ವಿಕಾಸ್ ದುಬೆಯನ್ನು ಪೊಲೀಸರು ಕೊಲ್ಲಬಹುದು: ಎನ್ಕೌಂಟರ್ಗೂ ಮೊದಲೇ 'ಸುಪ್ರೀಂ'ನಲ್ಲಿ ಅರ್ಜಿ
ದೆಹಲಿ, ಜುಲೈ 10: ಏಂಟು ಪೊಲೀಸರ ಹತ್ಯೆಗೈದು ಪರಾರಿಯಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.
ವಿಕಾಸ್ ದುಬೆಯ ಎನ್ಕೌಂಟರ್ಗೂ ಕೆಲವೇ ಗಂಟೆಗಳ ಮುಂಚೆ ''ಪೊಲೀಸರು ದುಬೆಯನ್ನು ಕೊಲ್ಲಬಹುದು, ವಿಕಾಸ್ ಗೆ ಜೀವ ಭಯ ಇದೆ'' ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್ಕೌಂಟರ್
ಈ ವಿಚಾರವನ್ನು ಭಾರತಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ವಕೀಲರ ಕುರಿತು ಸುದ್ದಿ ನೀಡುವ ''ಬಾರ್ ಅಂಡ್ ಬೆಂಚ್'' ಟ್ವಿಟ್ಟರ್ ಖಾತೆ ಹಂಚಿಕೊಂಡಿದೆ. ಈ ವಿಷಯ ವರದಿಯಾದ ಬಳಿಕ ಪೊಲೀಸ್ ಎನ್ಕೌಂಟರ್ ಕುರಿತು ಅನುಮಾನಗಳು ವ್ಯಕ್ತವಾಗುತ್ತಿದೆ. ಮುಂದೆ ಓದಿ....
|
'ದುಬೆ ಎನ್ಕೌಂಟರ್ ತಪ್ಪಿಸಿ' ಎಂದು ಮನವಿ
ಜುಲೈ 2ರಂದು ನಡೆದಿದ್ದ ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ಜುಲೈ 9 ರಂದು ಕಾನ್ಪುರ ಪೊಲೀಸರ ಬಂಧಿಸಿದ್ದರು. ವಿಕಾಸ್ ದುಬೆಯನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಎನ್ಕೌಂಟರ್ ಮಾಡುವ ಸಾಧ್ಯತೆ ಇದೆ. ತುರ್ತು ಈ ಅರ್ಜಿಯನ್ನು ಪರಿಶೀಲಿಸಿ ಎಂದು ವಿಕಾಸ್ ದುಬೆ ಸಾವಿಗೂ ಮುಂಚೆ ಸುಪ್ರೀಂಕೋರ್ಟ್ಗೆ ವಕೀಲರೊಬ್ಬರು ಮನವಿ ಮಾಡಿದ್ದರು.
ಸಿಬಿಐಗೆ ವಹಿಸಿ ಎಂದು ಆಗ್ರಹ
ಸುಪ್ರೀಂಕೋರ್ಟ್ಗೆ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿ ವಿಕಾಸ್ ದುಬೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಎಂದು ಮನವಿ ಮಾಡಲಾಗಿದೆ. ದುಬೆ ಬಂಧನಕ್ಕೂ ಮುಂಚೆ ಆತನ ನಾಲ್ಕು ಜನ ಸಹಚರರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ವಿಕಾಸ್ ದುಬೆ ಅವರ ಜೀವಕ್ಕೆ ರಕ್ಷಣೆ ಅಗತ್ಯ ಇದೆ, ಕೋರ್ಟ್ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ವಕೀಲರು ಕೋರಿದ್ದರು.
ಮತ್ತೆ ಪೊಲೀಸರನ್ನು ಕೊಲ್ಲಲು ಬಂದೂಕು ಹಿಡಿದಿದ್ದ ವಿಕಾಸ್ ದುಬೆ!
ಮೊದಲೇ ಎನ್ಕೌಂಟರ್ ಬಗ್ಗೆ ಮಾಹಿತಿ ಇತ್ತಾ?
ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲಿಂದ ಕಾನ್ಪುರಕ್ಕೆ ಪೊಲೀಸರ ಬೆಂಗಾವಲಿನ ವಾಹನದಲ್ಲಿ ಕರೆತರುವ ವೇಳೆ ಕಾರು ಪಲ್ಟಿಯಾಗಿದೆ. ಈ ವೇಳೆ ದುಬೆ ಪೊಲೀಸರ ಬಳಿ ಗನ್ ಕಸಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹಾಗಾಗಿ, ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಎನ್ಕೌಂಟರ್ ಕುರಿತು ಮೊದಲೇ ಮಾಹಿತಿ ಸಿಕ್ಕಿತ್ತಾ? ಆ ಕಾರಣದಿಂದಲೇ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಯಿತಾ ಎಂಬ ಚರ್ಚೆ ಹುಟ್ಟಿಕೊಂಡಿದೆ.
ನಕಲಿ ಎನ್ಕೌಂಟರ್ ಎಂದ ಅಖಿಲೇಶ್ ಯಾದವ್
ವಿಕಾಸ್ ದುಬೆ ಎನ್ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ''ಅಸಲಿಗೆ ಕಾರು ಪಲ್ಟಿಯಾಗಿಲ್ಲ. ಕಾರನ್ನು ಉರುಳಿಸಿ ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲಾಗಿದೆ'' ಎಂದು ಟೀಕಿಸಿದ್ದಾರೆ. ದುಬೆಯನ್ನು ಹತ್ಯೆ ಮಾಡಿ ಸರ್ಕಾರಕ್ಕೆ ಎದುರಾಗುತ್ತಿದ್ದ ಕಂಟಕವನ್ನು ತಪ್ಪಿಸಲಾಗಿದೆ ಎಂದು ಯಾದವ್ ಆರೋಪಿಸಿದ್ದಾರೆ.