ಹಿಜಾಬ್ ವಿವಾದ: ವಾರಣಾಸಿಯಲ್ಲಿ ಓರ್ವನ ಬಂಧನ
ವಾರಣಾಸಿ, ಫೆಬ್ರವರಿ 22: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬಾರದು ಎಂದು ಶಾಲಾ ಅಧಿಕಾರಿಗಳಿಗೆ ಒತ್ತಾಯ ಮಾಡಿ ಏರ್ಪೋರ್ಟ್ ರಸ್ತೆಯಲ್ಲಿರುವ ಶಾಲೆಯೊಂದರ ಮುಂದೆ ನೂರಾರು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ ಯುವಕನನ್ನು ಶಿವಪುರ ಪೊಲೀಸರು ಬಂಧನ ಮಾಡಿದ್ದಾರೆ.
ಶಾಲೆಯಲ್ಲಿ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಮತ್ತು ಯಾವುದೇ ವಿದ್ಯಾರ್ಥಿನಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಶಾಲೆಯ ಪ್ರಾಂಶುಪಾಲೆ ನಿರ್ಮಲಾ ರಾಥೋಡ್ ಸ್ಪಷ್ಟಪಡಿಸಿದ್ದಾರೆ. ಶಾಲೆಯ ಪ್ರಾಂಶುಪಾಲೆ ನಿರ್ಮಲಾ ರಾಥೋಡ್ ದೂರಿನ ಮೇರೆಗೆ ಪೊಲೀಸರು ಭಾರ್ಲಾಯ್ ಪ್ರದೇಶದ ಹಿಮಾಂಶು ಚತುರ್ವೇದಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದು, ಬಳಿಕ ಬಂಧಿಸಿದ್ದಾರೆ.
ಭಜರಂಗದಳ ಕಾರ್ಯಕರ್ತನ ಹತ್ಯೆ: ಇದು ಪಿತೂರಿ ಎಂದ ಸಿಟಿ ರವಿ
ಕರ್ನಾಟಕದಲ್ಲಿ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದವು ಸದ್ಯ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸದ್ಯ ಹಿಜಾಬ್ ವಿವಾದವು ಹೈಕೋರ್ಟ್ನಲ್ಲಿ ವಿಚಾರಣೆಗೆ ಒಳಪಟ್ಟಿದೆ. ಈ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧ ಮಾಡಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟ ಮಾಡಿದೆ.
ಅಪ್ರಾಪ್ತ ಬಾಲಕರು ಮತ್ತು ಬಾಲಕಿಯರೊಂದಿಗೆ ಪ್ರತಿಭಟನೆ
ಭಾರ್ಲಾಯ್ ಪ್ರದೇಶದ ಹಿಮಾಂಶು ಚತುರ್ವೇದಿ ಅನೇಕ ಅಪ್ರಾಪ್ತ ಬಾಲಕರು ಮತ್ತು ಬಾಲಕಿಯರೊಂದಿಗೆ ಸೋಮವಾರ ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದರು ಎಂದು ಶಿವಪುರದ ಇನ್ಸ್ಪೆಕ್ಟರ್ ಎಸ್ಆರ್ ಗೌತಮ್ ಹೇಳಿದರು. 'ಹಿಜಾಬ್ ನಿಷೇಧಿಸಿ' ಮತ್ತು 'ಡ್ರೆಸ್ ಕೋಡ್ ಅನುಸರಿಸಿ' ಎಂಬ ಸಂದೇಶಗಳನ್ನು ಹೊಂದಿರುವ ಬ್ಯಾನರ್ ಮತ್ತು ಫಲಕಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು ಎಂದು ಕೂಡಾ ಹೇಳಿದ್ದಾರೆ.
