ಹತ್ರಾಸ್ ಅತ್ಯಾಚಾರ: ಸುಮ್ಮನಿರುವ ಸರ್ಕಾರದ ವಿರುದ್ಧ ಮಾಯಾವತಿ ಸಿಡುಕು
ಲಕ್ನೋ, ಅಕ್ಟೋಬರ್.04: ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಿಡಿ ಕಾರಿದ್ದಾರೆ.
ಸಂತ್ರಸ್ತೆ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದರೂ ಕೂಡಾ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದಿರುವುದು ತುಂಬಾ ನೋವಿನ ಮತ್ತು ಆತಂಕದ ಸಂಗತಿಯಾಗಿದೆ ಎಂದು ಮಾಯಾವತಿ ವಿಷಾದ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ಸಂತ್ರಸ್ತೆ ಕುಟುಂಬಸ್ಥರ ಬೇಡಿಕೆ ಮತ್ತು ಪ್ರಶ್ನೆಗಳ ಪಟ್ಟಿ
ಹತ್ರಾಸ್ ಸಂತ್ರಸ್ತೆಯ ಸಂಬಂಧಿಕರನ್ನು ಜಿಲ್ಲಾಡಳಿತದ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಷ್ಟಾದರೂ ಉತ್ತರ ಪ್ರದೇಶ ಸರ್ಕಾರವು ಮೌನ ವಹಿಸಿರುವುದು ತೀರಾ ದುರಂತದ ಸಂಗತಿಯಾಗಿದೆ. ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಗೆಯನ್ನೇನೋ ಸೂಚಿಸಿದೆ. ಆದರೆ ಅಲ್ಲಿಯೂ ಕೂಡಾ ಜಿಲ್ಲಾಡಳಿತದ ಅಧಿಕಾರಿಗಳಿರುತ್ತಾರೆ. ಇದರಿಂದ ಕುಟುಂಬ ಸದಸ್ಯರಿಗೆ ನ್ಯಾಯ ಸಿಗುತ್ತದೆ ಎಂದು ಹೇಗೆ ತಾನೇ ನಂಬುವುದಕ್ಕೆ ಸಾಧ್ಯ ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿಯಿಂದ ಸಂತ್ರಸ್ತೆ ಕುಟುಂಬಸ್ಥರಿಗೆ ಆವಾಜ್
ಹತ್ರಾಸ್ ಕುಟುಂಬ ಸದಸ್ಯರಿಗೆ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸಕರ್ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರವಾಣಿ ಮೂಲಕ " ನಿಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬೇಡಿ. ಈ ಮಾಧ್ಯಮದವರು ಇಂದು ಮತ್ತು ನಾಳೆವರೆಗೂ ಮಾತ್ರ ನಿಮ್ಮೊಂದಿಗೆ ಇರುತ್ತಾರೆ. ಕೊನೆಯವರೆಗೂ ನಿಮ್ಮ ಜೊತೆಗೆ ಇರಬೇಕಾದವರು ನಾವು. ನಿಮ್ಮ ಹೇಳಿಕೆಗಳನ್ನು ಬದಲಾಯಿಸುತ್ತೀರೋ ಇಲ್ಲವೋ ಯೋಚಿಸಿ ನೋಡಿ. ಇಲ್ಲದಿದ್ದರೆ ನಾವೇ ನಿಮ್ಮ ಹೇಳಿಕೆಗಳನ್ನು ಬದಲಾಯಿಸುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ ಅಂತಾ ಆರೋಪಿಸಲಾಗಿದೆ.
ಕುಟುಂಬ ಸದಸ್ಯರಿಗೆ ಹೇಳಿಕೆ ಬದಲಿಸುವಂತೆ ಹೆಚ್ಚಿದ ಒತ್ತಡ
ಹತ್ರಾಸ್ ಸಂತ್ರಸ್ತೆ ಸಾವಿನ ಬಗ್ಗೆ ಹೇಳಿಕೆ ಬದಲಿಸುವಂತೆ ಕುಟುಂಬ ಸದಸ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ಕೊರೊನಾವೈರಸ್ ಸೋಂಕಿನಿಂದ ಸಂತ್ರಸ್ತೆ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಲ್ಲಿ ಪರಿಹಾರದ ಹಣವನ್ನು ಕೊಡಿಸುತ್ತೇವೆ. ನೀವು ಹೇಳಿಕೆಗಳನ್ನು ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆಯ ಸಂಬಂಧಿಕ ಮಹಿಳೆಯೊಬ್ಬರು ವಿಡಿಯೋವೊಂದರಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಕುಟುಂಬ ಸದಸ್ಯರಿಗೆ ಬೆದರಿಕೆ ಆರೋಪ ಸುಳ್ಳು ಎಂದ ಡಿಸಿ
ಈಗಾಗಲೇ ಕುಟುಂಬ ಸದಸ್ಯರಿಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆರೋಪವನ್ನು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸಕರ್ ತಳ್ಳಿ ಹಾಕಿದ್ದಾರೆ. "ಸಂತ್ರಸ್ತೆ ಕುಟುಂಬದ ಸದಸ್ಯರ ಜೊತೆಗೆ ನಾನು ಫೋನ್ ನಲ್ಲಿ ಸಂಭಾಷಣೆ ನಡೆಸಿರುವುದೇ ಒಂದು ಊಹಾಪೋಹ. ಆರೋಪಿಗಳನ್ನು ಗಲ್ಲಿಗೇರಿಸುತ್ತಾರೋ ಇಲ್ಲವೋ ಎನ್ನುವುದೇ ಅವರ ಮುಖ್ಯ ಚಿಂತೆಯಾಗಿತ್ತು. ನಾನು ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದೆ. ಈ ವಿಷಯವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದೆ" ಎಂದು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸಕರ್ ತಿಳಿಸಿದ್ದರು.
ಹತ್ರಾಸ್ ಕುಟುಂಬ ಸದಸ್ಯರು ಕೇಳಿರುವ ಪ್ರಶ್ನೆಗಳು
- ಸುಪ್ರೀಂಕೋರ್ಟ್ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು
- ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರನ್ನು ಅಮಾನತುಗೊಳಿಸುವುದರ ಜೊತೆಗೆ ಯಾವುದೇ ದೊಡ್ಡ ಹುದ್ದೆಗಳನ್ನು ನೀಡಬಾರದು.
- ನಮ್ಮ ಅನುಮತಿಯಿಲ್ಲದೇ ನಮ್ಮ ಮಗಳ ಮೃತದೇಹವನ್ನು ಏಕೆ ಸುಟ್ಟಿರಿ.
- ನಮಗೆ ಪದೇ ಪದೇ ಬೆದರಿಕೆ ಹಾಕುವುದು ಏಕೆ ಮತ್ತು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಏಕೆ?
- ಮಾನವೀಯ ದೃಷ್ಟಿಯಿಂದ ಶವಸಂಸ್ಕಾರದ ಚಿತೆಯನ್ನು ಸಂಗ್ರಹಿಸಲಾಗಿದೆ. ಆದರೆ ಆ ಅವಶೇಷಗಳು ನಮ್ಮ ಮಗಳ ಮೃತದೇಹದ್ದೇ ಎಂದು ನಾವು ಹೇಗೆ ನಂಬಬೇಕು.