ಮಸೀದಿ ವಿಡಿಯೋ ಸಾರ್ವಜನಿಕಗೊಳಿಸುವಂತಿಲ್ಲ: ಕೋರ್ಟ್
ವಾರಣಾಸಿ ಮೇ 31: ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿದ ಸಮೀಕ್ಷೆ ಆಯೋಗವು ತೆಗೆದ ವಿಡಿಯೋ ಮತ್ತು ಛಾಯಾಚಿತ್ರಗಳ ಪ್ರತಿಗಳನ್ನು ಕಕ್ಷಿದಾರರು ಪಡೆಯಲು ವಾರಣಾಸಿ ನ್ಯಾಯಾಲಯ ಅನುಮತಿ ನೀಡಿದೆ.
ಸಮೀಕ್ಷೆಯ ವರದಿ, ವಿಡಿಯೋಗಳು, ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಮೇ 19ರಂದು ಸಲ್ಲಿಸಲಾಗಿತ್ತು. ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಕಮಿಷನರ್ ವರದಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಮಾತ್ರ ಕಕ್ಷಿದಾರರು ವಿಡಿಯೋಗಳು, ಛಾಯಾಚಿತ್ರಗಳನ್ನು ಬಳಸಬಹುದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ವಿಡಿಯೋ, ಚಿತ್ರಗಳನ್ನುಸಾರ್ವಜನಿಕಗೊಳಿಸುವಂತಿಲ್ಲ ಎಂದು ಮೇ 30ರ ಆದೇಶದಲ್ಲಿ ವಾರಣಾಸಿ ನ್ಯಾಯಾಲಯ ತಿಳಿಸಿದೆ.
Breaking-'ಶಿವಲಿಂಗ' ನಿಂದನೆ: ಪ್ರೊಫೆಸರ್ ರತನ್ ಲಾಲ್ಗೆ ಜಾಮೀನು
ಪ್ರಕರಣದ ಕಕ್ಷಿದಾರರಿಗೆ ಮಾತ್ರ ವಿಡಿಯೋ ಮತ್ತು ಛಾಯಾಗ್ರಹಣದ ಪ್ರತಿಗಳನ್ನು ಒದಗಿಸಬೇಕು ಮತ್ತು ಕಕ್ಷಿದಾರರು ಅದನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಸಾರ್ವಜನಿಕಗೊಳಿಸುವುದಿಲ್ಲ ಅಥವಾ ಅನಧಿಕೃತ ಬಳಕೆಗಾಗಿ ಹಂಚಿಕೊಳ್ಳುವುದಿಲ್ಲ ಎಂದು ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Gyanvapi Controversy; 1991ರ ಕಾಯ್ದೆ ಜ್ಞಾನವಾಪಿ ಮಸೀದಿಗೆ ರಕ್ಷಾಕವಚವೇ?
ಕಮೀಷನರ್ ವರದಿಯ ವಿಡಿಯೋ ಮತ್ತು ಛಾಯಾಗ್ರಹಣದ ಪ್ರತಿಗಳನ್ನು ಕೋರಿ 5 ಹಿಂದೂ ಮಹಿಳಾ ಭಕ್ತರು ಸಲ್ಲಿಸಿರುವ ಅರ್ಜಿಯ ಸಂಬಂಧ ಈ ಆದೇಶ ಬಂದಿದೆ. ಆದರೆ ವಿಡಿಯೋವನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆಯನ್ನು ಮಸೀದಿ ಸಮಿತಿ ವಿರೋಧಿಸಿತ್ತು.
ಸರ್ವೆ ವಿಡಿಯೋ ವೈರಲ್
ನ್ಯಾಯಾಲಯದ ಅನುಮತಿಯಿಲ್ಲದೇ ಸಾರ್ವಜನಿಕಗೊಳಿಸುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಕೆಯಾದ ನಂತರ 5 ಹಿಂದೂ ಮಹಿಳಾ ಭಕ್ತರಿಗೆ ಸೋಮವಾರ ವಿಡಿಯೋ ಪ್ರತಿಗಳನ್ನು ಹಸ್ತಾಂತರಿಸಲಾಯಿತು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗಿದ್ದು, ಸರ್ವೆ ವಿಡಿಯೋಗಳು ವೈರಲ್ ಆಯಿತು. ಹಲವು ಸುದ್ದಿ ವಾಹಿನಿಗಳು ಸರ್ವೆ ವಿಡಿಯೋಗಳನ್ನು ಪ್ರಸಾರ ಮಾಡಿತು.
ಔರಂಗಜೇಬರ ಕಾಲದ ಮಸೀದಿ
17ನೇ ಶತಮಾನದಲ್ಲಿ ಮೊಗಲ್ ದೊರೆ ಔರಂಗಜೇಬನ ಕಾಲದಲ್ಲಿ ಜ್ಞಾನವಾಪಿ ಮಸೀದಿ ಕಟ್ಟಲಾಗಿದೆ. ಆದರೆ, ಕಾಶಿ ವಿಶ್ವನಾಥ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದ. ಕಾಶಿ ವಿಶ್ವನಾಥ ದೇವಸ್ಥಾನದ ಬದಿಯಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವರುಗಳ ವಿಗ್ರಹಗಳಿದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಕೋರಿ ಐವರು ಮಹಿಳೆಯರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು.
ವಿವಾದಿತ ಸ್ಥಳ ಸೀಲ್
ಸ್ಥಳೀಯ ವಾರಣಾಸಿ ನ್ಯಾಯಾಲಯ ಸರ್ವೆ ಕಮಿಷನ್ ನೇಮಿಸಿ, ಮಸೀದಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದರಂತೆ ಮೇ 19ರಂದು ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಸರ್ವೆ ಕಮಿಷನ್ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವ ಲಿಂಗ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಸೀದಿ ಸ್ಥಳವನ್ನು ಸೀಲ್ ಮಾಡಲಾಗಿದೆ. ಸೀಲ್ ಮಾಡಲಾದ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಕೋರ್ಟ್ ಈ ಹಿಂದೆ ಆದೇಶ ನೀಡಿದೆ.
ಮಸೀದಿಯಲ್ಲಿ ಶಿವಲಿಂಗ ಪತ್ತೆ
ವಾರಣಾಸಿ ನ್ಯಾಯಾಲಯದ ಸರ್ವೆ ಆದೇಶವನ್ನು ಪಶ್ನಿಸಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇ 17ರಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಗ್ಯಾನವಾಪಿ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ರಕ್ಷಿಸಲು ವಾರಣಾಸಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ಆದೇಶವು ನಮಾಜ್ ಮಾಡಲು ಮತ್ತು ಧಾರ್ಮಿಕ ಆಚರಣೆಗಳಿಗೆ ಮಸೀದಿಯನ್ನು ಪ್ರವೇಶಿಸುವ ಮುಸ್ಲಿಮರ ಹಕ್ಕನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಂತರ ಮೇ 20ರಂದು, ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಾರಣಾಸಿ ನ್ಯಾಯಾಲಯಕ್ಕೆ ವರ್ಗಾಯಿಸಿದೆ.