'ಅದು ಬಿಜೆಪಿಯ ಕೊರೊನಾ ಲಸಿಕೆ': ವೈದ್ಯರ, ವಿಜ್ಞಾನಿಗಳ ಶ್ರಮವನ್ನು ಅಣಕವಾಡಿದ ಮಾಜಿ ಸಿಎಂ
ಲಕ್ನೋ, ಜ 2: ಕೇಂದ್ರ ಸರಕಾರ ಹಮ್ಮಿಕೊಂಡಿರುವ ಕೋವಿಡ್ ಲಸಿಕೆಯ ಡ್ರೈರನ್ ಆರಂಭವಾದ ಹೊತ್ತಲ್ಲೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಬಗ್ಗೆ ಅಪಸ್ವರವನ್ನು ಎತ್ತಿದ್ದಾರೆ.
ಈ ಲಸಿಕೆಯನ್ನು ತಯಾರಿಸಲು ವೈದ್ಯರ ತಂಡ ಮತ್ತು ವಿಜ್ಞಾನಿಗಳು ಪಟ್ಟ ಶ್ರಮವನ್ನು ಅಣಕವಾಡುವಂತೆ ಹೇಳಿಕೆ ನೀಡಿರುವ ಅಖಿಲೇಶ್, " ಆ ಲಸಿಕೆಯನ್ನು ನಂಬುವುದಾದರೂ ಹೇಗೆ, ಅದು ಬಿಜೆಪಿಯ ಲಸಿಕೆ'ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಲಸಿಕೆ ಡ್ರೈ ರನ್ ಇಂದು: ಎಲ್ಲೆಲ್ಲಿ, ಹೇಗೆ?
ಆಕ್ಸ್ ಫರ್ಡ್ - ಅಸ್ಟ್ರಾಜೆನಿಕಾ ಕಂಪೆನಿಯ ಕೋವಿಶೀಲ್ಡ್ ಲಸಿಕೆ ಬಳಸುವಂತೆ ಕೇಂದ್ರ ಸರಕಾರ ರಚಿಸಿದ್ದ ವಿಶೇಷ ತಜ್ಞರ ಸಮಿತಿ ಶಿಫಾರಸನ್ನು ಮಾಡಿತ್ತು. ರೂಪಾಂತರಿ ಕೊರೊನೊ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಡ್ರೈರನ್ ನಡೆಸಲು ಅನುಮತಿ ನೀಡಿತ್ತು.
ಅದರಂತೇ ಉತ್ತರ ಪ್ರದೇಶದಲ್ಲೂ ಡ್ರೈರನ್ ನಡೆಸಲಾಗುತ್ತಿತ್ತು. "ಬಿಜೆಪಿ ಅನುಮೋದನೆ ನೀಡಿರುವ ಆ ಲಸಿಕೆಯನ್ನು ನಾನು ನಂಬುವುದಾದರೂ ಹೇಗೆ. ನಾನು ಆ ಲಸಿಕೆಯನ್ನು ಹಾಕಿಸಿಕೊಳ್ಳುವುದಿಲ್ಲ"ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
"2022ರ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ, ಎಲ್ಲಾ ಉತ್ತರ ಪ್ರದೇಶದ ನಾಗರೀಕರಿಗೆ ಕೊರೊನ ಲಸಿಕೆ ಮುಕ್ತವಾಗಿ ಹಂಚಲಾಗುವುದು"ಎಂದು ಅಖಿಲೇಶ್ ಯಾದವ್ ಹೇಳುವ ಮೂಲಕ, ಕೊರೊನಾ ಹಾವಳಿ, ಇನ್ನೂ ಎರಡು ವರ್ಷ ಇರಬೇಕೇ ಎಂದು ಪ್ರಶ್ನಿಸುವಂತಾಗಿದೆ.
ಮೈಸೂರಿನಲ್ಲಿ ಕೊರೊನಾ ಲಸಿಕಾ ಡ್ರೈ ರನ್ ಆರಂಭ: ಡಿಸಿ ಉದ್ಘಾಟನೆ
ಅಖಿಲೇಶ್ ಯಾದವ್ ಅವರ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷದ ವಿರುದ್ದ ಹಣೆಯಲು ಬಿಜೆಪಿ ಬಳಸಿಕೊಂಡಿದೆ. "ಕೊರೊನಾ ಲಸಿಕೆ ತಯಾರಿಸಿರುವ ಹಿಂದೆ, ಸಾವಿರಾರು ವೈದ್ಯರ ಮತ್ತು ವಿಜ್ಞಾನಿಗಳ ಪರಿಶ್ರಮವಿದೆ. ಅಖಿಲೇಶ್ ಯಾದವ್ ಇಡೀ ತಂಡವನ್ನೇ ಲೇವಡಿ ಮಾಡಿದ್ದಾರೆ"ಎಂದು ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಕಿಡಿಕಾರಿದ್ದಾರೆ.