ಬಲವಂತವಾಗಿ ದೇವರನಾಮ ಹೇಳಿಸೋದು ಅಪಾಯಕಾರಿ ಟ್ರೆಂಡ್: ಮಾಯಾ
ಲಕ್ನೋ, ಜುಲೈ 15: ಬಲವಂತವಾಗಿ ದೇವರ ನಾಮ ಹೇಳಿಸುವ ಅಪಾಯಕಾರಿ ಟ್ರೆಂಡ್ ಇತ್ತೀಚೆಗೆ ಆರಂಭವಾಗಿದೆ. ದೇಶದ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಕಳವಳ ವ್ಯಕ್ತಪಡಿಸಿದರು.
"ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ದೇವರ ನಾಮವನ್ನು ಬಲವಂತವಾಗಿ ಹೇಳಿಸುವ ಘಟನೆಗಳು ನಡೆಯುತ್ತಿವೆ. ಇದು ಅಕ್ಷಮ್ಯ. ಇಂಥ ಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಭ್ರಾತೃತ್ವದ ಭಾವನೆ ಉಳಿಯುತ್ತದೆ" ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಬಾಘ್ಪಟ್ನಲ್ಲಿ ಜೈ ಶ್ರೀರಾಮ್ ಪಠಿಸುವಂತೆ ಒತ್ತಾಯಿಸಿ ಮೌಲ್ವಿಗೆ ಥಳಿತ
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಾಫ್ಘಟ್ ಎಂಬಲ್ಲಿ ಮೌಲ್ವಿಯೊಬ್ಬರ ಬಳಿ ಜೈ ಶ್ರೀರಾಮ್ ಎಂದು ಪಠಿಸುವಂತೆ ಒತ್ತಾಯಿಸಿ, ಅವರು ಪಠಿಸದ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿತ್ತು.
ಕಾನ್ಪುರದಲ್ಲೂ ಇಂಥದೇ ಘಟನೆ ನಡೆದಿತ್ತು. ಜೈಶ್ರೀರಾಮ್ ಎಂದು ಮಂತ್ರ ಪಠಿಸುವಂತೆ ಮುಸ್ಲಿಂ ಬಾಲಕನೊಬ್ಬನನ್ನು ಒತ್ತಾಯಿಸಲಾಗಿತ್ತು. ಆತ ಒಪ್ಪದಿದ್ದಾಗ ಆತನ ಟೋಪಿ ತಗೆದು, ಅನುಚಿತವಾಗಿ ವರ್ಥಿಸಿ, ಆತನನನ್ನು ಥಳಿಸಲಾಗಿತ್ತು.
ಜೈ ಶ್ರೀರಾಮ್ ಎಂದು ಹೇಳದ ಮುಸ್ಲಿಂ ಯುವಕನಿಗೆ ಪೆಟ್ಟು
ಇತ್ತೀಚೆಗೆ ಜಾರ್ಖಂಡ್ ನಲ್ಲಿ ತಬ್ರೇಝ್ ಅನ್ಸಾರಿ ಎಂಬ ಯುವಕನನ್ನು ಬೈಕ್ ಕಳ್ಳನೆಂದು ಆರೋಪಿಸಿ ಕಟ್ಟಿ ಹಾಕಿ, ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ, ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಗಾಯಗೊಂಡದ್ದ ತಬ್ರೇಝ್ ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದ.