ಮತ್ತೆ ಪೊಲೀಸರನ್ನು ಕೊಲ್ಲಲು ಬಂದೂಕು ಹಿಡಿದಿದ್ದ ವಿಕಾಸ್ ದುಬೆ!
ಲಕ್ನೋ, ಜುಲೈ 10: ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್, 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಮೃತಪಟ್ಟಿದ್ದಾನೆ. ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ.
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಪೊಲೀಸರು ವಿಕಾಸ್ ದುಬೆಯನ್ನು ಗುರುವಾರ ಬಂಧಿಸಿದ್ದರು. ಉತ್ತರ ಪ್ರದೇಶದ ಎಸ್ಟಿಎಫ್ ತಂಡ ಕಾನ್ಪುರಕ್ಕೆ ಆತನನ್ನು ಕರೆತರುತ್ತಿತ್ತು. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ ವಿಕಾಸ್ ದುಬೆ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ವಿಕಾಸ್ ದುಬೆ ಪತ್ನಿ ರಿಚಾ ದುಬೆ ಮತ್ತು ಪುತ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾನ್ಪುರದ ಆಸ್ಪತ್ರೆಯಲ್ಲಿ ವಿಕಾಸ್ ದುಬೆ ಶವದ ಮರಣೋತ್ತರ ಪರೀಕ್ಷೆಯೂ ಮುಗಿದಿದೆ. ಶವವನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಲಿದ್ದಾರೆ.
ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು!
8 ಪೊಲೀಸರನ್ನು ಕೊಂದು ಪರಾರಿಯಾಗಿದ್ದ ವಿಕಾಸ್ ದುಬೆ ಪುನಃ ಪೊಲೀಸರನ್ನು ಕೊಲ್ಲಲು ಬಂದೂಕು ಹಿಡಿದಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡಿದ್ದ, ಕಾನ್ಪುರ ಹೊರವಲಯದ ಹ್ಯಾಲೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪೊಲೀಸರ ಹತ್ಯೆ; ವಿಕಾಸ್ ದುಬೆ ಬಂಧಿಸಲು 25 ತಂಡ ರಚನೆ
ಮೂರು ವಾಹನದಲ್ಲಿದ್ದ ಪೊಲೀಸರು
ಉತ್ತರ ಪ್ರದೇಶದ ಎಸ್ಟಿಎಫ್ ತಂಡ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆದು ಕಾನ್ಪುರಕ್ಕೆ ಕರೆತರುತ್ತಿತ್ತು. ಮೂರು ವಾಹನದಲ್ಲಿ ಪೊಲೀಸರು ಇದ್ದರು. ಶುಕ್ರವಾರ ಬೆಳಗ್ಗೆ ಕಾನ್ಪುರ ನಗರದ ಹೊರ ವಲಯದಲ್ಲಿ ವಿಕಾಸ್ ದುಬೆ ಇದ್ದ ಕಾರು ಅಪಘಾತಕ್ಕೀಡಾಯಿತು.
ಭಾರೀ ಮಳೆ, ಕಾರು ಪಲ್ಟಿ
ಕಾನ್ಪುರ ಹೊರವಲಯದಲ್ಲಿ ಶುಕ್ರವಾರ ಬೆಳಗ್ಗೆ ಭಾರಿ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಿಕಾಶ್ ದುಬೆ ಇದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಂದೂಕು ಹಿಡಿದ ವಿಕಾಸ್ ದುಬೆ
ವಿಕಾಸ್ ದುಬೆ ಇದ್ದ ಕಾರು ಪಲ್ಪಿಯಾಗುತ್ತಿದ್ದಂತೆ ಹಿಂದಿನ ಕಾರಿನಲ್ಲಿದ್ದ ಪೊಲೀಸರು ಆಗಮಿಸಿ ಪೊಲೀಸರು ಮತ್ತು ವಿಕಾಸ್ ದುಬೆಯನ್ನು ಕಾರಿನಿಂದ ಹೊರಗೆ ಎಳೆದರು. ಈ ಸಂದರ್ಭದಲ್ಲಿ ಪೊಲೀಸರ ಬಂದೂಕು ಕಿತ್ತುಕೊಂಡ ದುಬೆ ಗುಂಡು ಹಾರಿಸಲು ಮುಂದಾದ, ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದರು.
ಆಸ್ಪತ್ರೆಯಲ್ಲಿ ಸಾವು
ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ವಿಕಾಸ್ ದುಬೆಗೆ ಗಾಯವಾಯಿತು. ತಕ್ಷಣ ಆತನನ್ನು ಹತ್ತಿರದ ಹ್ಯಾಲೆಟ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.