ಹತ್ರಾಸ್ ನಿರ್ಭಯಾಳದ್ದು ಸಾವಲ್ಲ, ಕೊಲೆ ಎಂದ ಸೋನಿಯಾ ಗಾಂಧಿ
ಲಕ್ನೋ, ಅಕ್ಟೋಬರ್.01: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. 'ನಿರ್ದಯಿ ಸರ್ಕಾರದಿಂದ ಅಮಾಯಕ ಹೆಣ್ಣು ಮಗಳ ಹತ್ಯೆ'ಯಾಗಿದೆ ಎಂದು ಟೀಕಿಸಿದ್ದಾರೆ.
ಸಪ್ಟೆಂಬರ್.19ರಂದು ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿಯ ಕತ್ತು ಹಿಸುಕಿ, ನಾಲಗೆಯನ್ನು ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಮಂಗಳವಾರ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು.
ಹತ್ರಾಸ್ ಅತ್ಯಾಚಾರ: ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ, ಉದ್ಯೋಗ ಪ್ರಕಟಿಸಿದ ಯೋಗಿ
ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಅಂತ್ಯ ಸಂಸ್ಕಾರವನ್ನು ಪೊಲೀಸರು ಬುಧವಾರ ಮಧ್ಯರಾತ್ರಿ 2.30ರ ಸಮಯದಲ್ಲಿ ನೆರವೇರಿಸಿದ್ದರು. ಅಂತ್ಯಸಂಸ್ಕಾರಕ್ಕೂ ಮೊದಲು ನಡೆದ ಘಟನೆ ದೃಶ್ಯ ಸೆರೆ ಹಿಡಿಯಲಾಗಿದ್ದು, ಸಾಕಷ್ಟು ಗೊಂದಲ ಸೃಷ್ಟಿಸಿದೆ. ಸಂತ್ರಸ್ತೆಯ ಸಂಬಂಧಿಕರಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ನೀಡದೇ, ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಹೊತ್ತೊಯ್ಯಲಾಗಿತ್ತು.
ಸೂಕ್ತ ಚಿಕಿತ್ಸೆ ನೀಡದ ಕಾರಣಕ್ಕೆ ಯುವತಿ ಸಾವು
ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಈ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉಲ್ಲೇಖಿಸಿದ್ದಾರೆ. "ಹತ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಗೆ ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ನೀಡದ ಕಾರಣಕ್ಕಾಗಿ ಅವಳನ್ನು ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಹತ್ರಾಸ್ ನಿರ್ಭಾಯ ಸಾವು ಸಾಮಾನ್ಯವಾದ ಸಾವಲ್ಲ ಅದೊಂದು ಕೊಲೆ ಎಂದು ಹೇಳುವುದಕ್ಕೆ ನಾನು ಬಯಸುತ್ತೇನೆ" ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂಷಿಸಿದ್ದಾರೆ.
ಮಗಳ ಅಂತ್ಯಸಂಸ್ಕಾರಕ್ಕೆ ತಾಯಿಗಿಲ್ಲ ಅನಮತಿ
ಜೀವಂತವಾಗಿದ್ದ ಸಂದರ್ಭದಲ್ಲಿ ಆಕೆಯನ್ನು ರಕ್ಷಿಸುವುದಕ್ಕೆ ಆಗಲಿಲ್ಲ. ಸತ್ತ ಮೇಲೂ ಆಕೆಗೆ ನೆಮ್ಮದಿಯನ್ನು ನೀಡಲಿಲ್ಲ. ಅವಳ ಕುಟುಂಬಸ್ಥರಿಗೆ ಮೃತದೇಹವನ್ನು ಒಪ್ಪಿಸಲಿಲ್ಲ. ಕನಿಷ್ಠ ಪಕ್ಷ ಮಗಳಿಗೆ ಅಂತಿಮ ವಿದಾಯ ಹೇಳುವುದಕ್ಕೂ ಅವಕಾಶ ನೀಡದ ರೀತಿಯಲ್ಲಿ ಪೊಲೀಸರೇ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ. ಯುವತಿ ಸಾವಿನ ನಂತರವೂ ಘನತೆಯನ್ನು ಕಿತ್ತುಕೊಳ್ಳುವ ರೀತಿಯಲ್ಲಿ ಅನಾಥ ಶವದಂತೆ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ಇದೊಂದು ದೊಡ್ಡ ದುರಂತ" ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.
"ಅನ್ಯಾಯವನ್ನು ಪ್ರಶ್ನಿಸುವವರೇ ಇಲ್ಲ ಎಂದುಕೊಂಡಿರಾ?"
"ಇದು ಯಾವ ರೀತಿಯ ನ್ಯಾಯ? ಇದು ಯಾವ ರೀತಿಯ ಸರ್ಕಾರ? ನೀವು ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡಿದ್ದೀರಾ. ದೇಶದ ಜನತೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮಿಸುತ್ತಿರುತ್ತದೆ. ನೀವು ಮಾಡುವ ಅನ್ಯಾಯದ ವಿರುದ್ಧ ಖಂಡಿತವಾಗಿಯೂ ಧ್ವನಿ ಎತ್ತುತ್ತದೆ" ಎಂದು ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
ಹತ್ರಾಸ್ ತನಿಖೆಗೆ ವಿಶೇಷ ತಂಡ ರಚಿಸಿದ ಸಿಎಂ ಯೋಗಿ
ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶೇಷ ತನಿಖಾ ತಂಡವು ರಚಿಸಿದ್ದಾರೆ. ಮುಂದಿನ ಏಳು ದಿನಗಳಲ್ಲೇ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಸೂಚನೆಯನ್ನೂ ನೀಡಲಾಗಿದೆ. ಕ್ರೌರ್ಯ ತೋರಿದ ನಾಲ್ವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸರ ನಡೆ ಬಗ್ಗೆ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.