ಹತ್ರಾಸ್ ಅತ್ಯಾಚಾರ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ಸಿಎಂ ಯೋಗಿ
ಲಕ್ನೋ, ಅ. 4: ಹತ್ರಾಸ್ ಜಿಲ್ಲೆಯಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕಟಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಅವನೀಶ್ ಅವಸ್ತಿ, ಡಿಜಿಪಿ ಎಚ್ ಸಿ ಅವಸ್ತಿ ಅವರು ಸಂತ್ರಸ್ತೆಯ ಕುಟುಂಬದೊಡನೆ ಚರ್ಚೆ ನಡೆಸಿ, ಸರ್ಕಾರಕ್ಕೆ ವರದಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಕುರಿತಂತೆ ಸಿಎಂ ಕಚೇರಿಯಿಂದ ಅಧಿಕೃತವಾಗಿ ಟ್ವೀಟ್ ಮಾಡಲಾಗಿದೆ.
ಹತ್ರಾಸ್ ಅತ್ಯಾಚಾರ: ಎಸ್ಐಟಿ, ಸಿಬಿಐ ಮೇಲೆ ನಂಬಿಕೆ ಇಲ್ಲ, ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಲಿ
ಹತ್ರಾಸ್ ಜಿಲ್ಲೆ ಬೂಲ್ ಗರ್ಹಿ ಗ್ರಾಮದಲ್ಲಿ 19 ವರ್ಷ ವಯಸ್ಸಿನ ಯುವತಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ದೇಶದೆಲ್ಲೆಡೆ ವ್ಯಾಪಕ ಟೀಕೆ, ಪ್ರತಿಭಟನೆಗಳು ನಡೆದಿವೆ. ದೆಹಲಿಯಲ್ಲಿ ಮಂಗಳವಾರದಂದು ಮೃತಪಟ್ಟ ಯುವತಿಯ ಶವವನ್ನು ಗುಟ್ಟಾಗಿ ಸುಟ್ಟು ಹಾಕಲಾಗಿದೆ ಎಂಬ ಆರೋಪವನ್ನು ಪೊಲೀಸ್ ಇಲಾಖೆ ಮೇಲೆ ಹೊರೆಸಲಾಗಿದೆ.
ಹತ್ರಾಸ್ ಎಸ್ ಪಿ ವಿಕ್ರಾಂತ್ ವೀರ್, ರಾಮ್ಶದ್, ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ವರ್ಮಾ, ಸಬ್ ಇನ್ಸ್ ಪೆಕ್ಟರ್ ಜಗ್ವೀರ್ ಸಿಂಗ್ ಹಾಗೂ ಹೆಡ್ ಕಾನ್ಸ್ ಟೇಬಲ್ ಮಹೇಶ್ ಪಾಲ್ ಅವರನ್ನು ಶುಕ್ರವಾರದಂದು ಕರ್ತವ್ಯದಿಂದ ಅಮಾನತುಗೊಳಿಸಲಾಗಿದ್ದು, ಶಾಮ್ಲಿ ಎಸ್ಪಿ ವಿವೀತ್ ಜೈಸ್ವಾಲ್ ವರ್ಗಾವಣೆ ಮಾಡಲಾಗಿದೆ ಸಿಎಂ ಗೃಹ ಕಾರ್ಯದರ್ಶಿ ಅವನಿಶ್ ಅವಸ್ತಿ ಹೇಳಿದ್ದಾರೆ.
ಸಿಬಿಐ ತನಿಖೆ ಬೇಡ: ಪ್ರಕರಣದ ತನಿಖೆಗೆ ನಿಯೋಜಿಸಿರುವ ವಿಶೇಷ ತನಿಖಾ ತಂಡವು ಸರ್ಕಾರದ ಕೈಗೊಂಬೆಯಾಗಿದೆ. ಹೀಗಿರುವಾಗ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ಅಲ್ಲದೆ, ಇದರಲ್ಲಿ ಸಿಬಿಐ ತನಿಖೆ ನಡೆದರೂ ನಮಗೆ ವಿಶ್ವಾಸವಿಲ್ಲ. ಸುಪ್ರೀಂಕೋರ್ಟ್ನ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದೆ.