ಗಾಂಧಿ ಹತ್ಯೆ ಮರುಸೃಷ್ಟಿಸಿದ್ದ ಹಿಂದೂ ಮಹಾಸಭಾ ನಾಯಕಿ ಬಂಧನ
ಗಾಂಧಿ ಹತ್ಯೆ ಮರುಸೃಷ್ಟಿಸಿದ್ದ ಹಿಂದೂ ಮಹಾಸಭಾ ನಾಯಕಿ ಬಂಧನಲಕ್ನೋ, ಫೆಬ್ರವರಿ 6: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆ ನಡೆದ ಜನವರಿ 30ರ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ಅವರ ಹತ್ಯೆಯ ಮರುಸೃಷ್ಟಿ ಮಾಡುವ ಮೂಲಕ ವಿವಾದಕ್ಕೀಡಾಗಿದ್ದ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಾಕುನ್ ಪಾಂಡೆ ಮತ್ತು ಆಕೆಯ ಪತಿ ಅಶೋಕ್ ಪಾಂಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿರುವ ಗಾಂಧಿ ಪಾರ್ಕ್ನ ಹಿಂದೂ ಮಹಾಸಭಾ ಕಚೇರಿಯಲ್ಲಿ ಹುತಾತ್ಮರ ದಿನದಂದು ಪೂಜಾ ಪಾಂಡೆ ಏರ್ ಪಿಸ್ತೂಲ್ನಿಂದ ಮಹಾತ್ಮ ಗಾಂಧಿ ಅವರ ಭಾವಚಿತ್ರವುಳ್ಳ ಪ್ರತಿಕೃತಿಗೆ ಮೂರು ಬಾರಿ ಗುಂಡು ಹಾರಿಸಿದ್ದರು. ಬಳಿಕ ಅದನ್ನು ಸುಟ್ಟುಹಾಕಿದ್ದರು. ಬಳಿಕ ಎಬಿಎಚ್ಎಂ ಸದಸ್ಯರು ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಸಹ ಅರ್ಪಿಸಿದ್ದರು.
ವೈರಲ್ ವಿಡಿಯೋ: ಹಿಂದು ಮಹಾಸಭಾದಿಂದ ಗಾಂಧಿ ಹತ್ಯೆಯ ಮರುಸೃಷ್ಟಿ!
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದಲ್ಲದೆ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಪೂಜಾ ಮತ್ತು ಆಕೆಯ ಪತಿ, ಎಬಿಎಚ್ಎಂನ ರಾಷ್ಟ್ರೀಯ ವಕ್ತಾರ ಅಶೋಕ್ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
|
ಯಾವ ಯಾವ ಪ್ರಕರಣ?
ಅವರ ವಿರುದ್ಧ ಐಪಿಸಿಯ 153-ಎ (ಧಾರ್ಮಿಕ, ಜನಾಂಗೀಯ, ಜನನ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ವಿಚಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಬಿತ್ತುವುದು), 295-ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ಧಾರ್ಮಿಕ ವರ್ಗದ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶದ ಕೃತ್ಯ ಎಸಗುವುದು) ಮತ್ತು 147 (ಗಲಭೆ) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಕೃತಿ ದಹನ ಮಾಡಿದ ಆರೋಪದಲ್ಲಿಯೂ ವಿಶೇಷ ಅಧಿಕಾರ ಕಾಯ್ದೆಯನ್ನು ಅವರ ವಿರುದ್ಧ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಪೂಜಿ 150 ನೇ ಜಯಂತಿ: ಅಮರ ಬಾಪು ಚಿಂತನ ವಿಶೇಷ ಸಂಚಿಕೆ ಪ್ರಕಟ
ಸಾಂವಿಧಾನಿಕ ಹಕ್ಕು
ನಾವು ಮಾಡಿರುವ ಕೆಲಸದ ಬಗ್ಗೆ ಪಶ್ಚಾತ್ತಾಪವಿಲ್ಲ. ಏಕೆಂದರೆ ನಾವು ಯಾವುದೇ ಅಪರಾಧ ಎಸಗಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡಿದ್ದೇವಷ್ಟೇ ಎಂದು ಪೂಜಾ ಪಾಂಡೆ ಹೇಳಿದ್ದಾರೆ. ಬಂಧಿತರಿಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಹಾತ್ಮ ಗಾಂಧಿ ಹತ್ಯೆ ತಡೆಯಬಹುದಿತ್ತೆಂದು ಕಾರಣ ಬಿಚ್ಚಿಟ್ಟ ಕಲ್ಯಾಣಮ್
ಸಮರ್ಥಿಸಿಕೊಂಡಿದ್ದ ಅಶೋಕ್ ಪಾಂಡೆ
ಗಾಂಧಿ ಹತ್ಯೆ ಕೃತ್ಯದ ಮರುಸೃಷ್ಟಿಯನ್ನು ಖಚಿತಪಡಿಸಿದ್ದ ಅಶೋಕ್ ಪಾಂಡೆ, ಅದನ್ನು ಸಮರ್ಥಿಸಿಕೊಂಡಿದ್ದರು.
'ರಾವಣನ ದಹನವನ್ನು ಹೀಗೆಯೇ ಮರುಸೃಷ್ಟಿ ಮಾಡಿ ಇಡೀ ದೇಶವೇ ಸಂಭ್ರಮಿಸುತ್ತದೆ. ಹೀಗಿರುವಾಗ ನಾವು ಮಾಡಿದ್ದು ತಪ್ಪೇನಿಲ್ಲ. ಅದನ್ನು ನಾವು ನಮ್ಮ ಕಚೇರಿಯ ಆವರಣದ ಒಳಗೆ ಮಾಡಿದ್ದೇವೆ. ಗಾಂಧೀಜಿ ನಮ್ಮ ದೇಶದ ವಿಭಜನೆಗೆ ಕಾರಣವಾದರು. ಇದರಿಂದ 10 ಲಕ್ಷಕ್ಕೂ ಹೆಚ್ಚು ಹಿಂದೂಗಳು ಸತ್ತರು' ಎಂದು ಅವರು ಹೇಳಿದ್ದರು.
ಯಾವುದು ಸಂಘಟನೆ? ಗೊಂದಲ
ಪೂಜಾ ಅವರು ಎಬಿಎಚ್ಎಂ ಸಂಘಟನೆಯ ಭಾಗವಲ್ಲ. ಅವರು ಬ್ಯಾನರ್ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪೂಜಾ ವಿರುದ್ಧ ಎಬಿಎಚ್ಎಂ ಸದಸ್ಯ ರಾಜೀವ್ ಕುಮಾರ್ ಎಂಬುವವರು ದೂರು ನೀಡಿದ್ದರು. ಎಬಿಎಚ್ಎಂ ಸ್ವಾಮಿ ಚಕ್ರಪಾಣಿ ಅಧ್ಯಕ್ಷರಾಗಿರುವ ಸಂಘಟನೆಯಾಗಿದೆ.
ನಮಗೂ ಸ್ವಾಮಿ ಚಕ್ರಪಾಣಿ ಅವರ ಎಬಿಎಚ್ಎಂಗೂ ಸಂಬಂಧವಿಲ್ಲ. ಪೊಲೀಸರು ತಪ್ಪಾಗಿ ಎಫ್ಐಆರ್ ದಾಖಲಿಸಿದ್ದಾರೆ. ನಾವು ಚಂದ್ರ ಪ್ರಕಾಶ್ ಕೌಶಿಕ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರಾಗಿದ್ದೇವೆ ಎಂದು ಅಶೋಕ್ ಪಾಂಡೆ ತಿಳಿಸಿದ್ದರು.