರಕ್ಕೆ ವಿಕಾಸ್ ದುಬೆ ಜೊತೆ ಆಗಮಿಸುತ್ತಿತ್ತು. ಮಧ್ಯಪ್ರದೇಶದಿಂದ ಆತ ಹೊರಟಾಗ ಟಾಟಾ ಸಫಾರಿ ಕಾರಿನಲ್ಲಿದ್ದ. ಆದರೆ, ಕಾನ್ಪುರ ಬಳಿ ಪಲ್ಪಿಯಾದ ಕಾರು ಸ್ಕಾರ್ಪಿಯೋ. ಪೊಲೀಸರು ಮಾರ್ಗ ಮಧ್ಯೆ ವಿಕಾಸ್ ದುಬೆ ಕಾರನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕಾರು ಪಲ್ಟಿಯಾಗಿತ್ತು
ಕಾನ್ಪುರ ನಗರದ ಹೊರವಲಯದಲ್ಲಿ ವಿಕಾಸ್ ದುಬೆ ಮತ್ತು ಪೊಲೀಸರು ಇದ್ದ ಕಾರು ಪಲ್ಟಿಯಾಗಿತ್ತು. ಆಗ ದುಬೆ ಪೊಲೀಸರ ಬಂದೂಕು ಕಿತ್ತಿಕೊಂಡು ಗುಂಡು ಹಾರಿಸಲು ಪ್ರಯತ್ನ ನಡೆಸಿದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ದುಬೆಗೆ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಆತ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.
|
ವಿಕಾಸ್ ದುಬೆ ಇದ್ದ ಕಾರು
ಕಾನ್ಪುರಕ್ಕೆ ವಿಕಾಸ್ ದುಬೆ ಬರುವ ಕಾರನ್ನು ಹಲವು ಮಾಧ್ಯಮಗಳು ಹಿಂಬಾಲಿಸುತ್ತಿದ್ದವು. ಎನ್ ಕೌಂಟರ್ಗೆ ಕೆಲವು ಗಂಟೆಗಳ ಮೊದಲು ಪೊಲೀಸರು ಮಾಧ್ಯಮಗಳ ವಾಹನಗಳನ್ನು ಹಿಂಬಾಲಿಸದಂತೆ ತಡೆದಿದ್ದರು.