ಉತ್ತರ ಪ್ರದೇಶದಲ್ಲಿ 'ಲವ್ ಜಿಹಾದ್' ವಿರುದ್ಧ ಸಿಎಂ ಸಮರ?
ಲಕ್ನೋ, ಸಪ್ಟೆಂಬರ್.18: ಉತ್ತರ ಪ್ರದೇಶದಲ್ಲಿ 'ಲವ್ ಜಿಹಾದ್' ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕೆ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಮುಸ್ಲಿಂ ಪುರುಷರು ಹಿಂದೂ ಹುಡುಗಿಯರಿಗೆ ಆಮಿಷವೊಡ್ಡಿ ತಮ್ಮ ಜಾತಿಯ ವಿಚಾರವನ್ನು ರಹಸ್ಯವಾಗಿಟ್ಟು 'ಲವ್ ಜಿಹಾದ್' ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆ ಕಠಿಣ ಕಾನೂನು ರಚಿಸುವುದಕ್ಕೆ ಸರ್ಕಾರವು ತೀರ್ಮಾನಿಸಿದೆ.
'ಲವ್ ಜಿಹಾದ್'ನಿಂದ ನಮ್ಮ ಯುವತಿಯರ ರಕ್ಷಿಸಿ: ಕೇರಳ ಕ್ರೈಸ್ತರ ಮೊರೆ
ಉತ್ತರ ಪ್ರದೇಶದ ಖಾನಪುರ್ ಮತ್ತು ಮೀರತ್ ನಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಧಾರ್ಮಿಕ ಮತಾಂತರದ ವಿಚಾರದ ರಾಜ್ಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಧಾರ್ಮಿಕ ಮತಾಂತರ ಬಗ್ಗೆ ತೀವ್ರ ಚರ್ಚೆ ಸಾಧ್ಯತೆ
ರಾಜ್ಯದಲ್ಲಿ ಧಾರ್ಮಿಕ ಮತಾಂತರ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಮುಂದಿನ ವಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರ ಪ್ರದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಧಾರ್ಮಿಕ ಮತಾಂತರ ವಿಚಾರವನ್ನೂ ಪ್ರಸ್ತಾಪಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನಿನ ಬಗ್ಗೆ ಚರ್ಚೆ
ದೇಶದ ಹಲವು ರಾಜ್ಯಗಳು ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವ ಬಗ್ಗೆ ಆಲೋಚಿಸುತ್ತಿವೆ. ಇದರಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಒತ್ತಾಯಪೂರ್ವಕ ಮತ್ತು ಆಮಿಷಕ್ಕೆ ಬಲಿಯಾಗಿ ಮತಾಂತರ ಹೊಂದುವುದನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಚಿಂತಿಸಲಾಗುತ್ತಿದೆ. ನೇರವಾಗಿ ಅಥವಾ ಮೋಸ, ಆಮಿಷ, ಒತ್ತಡದ ಮೂಲಕ ಪರೋಕ್ಷವಾಗಿ ಮತಾಂತರಕ್ಕೆ ಪ್ರೇರೇಪಿಸುವುದಕ್ಕೆ ಕಡಿವಾಣ ಬೀಳಲಿದೆ.
ಮತಾಂತರ ವಿರೋಧಿ ಕಾನೂನಿಗೆ ತೊಡಕು
ಉತ್ತರ ಪ್ರದೇಶ ಸರ್ಕಾರವು ಜಾರಿಗೊಳಿಸಲು ಚಿಂತಿಸುತ್ತಿರುವ ಮತಾಂತರ ವಿರೋಧಿ ಕಾನೂನು ಪ್ರಕ್ರಿಯೆಯು ಸಾಕಷ್ಟು ತೊಡಕುಗಳನ್ನು ಹೊಂದಿದೆ. ಇಂಥದಲ್ಲೇ ಮತಾಂತರ ಕಾನೂನುಗಳು ಈಗಾಗಲೇ ದೇಶದಲ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ ಎಂದು ತಿಳಿದು ಬಂದಿದೆ.
ದೇಶದ ಈ ರಾಜ್ಯಗಳಲ್ಲಿ ಮತಾಂತರ ವಿರೋಧಿ ಕಾನೂನು
ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮತಾಂತರ ವಿರೋಧಿ ಕಾಯ್ದೆಯು ಎಂಟು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅರುಣಾಚಲ ಪ್ರದೇಶ, ಒಡಿಶಾ, ಮಧ್ಯ ಪ್ರದೇಶ, ಛತ್ತೀಸ್ ಗಢ್, ಗುಜರಾತ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಈ ಕಾನೂನು ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ.