ಹತ್ರಾಸ್ ಸಂತ್ರಸ್ತೆ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದ ವರದಿ!
ಲಕ್ನೋ, ಅಕ್ಟೋಬರ್.05: ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ದೇಹದ ಯಾವುದೇ ಭಾಗದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಗುರುತು ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಗ್ರಾದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯವು 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೇಹದ ಮಾದರಿ ಪರೀಕ್ಷೆ ನಡೆಸಿತು. ಸೋಮವಾರ ಪರೀಕ್ಷೆಯ ಅಂತಿಮ ವರದಿ ನೀಡಿದ್ದು, ಸಂತ್ರಸ್ತೆಯ ದೇಹದಲ್ಲಿ ವೀರ್ಯ ಮಾದರಿ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅತ್ಯಾಚಾರ ಎಂದರೇನು: ಯುಪಿ ಎಡಿಜಿಪಿಗೆ ಕಾಂಗ್ರೆಸ್ ನಾಯಕಿ ಕಾನೂನಿನ ಪಾಠ
ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷಾ ವರದಿ ಬಗ್ಗೆ ಎಡಿಜಿ ಪ್ರಶಾಂತ್ ಕುಮಾರ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. "ಅತ್ಯಾಚಾರಕ್ಕೆ ಒಳಗಾಗಿದ್ದಾರರೆ ಎನ್ನಲಾದ ಯುವತಿಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗಿಲ್ಲ" ಎಂದು ಹೇಳಿದ್ದರು.
ಹತ್ರಾಸ್ ಅತ್ಯಾಚಾರ ಪ್ರಕರಣ ಬಗ್ಗೆ ಎಡಿಜಿಪಿ ಸ್ಪಷ್ಟನೆ
ಹತ್ರಾಸ್ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಮೃತದೇಹದ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದ ಗುರುತು ಪತ್ತೆಯಾಗಿಲ್ಲ. ಜೊತೆಗೆ ಯಾವುದೇ ವೀರ್ಯದ ಮಾದರಿಯು ಪತ್ತೆಯಾಗಿಲ್ಲ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಅತ್ಯಾಚಾರ ನಡೆದಿಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಯನ್ನೇ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಕುಮಾರ್ ಪುನರ್ ಉಚ್ಛರಿಸಿದ್ದಾರೆ.
ಅತ್ಯಾಚಾರವಲ್ಲ ಹಲ್ಲೆ ನಡೆಸಿರುವ ಬಗ್ಗೆ ಸಂತ್ರಸ್ತೆ ಹೇಳಿಕೆ
ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಸಂತ್ರಸ್ತೆ ನೀಡಿರುವ ಹೇಳಿಕೆ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಕುಮಾರ್ ಉಲ್ಲೇಖಿಸಿದರು. ಸಂತ್ರಸ್ತೆಯು ತಮ್ಮ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಅತ್ಯಾಚಾರ ನಡೆಸಿರುವ ಬಗ್ಗೆ ಸ್ವತಃ ಮೃತ ಸಂತ್ರಸ್ತೆಯೇ ಆರೋಪಿಸಿರಲಿಲ್ಲ ಎಂದು ತಿಳಿಸಿದ್ದಾರೆ.
11 ದಿನಗಳ ನಂತರ ಪ್ರಯೋಗಾಲಯಕ್ಕೆ ಮಾದರಿ ರವಾನೆ
ಉತ್ತರ ಪ್ರದೇಶ ಪೊಲೀಸರು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ದೇಹದಲ್ಲಿ ವೀರ್ಯದ ಮಾದರಿ ಪತ್ತೆಯಾಗಿಲ್ಲ ಎಂದಾಕ್ಷಣಕ್ಕೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಗೆ ತೀರ್ಮಾನಿಸುತ್ತಾರೆ ಎಂದು ಕಾನೂನು ತಜ್ಞರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರ ನಡೆದಿರುವುದನ್ನು ಸಾಬೀತುಪಡಿಸುವುದಕ್ಕೆ ವೀರ್ಯದ ಉಪಸ್ಥಿತಿಯೊಂದೇ ಸಾಕ್ಷಿಯಾಗಿರುವುದಿಲ್ಲ. ಏಕೆಂದರೆ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದು 11 ದಿನಗಳ ಬಳಿಕ ದೇಹದ ಮಾದರಿಯನ್ನು ಆಗ್ರಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಷ್ಟುದಿನಗಳವರೆಗೂ ವೀರ್ಯವು ದೇಹದೊಳಗೆ ಉಳಿದುಕೊಂಡಿರುವುದಿಲ್ಲ ಎಂದು ಹೇಳಿದ್ದಾರೆ.
ಎಡಿಜಿಪಿ ಕಾಂಗ್ರೆಸ್ ನಾಯಕಿಯ ಕಾನೂನು ಪಾಠ
ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗದ ಹಿನ್ನೆಲೆ ಆಕೆ ಅತ್ಯಾಚಾರಕ್ಕೆ ಒಳಗಾಗಿಲ್ಲ ಎಂಬ ಉತ್ತರ ಪ್ರದೇಶದ ಎಡಿಜಿ ಪ್ರಶಾಂತ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ಮುಖಂಡೆ ಸುಪ್ರಿಯಾ ಶ್ರೀನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1994ರಲ್ಲಿ ಬಬುಲ್ ನಾಥ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಒಮ್ಮೆ ನೋಡಿಕೊಳ್ಳಿ. "2013ರಲ್ಲಿ ಮಾಡಿದ 375ರ ತಿದ್ದುಪಡಿಯಲ್ಲಿ ಅತ್ಯಾಚಾರ ಎಂದರೇನು ಎನ್ನುವುದರ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿದೆ. ಆದರೆ ಎಡಿಜಿ ಪ್ರಶಾಂತ್ ಕುಮಾರ್ ಅವರೇ, ನೀವು ಇಂದಿಗೂ 30 ವರ್ಷಗಳ ಹಿಂದಿನ ಕಾನೂನಿನ ಬಗ್ಗೆಯೇ ಮಾತನಾಡುತ್ತಿದ್ದೀರಲ್ಲ" ಎಂದು ಪ್ರಶ್ನೆ ಮಾಡಿದ್ದಾರೆ.
ದೇಹದ ಮಾದರಿ ಸಂಗ್ರಹಿಸಿ 3 ದಿನದ ನಂತರ ರವಾನೆ
ವರದಿಯ ಪ್ರಕಾರ, ಅಲಿಘರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹತ್ರಾಸ್ ಅತ್ಯಾಚಾರದ ಸಂತ್ರಸ್ತೆಯ ದೇಹದ ಮಾದರಿಯನ್ನು ಕಳೆದ ಸಪ್ಟೆಂಬರ್.22ರಂದು ಸಂಗ್ರಹಿಸಲಾಗಿತ್ತು. ಅದಾಗಿ ಮೂರು ದಿನಗಳ ನಂತರ ಅಂದರೆ ಸಪ್ಟೆಂಬರ್.25ರಂದು ಆಗ್ರಾದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಯನ್ನು ರವಾನಿಸಲಾಗಿತ್ತು. ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಸಪ್ಟೆಂಬರ್.29ರಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.