ಅತ್ಯಾಚಾರ ಎಂದರೇನು: ಯುಪಿ ಎಡಿಜಿಪಿಗೆ ಕಾಂಗ್ರೆಸ್ ನಾಯಕಿ ಕಾನೂನಿನ ಪಾಠ
ಲಕ್ನೋ, ಅಕ್ಟೋಬರ್.01: ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗದ ಹಿನ್ನೆಲೆ ಆಕೆ ಅತ್ಯಾಚಾರಕ್ಕೆ ಒಳಗಾಗಿಲ್ಲ ಎಂಬ ಉತ್ತರ ಪ್ರದೇಶದ ಎಡಿಜಿ ಪ್ರಶಾಂತ್ ಕುಮಾರ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡೆ ಸುಪ್ರಿಯಾ ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1994ರಲ್ಲಿ ಬಬುಲ್ ನಾಥ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಒಮ್ಮೆ ನೋಡಿಕೊಳ್ಳಿ ಎಂದು ಕಿಡಿ ಕಾರಿದ್ದಾರೆ. "2013ರಲ್ಲಿ ಮಾಡಿದ 375ರ ತಿದ್ದುಪಡಿಯಲ್ಲಿ ಅತ್ಯಾಚಾರ ಎಂದರೇನು ಎನ್ನುವುದರ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿದೆ. ಆದರೆ ಎಡಿಜಿ ಪ್ರಶಾಂತ್ ಕುಮಾರ್ ಅವರೇ, ನೀವು ಇಂದಿಗೂ 30 ವರ್ಷಗಳ ಹಿಂದಿನ ಕಾನೂನಿನ ಬಗ್ಗೆಯೇ ಮಾತನಾಡುತ್ತಿದ್ದೀರಲ್ಲ" ಎಂದು ಪ್ರಶ್ನೆ ಮಾಡಿದ್ದಾರೆ.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮರಣೋತ್ತರ ವರದಿಯಲ್ಲಿ ಸತ್ಯ ಬಹಿರಂಗ
ಕಳೆದ 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಅತ್ಯಾಚಾರದ ವ್ಯಾಖ್ಯಾನದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. "ಅತ್ಯಾಚಾರವನ್ನು ಗುರುತಿಸುವುದಕ್ಕೆ ವೀರ್ಯ ಪತ್ತೆಯಾಗುವುದು ಅಥವಾ ಶಿಶ್ನದ ನುಗ್ಗಿರುವ ಬಗ್ಗೆ ಸಾಕ್ಷಿ ಬೇಕು ಅಂತಲೇ ಏನಿಲ್ಲ. ಶಿಶ್ನ ನುಗ್ಗಿಸುವಂತೆ ಪ್ರಯತ್ನಿಸಿದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ" ಎಂದು ಕಾಂಗ್ರೆಸ್ ಮುಖಂಡೆ ಸುಪ್ರಿಯಾ ಶ್ರೀನಾಥ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ವಿಧಿವಿಜ್ಞಾನ ಇಲಾಖೆ ವರದಿ ಬಗ್ಗೆ ಎಡಿಜಿ ಸ್ಪಷ್ಟನೆ:
ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷಾ ವರದಿ ಬಗ್ಗೆ ಎಡಿಜಿ ಪ್ರಶಾಂತ್ ಕುಮಾರ್ ಸ್ಪಷ್ಟನೆ ನೀಡಿದ್ದರು. "ಅತ್ಯಾಚಾರಕ್ಕೆ ಒಳಗಾಗಿದ್ದಾರರೆ ಎನ್ನಲಾದ ಯುವತಿಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗಿಲ್ಲ" ಎಂದು ಹೇಳಿದ್ದರು. ದಲಿತ ಯುವತಿ ಎನ್ನುವ ಕಾರಣಕ್ಕೆ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟಾಗುವಂತಾ ತಪ್ಪು ಮಾಹಿತಿಯನ್ನು ರವಾನಿಸುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ADG L&O UP says no semen so no rape in #HathrasCase
— Supriya Shrinate (@SupriyaShrinate) October 1, 2020
-IPC Sec 375 as amended in 2013
-SC verdict in state of UP vs Babulnath 1994 clearly state no semen or penis penetration is needed to establish rape. An attempt to penetrate is also rape
Law has changed over the years. Shame pic.twitter.com/AJVOOgjKVv
ಕಾನೂನು ಸುವ್ಯವಸ್ಥೆ ಉಸ್ತುವಾರಿಗೆ ಕಾನೂನಿನ ಅರಿವಿಲ್ಲ:
"ಎಡಿಜಿ ಪ್ರಶಾಂತ್ ಕುಮಾರ್ ಅವರು ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುವವರು. ಅಂಥವರಿಗೇ ಕಾನೂನಿನ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವಂತೆ ವರ್ತಿಸಿದರೆ ಏನು ಹೇಳಬೇಕು. ಅತ್ಯಾಚಾರ ಖಚಿತಗೊಳ್ಳಬೇಕಿದ್ದಲ್ಲಿ ಸಂತ್ರಸ್ತೆಯ ದೇಹದಲ್ಲಿ ವೀರ್ಯ ಪತ್ತೆಯಾಗಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡುತ್ತಾರೆ. ಇಂದಿಗೂ ಅವರು 30 ವರ್ಷಗಳ ಹಿಂದಿನ ಕಾನೂನಿನ ಬಗ್ಗೆ ಮಾತನಾಡುತ್ತಿರುವುದು ವಿಷಾದನನೀಯ ಸಂಗತಿ" ಎಂದು ಕಾಂಗ್ರೆಸ್ ಮುಖಂಡೆ ಸುಪ್ರಿಯಾ ಶ್ರೀನಾಥ್ ಕಿಡಿ ಕಾರಿದ್ದಾರೆ.