ಯಾವ ಶಕ್ತಿಯೂ ನಮ್ಮನ್ನು ತಡೆಯಲಾಗದು: ರಾಹುಲ್ ಗಾಂಧಿ
ಹತ್ರಾಸ್, ಅಕ್ಟೋಬರ್ 3: ಉತ್ತರ ಪ್ರದೇಶದಲ್ಲಿ ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರೆ ನಾಯಕರು ಶನಿವಾರ ಭೇಟಿ ನೀಡಿದರು. ಶುಕ್ರವಾರ ನಡೆದ ತೀವ್ರ ನಾಟಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಹತ್ರಾಸ್ ಸಮೀಪ ಬರಲೂ ಪೊಲೀಸರು ಅವಕಾಶ ನೀಡಿರಲಿಲ್ಲ.
ಅತ್ಯಾಚಾರ ಸಂತ್ರಸ್ತೆಯ ಪೋಷಕರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡಿದ ರಾಹುಲ್ ಹಾಗೂ ಪ್ರಿಯಾಂಕಾ ಅವರಿಗೆ ಸಾಂತ್ವನ ಹೇಳಿದರು. 'ಯಾವ ಶಕ್ತಿಯೂ ನಮ್ಮನ್ನು ಮೌನವಾಗಿರಿಸಲಾರದು' ಎಂದು ಈ ಭೇಟಿಯ ಬಳಿಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಈ ಸಂಕಷ್ಟದಲ್ಲಿರುವ ಕುಟುಂಬ ನಮ್ಮ ಜತೆ ತಮ್ಮ ನೋವು ಹಂಚಿಕೊಳ್ಳುವ ಸಲುವಾಗಿ ಅವರನ್ನು ಭೇಟಿ ಮಾಡಲು ನಾವು ಹತ್ರಾಸ್ಗೆ ಹೋಗುವುದನ್ನು ಜಗತ್ತಿನಲ್ಲಿ ಯಾವುದೂ ತಡೆಯಲಾಗದು. ಸಂತ್ರಸ್ತೆಯ ಕುಟುಂಬವನ್ನು ರಕ್ಷಿಸುವುದು ಉತ್ತರ ಪ್ರದೇಶ ಸರ್ಕಾರದ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಹೇಳಿದರು. ಮುಂದೆ ಓದಿ.
ಯಾರೂ ತಡೆಯಲಾರರು
ಎಲ್ಲಿಯೇ ಯಾವುದೇ ತಪ್ಪು ನಡೆದರೂ ಅವರಿಗೆ ನ್ಯಾಯ ಸಿಗುವುದನ್ನು ಖಾತರಿಪಡಿಸಿಕೊಳ್ಳಲು ನಾವು ಅಲ್ಲಿರುತ್ತೇವೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ ಪ್ರಿಯಾಂಕಾ, ಆಕೆಯನ್ನು ಅಪ್ಪಿಕೊಂಡು ಸಂತೈಸಿದರು.
ಪೊಲೀಸರ ಜತೆ ವಾಗ್ವಾದ
ದಲಿತ ಕುಟುಂಬದ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನು ದೆಹಲಿ-ನೋಯ್ಡಾ ಡೈರೆಕ್ಟ್ (ಡಿಎನ್ಡಿ) ಟೋಲ್ ಪ್ಲಾಜಾದ ಬಳಿ ಉತ್ತರ ಪ್ರದೇಶದ ಪೊಲೀಸರು ತಡೆದಿದ್ದರು. ಈ ಸಂದರ್ಭದಲ್ಲಿ ಕೆಲವು ಸಮಯ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಬ್ಯಾರಿಕೇಡ್ ಅಡ್ಡ ಹಿಡಿದ ಪ್ರಿಯಾಂಕಾ
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಲು ಮುಂದಾದಾಗ ಪ್ರಿಯಾಂಕಾ ಗಾಂಧಿ ಕಾರ್ಯಕರ್ತರಿಗೆ ಅಡ್ಡಲಾಗಿ ನಿಂತು ಅವರ ರಕ್ಷಣೆ ಮಾಡಿದರು. ಕಡು ನೀಲಿ ಬಣ್ಣದ ಕುರ್ತಾ ಮತ್ತು ಮಾಸ್ಕ್ ಧರಿಸಿದ್ದ ಪ್ರಿಯಾಂಕಾ, ಪೊಲೀಸರ ಲಾಠಿಚಾರ್ಜ್ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಪುಟ್ಟ ಹಳದಿ ಬ್ಯಾರಿಕೇಡ್ ಅಡ್ಡ ಹಿಡಿದಿದ್ದರು. ಪೊಲೀಸರು ಪ್ರಿಯಾಂಕಾ ಅವರನ್ನು ಹಿಡಿದು ಎಳೆದ ಘಟನೆಯೂ ನಡೆಯಿತು.
ಸಿಬಿಐ ತನಿಖೆಗೆ ಶಿಫಾರಸು
ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹತ್ರಾಸ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣವನ್ನು ನಿರ್ವಹಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂದು ವಿರೋಧಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.