ಹತ್ರಾಸ್ ಅತ್ಯಾಚಾರ: ಎಸ್ಐಟಿ, ಸಿಬಿಐ ಮೇಲೆ ನಂಬಿಕೆ ಇಲ್ಲ, ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಲಿ
ಹತ್ರಾಸ್, ಅಕ್ಟೋಬರ್ 3: ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮನೆಯ ಸುತ್ತಲೂ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರನ್ನು ಮಾತನಾಡಿಸಲು ಕೊನೆಗೂ ಮಾಧ್ಯಮದವರಿಗೆ ಅವಕಾಶ ನೀಡಲಾಗಿದೆ.
ಪ್ರಕರಣದ ತನಿಖೆಗೆ ನಿಯೋಜಿಸಿರುವ ವಿಶೇಷ ತನಿಖಾ ತಂಡವು ಸರ್ಕಾರದ ಕೈಗೊಂಬೆಯಾಗಿದೆ. ಹೀಗಿರುವಾಗ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ಅಲ್ಲದೆ, ಇದರಲ್ಲಿ ಸಿಬಿಐ ತನಿಖೆ ನಡೆದರೂ ನಮಗೆ ವಿಶ್ವಾಸವಿಲ್ಲ. ಸುಪ್ರೀಂಕೋರ್ಟ್ನ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು ಕುಟುಂಬ ಒತ್ತಾಯಿಸಿದೆ.
ರಾಹುಲ್ ಗಾಂಧಿ ನಿಯೋಗದಿಂದ ಹತ್ರಾಸ್ ಸಂತ್ರಸ್ತೆಯ ಕುಟುಂಬದವರ ಭೇಟಿ
ತಮ್ಮ ಹಾಜರಾತಿ ಇಲ್ಲದೆ ಮಗಳ ಅಂತ್ಯಸಂಸ್ಕಾರ ನಡೆಸದಂತೆ ಪೊಲೀಸರನ್ನು ಕಾಡಿ ಬೇಡಿಕೊಂಡರೂ ಅವರು ಅದಕ್ಕೆ ಬೆಲೆ ನೀಡಲಿಲ್ಲ ಎಂದು ಯುವತಿಯ ತಾಯಿ ಕಣ್ಣೀರು ಸುರಿಸಿದರು. ನಮಗೆ ನಾರ್ಕೋ ಪರೀಕ್ಷೆ ಮಾಡಿಸುವುದಿಲ್ಲ. ಹಾಗೆಂದರೆ ಏನು ಎನ್ನುವುದೇ ನಮಗೆ ಗೊತ್ತಿಲ್ಲ ಎಂದಿರುವ ತಾಯಿ, ನಾವು ಎಂದಿಗೂ ನಮ್ಮ ಹೇಳಿಕೆಯನ್ನು ಬದಲಿಸಿಲ್ಲ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಆಡಳಿತಾಧಿಕಾರಿಗಳು ನನ್ನ ಮಗಳ ದೇಹವನ್ನು ನನಗೆ ನೀಡಲಿಲ್ಲ. ನಾನು ಅವರಿಗೆ ಅಂಗಲಾಚುತ್ತಲೇ ಇದ್ದೆ. ಆದರೂ ಕೊಡಲಿಲ್ಲ. ನಮಗೆ ಸಿಬಿಐ ತನಿಖೆ ಬೇಡ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಮೊದಲು ನಾರ್ಕೋ ಪರೀಕ್ಷೆಗೆ ಒಳಪಡಿಸಬೇಕು. ಏಕೆಂದರೆ ಅವರಿಬ್ಬರೂ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯ ಸಂಬಂಧಿಕರು ಆಗ್ರಹಿಸಿದ್ದಾರೆ. ಕುಟುಂಬ ಯಾವ ಸದಸ್ಯರೂ ಯಾವುದೇ ರಾಜಕೀಯ ಮುಖಂಡರ ಜತಗೆ ಫೋನ್ನಲ್ಲಿ ಮಾತನಾಡಿಲ್ಲ. ರಾಜಕಾರಣಿಗಳು ಕೇವಲ ರಾಜಕೀಯ ಮಾಡುವುದನ್ನೇ ಬಯಸುತ್ತಾರೆ. ಅವರು ಯಾವುದೇ ಒಳಿತಿಗಾಗಿಯೂ ಇಲ್ಲಿಗೆ ಬರುತ್ತಾರೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ.
ತಮ್ಮದೇ ಪಕ್ಷದ ಯೋಗಿ ವಿರುದ್ಧ ಉಮಾ ಭಾರತಿ ಆಕ್ರೋಶ
ಎಸ್ಐಟಿಯ ಯಾವ ಅಧಿಕಾರಿಯೂ ಇದುವರೆಗೂ ತನಿಖೆಗೆ ಬಂದಿಲ್ಲ ಎಂದು ಸಂಬಂಧಿಕರು, ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ನಡೆಸುತ್ತಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಯುವತಿಯ ಮೃತದೇಹವನ್ನು ಸುಟ್ಟುಹಾಕಿಲ್ಲ. ಆ ದೇಹವನ್ನು ಎಲ್ಲಿಯೋ ಅಡಗಿಸಿಡಲಾಗಿದೆ. ಯಾರ ದೇಹವನ್ನು ಸುಡಲಾಗಿದೆ ಎಂಬ ಬಗ್ಗೆ ಪೊಲೀಸರು ಸ್ಪಷ್ಪಡಿಸಲಿ ಎಂದು ಯುವತಿಯ ತಂದೆ ಒತ್ತಾಯಿಸಿದ್ದಾರೆ.