ತಮ್ಮದೇ ಪಕ್ಷದ ಯೋಗಿ ವಿರುದ್ಧ ಉಮಾ ಭಾರತಿ ಆಕ್ರೋಶ
ಲಕ್ನೋ, ಅಕ್ಟೋಬರ್ 2: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮತ್ತು ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆ ತರುವ ಬಗ್ಗೆ ಆಲೋಚನೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ ಗಂಟೆಯಲ್ಲಿಯೇ ಈ ಆದೇಶ ಹೊರಡಿಸಲಾಗಿದೆ.
ಹತ್ರಾಸ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಡಿಎಂ ಪ್ರವೀಣ್ ಲಕ್ಸಕರ್, 'ಇಂದು ಅರ್ಧದಷ್ಟು ಮಾಧ್ಯಮದ ಜನರು ಇಲ್ಲಿಂದ ಹೋಗಿದ್ದಾರೆ. ಇನ್ನು ಉಳಿದ ಅರ್ಧದಷ್ಟು ಮಂದಿ ನಾಳೆ ಹೋಗುತ್ತಾರೆ. ನಾವು ಮಾತ್ರವೇ ನಿನ್ನ ಜತೆ ಕುಳಿತುಕೊಳ್ಳುವುದು. ನೀನು ನಿನ್ನ ಹೇಳಿಕೆಯನ್ನು ಬದಲಿಸಿಕೊಳ್ಳುತ್ತೀಯೋ ಇಲ್ಲವೋ' ಎಂದು ಸಂತ್ರಸ್ತೆಯ ತಂದೆಗೆ ಬೆದರಿಕೆ ಹಾಕಿದ್ದರು. ಹೀಗಾಗಿ ಡಿಎಂ ಅವರನ್ನೂ ಅಮಾನತುಗೊಳಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಹತ್ರಾಸ್ ಸಂತ್ರಸ್ತೆ ಸಂಬಂಧಿಕರನ್ನು ಮನೆಯಲ್ಲೇ ಕೂಡಿಟ್ಟರಾ ಪೊಲೀಸರು?
ಬಿಜೆಪಿ ನಾಯಕಿ ಉಮಾ ಭಾರತಿ ತಮ್ಮದೇ ಪಕ್ಷದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿರುವ ಉಮಾ ಭಾರತಿ, ಇದು ಉತ್ತರ ಪ್ರದೇಶ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಮಸಿ ಬಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ಭೇಟಿಗೆ ತೆರಳಿದ ಟಿಎಂಸಿ ಸಂಸದರನ್ನು ನೆಲಕ್ಕುರುಳಿಸಿದ ಪೊಲೀಸ್
ಉತ್ತರ ಪ್ರದೇಶ ಪೊಲೀಸರ ನಡೆಯು ಅನುಮಾನಾಸ್ಪದವಾಗಿದೆ. ಆಕೆ ದಲಿತ ಕುಟುಂಬದ ಮಗಳು. ಪೊಲೀಸರು ತರಾತುರಿಯಿಂದ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈಗ ಇಡೀ ಕುಟುಂಬವನ್ನು ವಶದಲ್ಲಿರಿಸಿಕೊಂಡಿದೆ. ನಾವು ರಾಮ ಮಂದಿರದ ಬುನಾದಿಗೆ ಕಲ್ಲು ಹಾಕಿದ್ದೆವಷ್ಟೇ. ದೇಶದಲ್ಲಿ ರಾಮರಾಜ್ಯವನ್ನು ತರುವುದಾಗಿ ಹೇಳಿಕೊಂಡಿದ್ದೇವೆ. ಆದರೆ ಈ ಪ್ರಕರಣದಲ್ಲಿನ ಪೊಲೀಸರ ಅನುಮಾನಾಸ್ಪದ ನಡೆಗಳಿಂದ ನಿಮ್ಮ ಉತ್ತರ ಪ್ರದೇಶ ಸರ್ಕಾರ ಹಾಗೂ ಬಿಜೆಪಿ ವರ್ಚಸ್ಸಿಗೆ ಹಾನಿಯಾಗಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.