ಉ.ಪ್ರದೇಶ: ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸ್ ಗುಂಡೇಟಿಗೆ ಬಲಿ
ಲಖನೌ, ಜನವರಿ 31: ಉತ್ತರ ಪ್ರದೇಶದ ಫಾರೂಕಾಬಾದ್ ಬಳಿಯ ಕೇಸರಿಯಾ ಗ್ರಾಮದಲ್ಲಿ 20 ಮಕ್ಕಳು ಹಾಗೂ ಕೆಲವು ಮಹಿಳೆರನ್ನು ಬಂದೂಕಿನಡಿ ಒತ್ತೆ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಕೊಂದು ಮಕ್ಕಳನ್ನು, ಮಹಿಳೆಯರನ್ನು ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ಕೇಸರಿಯಾ ಗ್ರಾಮದ ಸುಭಾಷ್ ಬಾತಮ್ ಎಂಬಾತ ತನ್ನ ಮಗಳ ಹುಟ್ಟುಹಬ್ಬಕ್ಕೆಂದು ನೆರೆ-ಹೊರೆಯವರನ್ನು ಕರೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಇಪ್ಪತ್ತು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಗನ್ ತೋರಿಸಿ ಬೆದರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಇದರಲ್ಲಿ ಆರು ತಿಂಗಳ ಮಗುವೂ ಸೇರಿತ್ತು.
ಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿ
ಪೊಲೀಸರು ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರಾದರೂ ಆತ ಗುಂಡು ಹಾರಿಸಿದ ಕಾರಣ ಮಾತು-ಕತೆ ಸಾಧ್ಯವಾಗಿರಲಿಲ್ಲ. ಕೊನೆಗೆ ಎಸ್ಪಿಜಿ ಭದ್ರತಾ ಪಡೆ ಬಂದು ಮಧರಾತ್ರಿ 1:20 ರ ವೇಳೆಗೆ ಸುಭಾಷ್ ಬಾತಮ್ ಗೆ ಗುಂಡು ಹೊಡೆದು ಕೊಂದು, ಮಕ್ಕಳು ಹಾಗೂ ಮಹಿಳೆಯರನ್ನು ರಕ್ಷಿಸಲಾಗಿದೆ.
ಸುಭಾಷ್ ಬಾತಮ್ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ. ತನ್ನನ್ನು ಸುಮ್ಮನೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತ ಮನೆಯ ಒಳಗಿನಿಂದ ಅರಚಾಡಿದ್ದ. ಸ್ಥಳೀಯ ಶಾಸಕರೊಂದಿಗೆ ಮಾತನಾಡಲು ಆತ ಬಯಸಿದ. ಶಾಸಕರನ್ನು ಕರೆಸಿದಾಗ ಆತ ಶಾಸಕರೊಂದಿಗೆ ಮಾತನಾಡಲಿಲ್ಲ.
ಆದರೆ ಪೊಲೀಸರ ಮಾತುಕತೆ ನಂತರ ಆರು ತಿಂಗಳ ಮಗುವನ್ನು ಆತ ಬಿಡುಗಡೆ ಮಾಡಿದ್ದ. ಮನೆಯ ತಾರಸಿಯಿಂದ ಪಕ್ಕದ ಮನೆಯ ವ್ಯಕ್ತಿಗೆ ಮಗುವನ್ನು ಸುಭಾಷ್ ನೀಡಿದ.
ಮಾತುಕತೆಗೆ ಸುಭಾಷ್ ಒಪ್ಪದ ಕಾರಣ ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಸುಭಾಷ್ ನ ಮನೆಯ ಮುಂದಿನ ಬಾಗಿಲನ್ನು ಒಡೆದು ಒಳನುಗ್ಗಿದ ಎಸ್ಪಿಜಿ ಮತ್ತು ಸ್ಥಳೀಯ ಪೊಲೀಸರು, ಸುಭಾಷ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ.
ಮಕ್ಕಳನ್ನು ರಕ್ಷಿಸಿದ್ದು, ಸುಭಾಷ್ ಯಾರಿಗೂ ಗಾಯಗೊಳಿಸಿಲ್ಲ. ಆದರೆ ಆತನೊಂದಿಗೆ ಮಾತು-ಕತೆಗೆ ಯತ್ನಿಸಿದ ಇಬ್ಬರು ಪೊಲೀಸ್ ಮತ್ತು ಒಬ್ಬ ಸ್ಥಳೀಯನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.
ಸತತ ಒಂಬತ್ತು ಗಂಟೆಗಳ ಸುಭಾಷ್ ಮಕ್ಕಳು ಹಾಗೂ ಮಹಿಳೆಯರನ್ನು ಒತ್ತೆಯಾಗಿರಿಸಿಕೊಂಡಿದ್ದ. ಈ ಪ್ರಕರಣದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಸತತ ಮಾಹಿತಿ ಪಡೆಯುತ್ತಿದ್ದರು.