ನ್ಯಾಯಾಲಯ ನೇಮಿಸಿದ ತಂಡದಿಂದ ಜ್ಞಾನವಾಪಿ ಮಸೀದಿ ಸಮೀಕ್ಷೆ ವಿಫಲ
ವಾರಣಾಸಿ ಮೇ 8: ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇಯನ್ನು ನಡೆಸಲು ಸ್ಥಳೀಯ ನ್ಯಾಯಾಲಯ ನೇಮಿಸಿದ ವಕೀಲ ಕಮಿಷನರ್ ಅಜಯ್ ಕುಮಾರ್ ಮತ್ತು ಅವರ ತಂಡ ವಿಫಲವಾಗಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರು ನ್ಯಾಯಾಲಯದ ಆದೇಶವನ್ನು ವಿರೋಧಿಸಿದ್ದಾರೆ. ಸರ್ವೆ ಮಾಡಲು ಅಜಯ್ ಕುಮಾರ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿ ಸಮಿತಿಯು ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದೆ. ಈ ವಿಷಯವನ್ನು ಆಲಿಸಿದ ನಂತರ, ನ್ಯಾಯಾಲಯವು ಮೇ 9 ರಂದು ತಮ್ಮ ವಾದವನ್ನು ಮಂಡಿಸಲು ಫಿರ್ಯಾದಿದಾರರು ಮತ್ತು ವಕೀಲ ಕಮಿಷನರ್ಗೆ ಸೂಚಿಸಿದೆ.
"ನಾವು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ, ವಕೀಲ ಕಮಿಷನರ್ ಅಜಯ್ ಕುಮಾರ್ ಅವರನ್ನು ತೆಗೆದುಹಾಕಲು ಅಥವಾ ಹಿರಿಯ ವಕೀಲರನ್ನು ನೇಮಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದೇವೆ. ಏಕೆಂದರೆ (ಮೊದಲ ದಿನ) ಅವರು ಅರ್ಜಿದಾರರ ವಕೀಲರ ಇಚ್ಛೆಯಂತೆ ಸಮೀಕ್ಷೆಯ ಪ್ರಕ್ರಿಯೆಯನ್ನು ನಡೆಸಿದರು"ಎಂದು ಮಸೀದಿ ಸಮಿತಿಯ ವಕೀಲ ಅಭಯ್ ನಾಥ್ ಯಾದವ್ ಆರೋಪಿಸಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದ: ವೀಡಿಯೋಗ್ರಫಿ ಸಮೀಕ್ಷೆಗೆ ಮುಸ್ಲಿಮರು ವಿರೋಧ, ಪ್ರತಿಭಟನೆ
ಆದರೆ ಮಸೀದಿ ಆಡಳಿತ ಸಮಿತಿಗೆ ಸಂಬಂಧಿಸಿದ ಜನರು ಸಮೀಕ್ಷಾ ತಂಡವನ್ನು ಆವರಣಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ರಾಖಿ ಸಿಂಗ್ ಮತ್ತು ಇತರ ನಾಲ್ವರ ವಕೀಲರಾದ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
ಆಗಸ್ಟ್ 2021 ರಲ್ಲಿ ಕಾಶಿ ವಿಶ್ವನಾಥ-ಜ್ಞಾನವಾಪಿ ಸಂಕೀರ್ಣದಲ್ಲಿ ಮಾ ಶೃಂಗಾರ್ ಗೌರಿಯ ದೈನಂದಿನ ಪೂಜೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಸ್ಥಳ ಪರಿಶೀಲನೆಗೆ ಸೂಚನೆಯನ್ನು ನೀಡಿದೆ. ಆದರೆ ಜ್ಞಾನ್ವಾಪಿ ಸಂಕೀರ್ಣದಲ್ಲಿನ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಏಪ್ರಿಲ್ 30 ರಂದು ಸಮೀಕ್ಷೆಗಾಗಿ ಮಸೀದಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದರು.
ಆದರೆ ನಿನ್ನ ಶುಕ್ರವಾರ ಎಲ್ಲ ಪಕ್ಷಗಳ ಸಮ್ಮುಖದಲ್ಲಿ ಪೊಲೀಸ್ ಬಿಗಿ ಭದ್ರತೆಯ ನಡುವೆ ಸಮೀಕ್ಷೆ ಆರಂಭಗೊಂಡಿತ್ತು. ಶನಿವಾರವೂ ಅಜಯ್ ಕುಮಾರ್ ಅವರು ಮತ್ತು ಅವರ ತಂಡದೊಂದಿಗೆ ಸಂಕೀರ್ಣದಲ್ಲಿರುವ ಅನೇಕ ದೇವತೆಗಳ ಸಮೀಕ್ಷೆ ಮತ್ತು ವೀಡಿಯೊಗಳನ್ನು ಮಾಡಲು ಆಗಮಿಸಿದರು. ಆದರೆ ನ್ಯಾಯಾಲಯದ ನಿರ್ದೇಶನದೊಂದಿಗೆ ಆಗಮಿಸಿದ ಮಸೀದಿ ಆಡಳಿತದ ವಕೀಲರು ಸ್ಥಳಪರಿಶೀಲನೆಯನ್ನು ವಿರೋಧಿಸಿದ್ದಾರೆ. ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ವಕೀಲರು ಶುಕ್ರವಾರದಂದು ಸಮೀಕ್ಷೆ ನಡೆಸಿದ ರೀತಿಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಶನಿವಾರ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ಈ ವಿಚಾರ ಮತ್ತೆ ನ್ಯಾಯಾಲಯದ ಮುಂದಿಟ್ಟಾಗ ನ್ಯಾಯಾಲಯವು ಮೇ 9 ರಂದು ತಮ್ಮ ವಾದವನ್ನು ಮಂಡಿಸಲು ಫಿರ್ಯಾದಿದಾರರು ಮತ್ತು ವಕೀಲ ಕಮಿಷನರ್ಗೆ ಸೂಚಿಸಿದೆ. ಹೀಗಾಗಿ ಸ್ಥಳ ಪರಿಶೀಲನೆ ಸದ್ಯಕ್ಕೆ ನಿಲ್ಲಿಸಲಾಗಿದೆ.
ಕುಮಾರ್ ಮತ್ತು ಅವರ ತಂಡ ಸಮೀಕ್ಷೆಗೆ ಆಗಮಿಸಿದಾಗ, ಕಾಶಿ ವಿಶ್ವನಾಥ್-ಜ್ಞಾನವಾಪಿ ಸಂಕೀರ್ಣದ ಹೊರಗೆ ಗುಂಪು ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಗುಂಪನ್ನು ಚದುರಿಸಿದರು ಮತ್ತು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡರು. ಶುಕ್ರವಾರವೂ ಸ್ಥಳದ ಹೊರಗೆ ಪ್ರತಿಭಟನೆ ನಡೆಸಲಾಯಿತು. ಈ ಪ್ರಕರಣದಲ್ಲಿ ಅಜಯ್ ಕುಮಾರ್ ಅವರನ್ನು ಅಡ್ವೊಕೇಟ್ ಕಮಿಷನರ್ ಆಗಿ ಏಪ್ರಿಲ್ 8 ರಂದು ನ್ಯಾಯಾಲಯ ನೇಮಿಸಿತ್ತು.