ಶಾಲೆಯ ಪ್ರಾಂಶುಪಾಲರು ಅನೇಕ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಶಾಲೆಗೆ ಬರಲು ಅನುಮತಿ ನೀಡಿದ್ದಾರೆ ಎಂದು ಹಿಮಾಂಶು ಚತುರ್ವೇದಿ ಆರೋಪ ಮಾಡಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲೆ ನಿರ್ಮಲಾ ರಾಥೋಡ್ ಶಾಲೆಯಲ್ಲಿ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಮತ್ತು ಯಾವುದೇ ವಿದ್ಯಾರ್ಥಿನಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಧರ್ಮದ ವಿದ್ಯಾರ್ಥಿಗಳು ವಸ್ತ್ರಸಂಹಿತೆ ಪಾಲಿಸಬೇಕು: ಅಮಿತ್ ಶಾ
ಅಪ್ರಾಪ್ತರಿಗೆ ಎಚ್ಚರಿಕೆ ನೀಡಿದ ಪೊಲೀಸರು
ಅಪ್ರಾಪ್ತ ಬಾಲಕರು ಮತ್ತು ಬಾಲಕಿಯರನ್ನು ಸೇರಿಸಿ ಹಿಮಾಂಶು ಚತುರ್ವೇದಿ ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ಪಡೆದ ಶಿವಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಚತುರ್ವೇದಿ ಜೊತೆಗಿದ್ದ ಹುಡುಗ-ಹುಡುಗಿಯರೆಲ್ಲರೂ ಅಪ್ರಾಪ್ತರಾಗಿರುವುದರಿಂದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಇಂತಹ ಕೃತ್ಯಗಳಿಗೆ ಕೈಹಾಕದಂತೆ ಎಚ್ಚರಿಕೆ ನೀಡಿ ಮನೆಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಗೌತಮ್ ತಿಳಿಸಿದ್ದಾರೆ.
ಚತುರ್ವೇದಿಯನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು. ಇನ್ನು ಶಾಲೆಯ ಪ್ರಾಂಶುಪಾಲೆ ನಿರ್ಮಲಾ ರಾಥೋಡ್ , ಹಿಮಾಂಶು ಚತುರ್ವೇದಿ ಮಾಡಿದ ಆರೋಪಗಳನ್ನು ಆಧಾರರಹಿತವೆಂದು ಹೇಳಿಕೊಂಡಿದ್ದಾರೆ. ತಮ್ಮ ಸಂಸ್ಥೆಯಲ್ಲಿ ವಸ್ತ್ರ ಸಂಹಿತೆ ಪಾಲನೆ ಮಾಡಲಾಗುತ್ತಿದೆ ಎಂದು ಕೂಡಾ ಹೇಳಿದ್ದಾರೆ. ಹಾಗೆಯೇ ನಮ್ಮ ಸಂಸ್ಥೆಯಲ್ಲಿ ವಸ್ತ್ರ ಸಂಹಿತೆಯನ್ನು ಪಾಲಿಸಲಾಗುತ್ತದೆಯೇ ಇಲ್ಲವೇ ಎಂದು ಸಿಸಿಟಿವಿಯನ್ನು ಪರಿಶೀಲನೆ ಮಾಡಿ ಎಂದು ಕೂಡಾ ಪೊಲೀಸರಿಗೆ ಶಾಲೆಯ ಪ್ರಾಂಶುಪಾಲೆ ನಿರ್ಮಲಾ ರಾಥೋಡ್ ಸಲಹೆ ನೀಡಿದ್ದಾರೆ. ಶಾಲಾ ಆವರಣದ ಹೊರಗೆ ಧರಿಸುವ ಯಾವ ಉಡುಪಿಗೆ ಶಾಲಾ ಅಧಿಕಾರಿಗಳು ಜವಾಬ್ದಾರರಾಗಿರುವುದಿಲ್ಲ ಆದರೆ ಶಾಲೆಯ ಒಳಗೆ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಕೂಡಾ ಹೇಳಿದರು.
ಕರ್ನಾಟಕದಲ್ಲಿ ಹಿಜಾಬ್ ಹಕ್ಕಿಗಾಗಿ ಪ್ರತಿಭಟನೆ ನಡೆಯುತ್ತಿದ್ದು, ಉಡುಪಿಯ ಆರು ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರತಿದಿನ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಪದವಿಪೂರ್ವ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವಂತೆ ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪತ್ರ ಬರೆದಿದ್ದಾರೆ. ಹಿಜಾಬ್ ಧರಿಸಲು ಒತ್ತಾಯಿಸಿ ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರುಹಾಜರಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)