ಜ್ಞಾನವಾಪಿ ಮಸೀದಿ; ಶಿವಲಿಂಗ ಪತ್ತೆಯಾದ ಸ್ಥಳ ನಿರ್ಬಂಧಿಸಲು ಆದೇಶ
ಲಕ್ನೋ, ಮೇ 16; ಜ್ಞಾನವಾಪಿ ಮಸೀದಿ ಸಮೀಕ್ಷೆ ಮುಕ್ತಾಯವಾಗಿದ್ದು, ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಸಮೀಕ್ಷಾ ಸಮಿತಿ ತಂಡದ ಸದಸ್ಯ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಅಂಜುಮನ್ ಇಂತೆ ಜಾಮಿಯಾ ಮಸೀದಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬಾಕಿ ಇರುವಾಗಲೇ ಶಿವಲಿಂಗ ಪತ್ತೆಯಾಗಿದೆ.
ಇಸ್ಲಾಮಿಕ್ ವುಜು ಅಥವಾ ಶುದ್ಧೀಕರಣ ಆಚರಣೆಗಳಿಗಾಗಿ ಬಳಸಲಾಗುವ ಕೊಳದಲ್ಲಿ ಶಿವಲಿಂಗ ಪತ್ತೆಯಾದ ನಂತರ ಆ ಜಾಗಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿದಾರರ ಪರ ವಕೀಲ ಹರಿಶಂಕರ್ ಜೈನ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಶಿವಲಿಂಗ ಪತ್ತೆಯಾಗಿರುವ ಜಾಗಕ್ಕೆ ಪ್ರವೇಶ ನಿರ್ಬಂಧಿಸುವಂತೆ ಆದೇಶ ನೀಡಿದೆ.
ಶಿವಲಿಂಗ ಪತ್ತೆಯಾಗಿರುವ ಪ್ರದೇಶಕ್ಕೆ ಜನರು ಪ್ರವೇಶಿಸದ ರೀತಿ ನಿರ್ಬಂಧ ವಿಧಿಸಬೇಕು ಎಂದು ಉತ್ತರ ಪ್ರದೇಶ ಕೋರ್ಟ್ನ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಆದೇಶ ನೀಡಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಮುಖ್ಯಸ್ಥರು ನಿರ್ಬಂಧಿಸಿದ ಪ್ರದೇಶಕ್ಕೆ ಯಾರೂ ಕೂಡ ಪ್ರವೇಶಿಸದಂತೆ ನೋಡಿಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿಯ ಹೊರಗೋಡೆ ಮತ್ತು ಇತರೆ ಹಳೆಯ ದೇವಾಲಯದ ಸಂಕೀರ್ಣದೊಳಗೆ ಇರುವ ದೇವರ ಮೂರ್ತಿಗಳಿಗೆ ವರ್ಷಪೂರ್ತಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಪ್ರಾರ್ಥನೆಗಾಗಿ ಬಾಗಿಲು ತೆರೆಯಲಾಗುತ್ತಿತ್ತು.
ಅರ್ಜಿದಾರರ ಮನವಿಯನ್ನು ಆಲಿಸಿದ್ದ ನ್ಯಾಯಾಲಯ ಜ್ಞಾನವಾಪಿ ಮಸೀದಿಯ ಮೂರು ಗುಮ್ಮಟಗಳು, ನೆಲಮಾಳಿಗೆ, ಮಸೀದಿಯ ಆವರಣ, ಕೊಳ ಸೇರಿದಂತೆ, ಮಸೀದಿ ಕಟ್ಟಡದ ವೀಡಿಯೋ ಸಮೀಕ್ಷೆ ಮಾಡಲು ಆದೇಶಿಸಿತ್ತು. ಈ ಸಮೀಕ್ಷೆಗಾಗಿ ನ್ಯಾಯಾಲಯದ ಆಯುಕ್ತರನ್ನು ನೇಮಕ ಮಾಡಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಮಸೀದಿಯ ಸಮಿತಿಯು ನ್ಯಾಯಾಲಯ ಆಯುಕ್ತರು ಪೂರ್ವಾಗ್ರಹ ಪೀಡಿತರಾಗಿದ್ದು ಅವರನ್ನು ಬದಲಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗುರುವಾರ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಸಮೀಕ್ಷೆ ಮುಂದುವರೆದಿತ್ತು.
ಸೋಮವಾರ ಸಮೀಕ್ಷಾ ಸಮಿತಿ ತನ್ನ ಕಾರ್ಯಪೂರ್ಣಗೊಳಿಸಿದೆ. ಮಂಗಳವಾರ ಚಿತ್ರೀಕರಿಸಿರುವ ಮಸೀದಿಯ ಸಂಪೂರ್ಣ ವಿವರವನ್ನು ಸಮೀಕ್ಷಾ ಸಮಿತಿ ಅಲಹಾಬಾದ್ ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಅರ್ಜಿ ವಿಚಾರಣೆ; ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಮಂಗಳವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹಿಂದೂ ಭಕ್ತರು ಹೂಡಿರುವ ಮೊಕದ್ದಮೆಯ ಮೇಲೆ ಮಸೀದಿಯ ಸಮೀಕ್ಷೆಗೆ ವಾರಣಾಸಿಯ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ಸಮಿತಿಯು ಪ್ರಶ್ನಿಸಿದೆ.