ಬಿಜೆಪಿಯ ಮಾಜಿ ಕೇಂದ್ರ ಸಚಿವ ಈ ಬಾರಿ ಚುನಾವಣೆ ಸ್ಪರ್ಧಿಸುತ್ತಿಲ್ಲ
ದಿಯೋರಾ, ಮಾರ್ಚ್ 21: ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಉತ್ತರಪ್ರದೇಶದಾ ದಿಯೋರಾ ಕ್ಷೇತ್ರದಿಂದ ಮಿಶ್ರಾ ಅವರು ಕಣಕ್ಕಿಳಿಯುವ ಸಾಧ್ಯತೆಯಿತ್ತು.
'ನಾನು ಈ ಬಾರಿ ಸ್ಪರ್ಧಿಸುತ್ತಿಲ್ಲ, ಪಕ್ಷವು ನನಗೆ ಅನೇಕ ಜವಾಬ್ದಾರಿಯನ್ನು ನೀಡಿದೆ. ನನ್ನ ಜವಾಬ್ದಾರಿ ನಿಭಾಯಿಸಲು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ, ಚುನಾವಣೆ ಬಗ್ಗೆ ಗಮನ ಹರಿಸಲು ಸಾಧ್ಯವಾಗಲ್ಲ 'ಎಂದು ಕಲ್ ರಾಜ್ ಮಿಶ್ರಾ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ 2014ರ ಮೇ 26 ರಿಂದ ಸೆಪ್ಟೆಂಬರ್ 2017 ಅವಧಿಯಲ್ಲಿ ಕಲ್ ರಾಜ್ ಮಿಶ್ರಾ ಅವರು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಇಲಾಖೆ ಸಚಿವರಾಗಿದ್ದರು.
77 ವರ್ಷ ವಯಸ್ಸಿನ ಕಲ್ ರಾಜ್ ಮಿಶ್ರಾ ಅವರು ಹಾಲಿ ಸಂಸತ್ತಿನ ಸ್ಥಾನೀಯ ಸಮಿತಿ ಮುಖ್ಯಸ್ಥರಾಗಿದ್ದಾರೆ. ರಾಜ್ಯಸಭಾ ಸದಸ್ಯ, ಲಕ್ನೋ ಪೂರ್ವ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿದ್ದರು. ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.
ಉತ್ತರಪ್ರದೇಶದ ಪ್ರಭಾವಿ ಬ್ರಾಹ್ಮಣ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡಿರುವ ಮಿಶ್ರಾ ಅವರು ಮಿದು ಭಾಷಿಯಾದರೂ ಸಂಘಟನಾ ಚತುರಾಗಿ ಗುರುತಿಸಿಕೊಂಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಕರ ಸೇವಕರನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.