ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಶಿಲ್ಪಗಳು ಪತ್ತೆಯಾಗಿವೆ: ಅಜಯ್ ಕುಮಾರ್ ಮಿಶ್ರಾ
ಲಕ್ನೋ, ಮೇ 19: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರು, ದೇವತೆಗಳ ಶಿಲ್ಪಗಳು ಮತ್ತು ಹಿಂದೂ ಧರ್ಮದ ನಂಬಿಕೆಗಳಿಗೆ ಸಂಬಂಧಿಸಿದ ಇತರೆ ರಚನೆಗಳು ಕಂಡುಬಂದಿವೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿಕೆ ಮಾಡಲಾಗಿದೆ.
ಗುರುವಾರ ವಾರಣಾಸಿ ನ್ಯಾಯಾಲಯಕ್ಕೆ ವಕೀಲ ಅಜಯ್ ಕುಮಾರ್ ಮಿಶ್ರಾ ವರದಿ ಸಲ್ಲಿಕೆ ಮಾಡಿದರು. ಕಾಶಿ ವಿಶ್ವನಾಥ ಮಂದಿರ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯ ನೇಮಿಸಿರುವ ಆಯೋಗ ವರದಿ ಸಲ್ಲಿಸಿದೆ. ಮಂಗಳವಾರ ಸಮೀಕ್ಷಾ ವರದಿ ಸಲ್ಲಿಸಬೇಕಾಗಿದ್ದ ಆಯೋಗ ಎರಡು ದಿನಗಳು ಹೆಚ್ಚಿನ ಕಾಲವಕಾಶ ಕೇಳಿತ್ತು.
ಮೇ 20ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಜ್ಞಾನವಾಪಿ ಪ್ರಕರಣ ವಿಚಾರಣೆ
ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾದ ಬೆನ್ನಲ್ಲೇ ಮಿಶ್ರಾ ಈ ಹೇಳಿಕೆ ನೀಡಿದ್ದಾರೆ. ಜ್ಞಾನವಾಪಿ ಮಸೀದಿ-ಶೃಂಗಾರಗೌರಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ವಾರಣಾಸಿ ನ್ಯಾಯಾಲಯದಿಂದ ಆಯುಕ್ತರಾಗಿ ಮಿಶ್ರಾ ನೇಮಕವಾಗಿದ್ದರು. ಆದರೆ ಸಮೀಕ್ಷೆ ವೇಳೆ ಮಾಹಿತಿ ಸೋರಿಕೆ ಆರೋಪದ ಮೇಲೆ ಅವರನ್ನು ತೆಗೆದುಹಾಕಲಾಗಿತ್ತು.
ಹಿಂದೂ ದೇವರ ಶಿಲ್ಪಗಳು ಪತ್ತೆ; "ವಿವಾದಿತ ಪ್ರದೇಶದ ತಡೆಗೋಡೆಯ ಹೊರಗಡೆ ಹಳೆಯ ದೇವಾಲಯದ ಅವಶೇಷಗಳು ಕಂಡುಬಂದಿವೆ. ಹಿಂದೂ ದೇವರು, ದೇವತೆಗಳ ಶಿಲ್ಪಗಳು ಮತ್ತು ಕಮಲದ ಮಾದರಿಗಳೂ ಸಹ ಕಂಡುಬಂದಿವೆ. ಮಧ್ಯದಲ್ಲಿ ಶೇಷನಾಗ ಮತ್ತು ನಾಗ್ಫಾನ್ನ ಕಲ್ಲಿನ ಶಿಲ್ಪಗಳು ಪತ್ತೆಯಾಗಿವೆ. ಮಸೀದಿಯ ಆವರಣದಲ್ಲಿ ಪತ್ತೆಯಾಗಿವೆ'' ಎಂದು ವಕೀಲ ಮಿಶ್ರಾ ಸಲ್ಲಿಸಿರುವ ವರದಿಯಲ್ಲಿ ತಿಳಿಸಿಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿ ನಮಾಜ್ಗೆ ಅಡ್ಡಿಯಾಗಬಾರದು: ಸುಪ್ರೀಂಕೋರ್ಟ್ ಸೂಚನೆ
ನಾಲ್ಕು ವಿಗ್ರಹಗಳಂತ ರಚನೆಗಳು ಕಂಡುಬಂದಿದ್ದು, ವಿಗ್ರಹಗಳ ಮೇಲೆ ಸಿಂಧೂರದ ಗುರುತು ಇರುವುದು ಸಹ ಪತ್ತೆಯಾಗಿದೆ ಎಂದಿದ್ದಾರೆ. ದೀಪಗಳನ್ನು ಬೆಳಗಿಸುವ ವ್ಯವಸ್ಥೆಗಳಿರುವಂತೆ ಕಾಣುತ್ತಿದೆ. ಮಸೀದಿಯ ಹಿಂಭಾಗದ ಪಶ್ಚಿಮ ಗೋಡೆಯಲ್ಲಿ ಕಲಾತ್ಮಕ ಮಾದರಿಯ ಕಲ್ಲಿನ ಚಪ್ಪಡಿಗಳು ಇರುವುದಾಗಿ ಹೇಳಿದ್ದಾರೆ.
ವಕೀಲ ಅಜಯ್ ಮಿಶ್ರಾ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಿ ಸ್ಥಳೀಯ ನ್ಯಾಯಾಲಯ ಅವರನ್ನು ಸಮೀಕ್ಷಾ ಸಮಿತಿಯ ಆಯುಕ್ತ ಸ್ಥಾನದಿಂದ ವಜಾಗೊಳಿಸಿತ್ತು. ನ್ಯಾಯಾಲಯ ನೇಮಿಸಿದ್ದ ಆಯುಕ್ತರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಚಿತ್ರೀಕರಣ, ಸಮೀಕ್ಷೆ ಮಾಡಲಾಗಿತ್ತು. ಸೋಮವಾರ ಸಮೀಕ್ಷೆ ಮುಕ್ತಾಯವಾಗಿತ್ತು, ಗುರುವಾರ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ಪುನಾರಂಭಿಸಲು ಸುಪ್ರೀಂಕೋರ್ಟ್ ಸಿದ್ಧವಾಗಿದ್ದು, ನ್ಯಾಯಾಯಲದಿಂದ ಆಯುಕ್ತರಾಗಿ ನೇಮಕಗೊಂಡಿದ್ದ ಮಾಜಿ ಕಮೀಷನರ್ ಅಜಯ್ ಕುಮಾರ್ ಮಿಶ್ರಾ ನ್ಯಾಯಾಲಯಕ್ಕೆ ಮಸೀದಿ ಸಮೀಕ್ಷೆಯ ವರದಿ ಸಲ್ಲಿಸಿದ್ದಾರೆ. ಮಸೀದಿಯ ವಿಡಿಯೋ ಸಮೀಕ್ಷೆ ಮಾಡಿರುವುದು ಪೂಜಾ ಸ್ಥಳಗಳ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಸಮೀಕ್ಷೆ ವೇಳೆ ಪತ್ತೆಯಾಗಿದ್ದ 'ಶಿವಲಿಂಗ'; ಸಮೀಕ್ಷೆ ವೇಳೆಯಲ್ಲಿ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 'ಶಿವಲಿಂಗ' ಪತ್ತೆಯಾಗಿದೆ, ಮಾತ್ರವಲ್ಲದೆ ಹಲವು ಮಹತ್ವದ ಪುರಾವೆಗಳು ಕೂಡ ಲಭ್ಯವಾಗಿದೆ ಎಂದು ಅರ್ಜಿದಾರ ಸೋಹನ್ ಲಾಲ್ ಆರ್ಯ ಹೇಳಿದ್ದರು. ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾದ ಪ್ರದೇಶಕ್ಕೆ ಜನರ ಓಡಾಟ ನಿರ್ಬಂಧಿಸುವಂತೆ ವಾರಣಾಸಿ ನ್ಯಾಯಾಲಯ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.
ಮಂಗಳವಾರ ಅರ್ಜಿದಾರರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಪ್ರದೇಶಕ್ಕೆ ರಕ್ಷಣೆ ನೀಡಬೇಕು ಮತ್ತು ಮಸೀದಿಯಲ್ಲಿ ಮುಸ್ಲಿಂ ಸಮಾಜದವರು ನಮಾಜ್ ಮಾಡಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿತ್ತು.